ಪಾಕಿಸ್ತಾನಕ್ಕೆ ಮುಟ್ಟಿ ನೋಡಿಕೊಳ್ಳುವಂಥ ಎದುರೇಟು; ಖಾತ್ರಿ ಪಡಿಸಿದ ಸೇನಾ ಮುಖ್ಯಸ್ಥರು
Recommended Video
ನವದೆಹಲಿ, ಅಕ್ಟೋಬರ್ 20: ಆರರಿಂದ ಹತ್ತು ಮಂದಿ ಪಾಕಿಸ್ತಾನಿ ಸೈನಿಕರು ಹತ್ಯೆಯಾಗಿದ್ದಾರೆ ಹಾಗೂ ಉಗ್ರಗಾಮಿಗಳ ಮೂರು ನೆಲೆಗಳನ್ನು ನಾಶ ಮಾಡಲಾಗಿದೆ. ಭಾರತದೊಳಕ್ಕೆ ಉಗ್ರರನ್ನು ನುಸುಳಲು ಪಾಕಿಸ್ತಾನ ಯತ್ನಿಸಿದ ವೇಳೆ ನಡೆಸಿದ ಪ್ರತೀಕಾರದ ದಾಳಿಯಲ್ಲಿ ಈ ಘಟನೆ ಸಂಭವಿಸಿದೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಭಾನುವಾರ ಖಾತ್ರಿ ಪಡಿಸಿದ್ದಾರೆ.
ಜನರಲ್ ಬಿಪಿನ್ ರಾವತ್ ಮಾತನಾಡಿ, ಆರರಿಂದ ಹತ್ತು ಪಾಕಿಸ್ತಾನಿ ಸೈನಿಕರ ಹತ್ಯೆಯಾಗಿದೆ. ಉಗ್ರರ ಮೂರು ನೆಲೆ ನಾಶ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಭಾರತೀಯ ಸೇನೆಯು ಆರ್ಟಿಲರಿ ಗನ್ ಗಳನ್ನು ಬಳಸಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಲಾಗಿದೆ.
ಕೇರನ್, ತಂಗ್ದರ್ ಹಾಗೂ ನೌಗಾಂವ್ ವಲಯದ ಬಳಿ ಉಗ್ರಗಾಮಿಗಳು ಬರುತ್ತಿದ್ದಾರೆ ಎಂದು ಸೇನೆಗೆ ಖಚಿತ ಮಾಹಿತಿ ಇತ್ತು. ಆರ್ಟಿಲರಿ ಗನ್ಸ್ ಬಳಸಿ ಉಗ್ರ ನೆಲೆಗಳ ಮೇಲೆ ದಾಳಿ ನಡೆಸಿದ್ದೇವೆ. ಪಾಕಿಸ್ತಾನಿ ಸೇನೆ ಹಾಗೂ ಉಗ್ರಗಾಮಿಗಳಲ್ಲಿ ಭಾರೀ ಸಾವು- ನೋವು ಸಂಭವಿಸಿದೆ ಎಂಬ ಮಾಹಿತಿ ಸಿಕ್ಕಿದೆ ಎಂದು ರಾವತ್ ತಿಳಿಸಿದ್ದಾರೆ.

ಜಮ್ಮು- ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡಿದ ಮೇಲೆ ಗಡಿಯ ಉದ್ದಕ್ಕೂ ಉಗ್ರರನ್ನು ನುಸುಳಿಸಲು ಯತ್ನಿಸಲಾಗುತ್ತಿದೆ ಎಂಬ ಮಾಹಿತಿ ಬರುತ್ತಿತ್ತು. ಶಾಂತಿ ಕದಡಲು ಇಂಥದ್ದೊಂದು ಯೋಜನೆ ರೂಪಿಸಲಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.
ಪಾಕಿಸ್ತಾನವು ನಮ್ಮ ಠಾಣೆಗಳ ಮೇಲೆ ದಾಳಿ ನಡೆಸಿದೆ. ಅದರಲ್ಲಿ ನಮಗೆ ಹಾನಿಯಾಗಿದೆ. ಆದರೆ ಉಗ್ರರು ಒಳನುಸುಳುವ ಮುನ್ನ ಪ್ರಯತ್ನವನ್ನು ವಿಫಲಗೊಳಿಸಿದ್ದೇವೆ ಎಂದು ತಿಳಿಸಿದ್ದಾರೆ.












Click it and Unblock the Notifications