ಕಾಶ್ಮೀರ ವಿಚಾರದಲ್ಲಿ ಮೂಗು ತೂರಿಸಬೇಡಿ: ಚೀನಾ-ಪಾಕಿಸ್ತಾನಕ್ಕೆ ಭಾರತದ ತಿರುಗೇಟು
ನವದೆಹಲಿ, ಆಗಸ್ಟ್ 22: ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗವಾಗಿದೆ ಎಂದು ಭಾರತ ಮತ್ತೊಮ್ಮೆ ಪಾಕಿಸ್ತಾನ ಮತ್ತು ಚೀನಾಕ್ಕೆ ತಿಳಿಸಿದ್ದು, ನಮ್ಮ ಆಂತರಿಕ ವಿಷಯದಲ್ಲಿ ನಾವು ಯಾವುದೇ ಹಸ್ತಕ್ಷೇಪವನ್ನು ಸ್ವೀಕರಿಸುವುದಿಲ್ಲ ಎಂದು ಹೇಳಿದೆ.
ಪಾಕಿಸ್ತಾನ ವಿದೇಶಾಂಗ ಸಚಿವ ಷಾ ಮಹಮೂದ್ ಖುರೇಷಿ ಮತ್ತು ಚೀನಾದ ವಾಂಗ್ ವಾಯ್ ನಡುವಿನ ಎರಡನೇ ವಾರ್ಷಿಕ ಕಾರ್ಯತಂತ್ರದ ಮಾತುಕತೆಯ ನಂತರ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಅವರಿಂದ ಈ ಹೇಳಿಕೆ ಬಂದಿದೆ. ಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಉಭಯ ದೇಶಗಳ ನಡುವಿನ ಮಾತುಕತೆಗೆ ಭಾರತ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿಯನ್ನು ಸಂಕೀರ್ಣಗೊಳಿಸುವ ಯಾವುದೇ "ಏಕಪಕ್ಷೀಯ" ಕ್ರಮವನ್ನು ಚೀನಾ ವಿರೋಧಿಸುತ್ತಿದೆ ಎಂದು ಚೀನಾ ಪಾಕಿಸ್ತಾನಕ್ಕೆ ತಿಳಿಸಿದ ಒಂದು ದಿನದ ನಂತರ ಭಾರತದಿಂದ ಈ ಹೇಳಿಕೆ ಬಂದಿದೆ
ಎರಡನೇ ವಾರ್ಷಿಕ ಕಾರ್ಯತಂತ್ರದ ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಸಂದರ್ಭದಲ್ಲಿ ಚೀನಾ-ಪಾಕಿಸ್ತಾನ ವಿದೇಶಾಂಗ ಸಚಿವರ ಕಾರ್ಯತಂತ್ರದ ಸಂವಾದವನ್ನು ನಾವು ಮೊದಲಿನಂತೆ ತಿರಸ್ಕರಿಸುತ್ತೇವೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಶನಿವಾರ ಹೇಳಿದ್ದಾರೆ.
ವಂದೇ ಭಾರತ್ ಸೆಮಿ ಹೈಸ್ಪೀಡ್ ರೈಲುಗಳ ನಿರ್ಮಾಣ: ಚೀನಾ ಕಂಪನಿಗಳು ಔಟ್
ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗವಾಗಿದೆ. ಭಾರತದ ಆಂತರಿಕ ವ್ಯವಹಾರಗಳ ವಿಷಯಗಳಲ್ಲಿ ಸಂಬಂಧಪಟ್ಟ ಪಕ್ಷಗಳು ಹಸ್ತಕ್ಷೇಪ ಮಾಡುವುದಿಲ್ಲ ಎಂದು ನಾವು ಭಾವಿಸುತ್ತೇವೆ ಎಂದಿದ್ದಾರೆ.
ಜೊತೆಗೆ ಪಾಕಿಸ್ತಾನ ಆಕ್ರಮಿಸಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ಯಥಾಸ್ಥಿತಿ ಬದಲಿಸುವ ಯಾವುದೇ ದೇಶಗಳ ಕ್ರಮವನ್ನೂ ನಾವು ವಿರೋಧಿಸುತ್ತೇವೆ ಎಂದು ಅವರು ಹೇಳಿದರು.