ಚಿತ್ರಗಳು : ಪ್ರಜಾಪ್ರಭುತ್ವ ಉಳಿಸಿ ಎಂದು ಬೀದಿಗಿಳಿದ ಕಾಂಗ್ರೆಸ್
ನವದೆಹಲಿ, ಮೇ 06 : 'ಪ್ರಜಾಪ್ರಭುತ್ವ ಉಳಿಸಿ' ಎಂಬ ಹೆಸರಿನಲ್ಲಿ ಇಂದು ಕಾಂಗ್ರೆಸ್ ರಾಷ್ಟ್ರ ರಾಜಧಾನಿಯಲ್ಲಿ ಬೃಹತ್ ಜಾಥಾ ನಡೆಸಿತು. ಕಾಂಗ್ರೆಸ್ ದುರ್ಬಲವಾದ ಪಕ್ಷವಲ್ಲ. ಪಕ್ಷವನ್ನು ನಾಶಪಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂಬ ಸಂದೇಶವನ್ನು ನಾಯಕರು ಬಿಜೆಪಿಗೆ ರವಾನಿಸಿದರು.
ಜಂತರ್ಮಂತರ್ನಿಂದ ಸಂಸತ್ ಭವನದ ತನಕ 'ಪ್ರಜಾಪ್ರಭುತ್ವ ಉಳಿಸಿ' ಜಾಥಾ ನಡೆಯಬೇಕಿತ್ತು. ಜಂತರ್ ಮಂತರ್ನಿಂದ ಹೊರಟ ಜಾಥಾ ಕೆಲವು ದೂರ ಸಾಗಿದ ಕೂಡಲೇ, ಪೊಲೀಸರು ಕಾಂಗ್ರೆಸ್ ನಾಯಕರನ್ನು ವಶಕ್ಕೆ ಪಡೆದುಕೊಂಡು ನಂತರ ಬಿಡುಗಡೆ ಮಾಡಿದರು. [ಆಗಸ್ಟಾ ಹಗರಣ: ಸೋನಿಯಾ VS ಸುಬ್ರಮಣಿಯನ್ ಸ್ವಾಮಿ]
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ನಡೆದ ಜಾಥಾದಲ್ಲಿ ರಾಹುಲ್ ಗಾಂಧಿ, ಮನಮೋಹನ್ ಸಿಂಗ್, ಮಲ್ಲಿಕಾರ್ಜುನ ಖರ್ಗೆ, ಅಹ್ಮದ್ ಪಟೇಲ್, ಎ.ಕೆ.ಆಂಟನಿ ಮುಂತಾದ ನಾಯಕರು ಪಾಲ್ಗೊಂಡಿದ್ದರು. ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ನಾಯಕರು, 'ಪ್ರಧಾನಿ ಮೋದಿ ಅವರು ಆಡಳಿತದ ನೆಪದಲ್ಲಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ' ಎಂದು ದೂರಿದರು. [ರಾಜ್ಯ ರಾಜಕಾರಣಕ್ಕೆ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ?]
ಅಗಸ್ಟಾ ವೆಸ್ಟ್ಲ್ಯಾಂಡ್ ಹೆಲಿಕಾಪ್ಟರ್ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮಾಡುತ್ತಿರುವ ಸುಳ್ಳು ಆರೋಪದ ವಿರುದ್ಧ ಮತ್ತು ಉತ್ತರಾಖಂಡ, ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ರಾಜಕೀಯ ಬಿಕ್ಕಟ್ಟು ಸೃಷ್ಟಿ ಮಾಡಿರುವುದನ್ನು ಖಂಡಿಸಿ ಕಾಂಗ್ರೆಸ್ ಈ ಜಾಥಾ ಹಮ್ಮಿಕೊಂಡಿತ್ತು. ಕಾಂಗ್ರೆಸ್ ನಾಯಕರು ಹೇಳಿದ್ದೇನು? ಚಿತ್ರಗಳಲ್ಲಿ ನೋಡಿ.... [ಪಿಟಿಐ ಚಿತ್ರಗಳು]
'ಕಾಂಗ್ರೆಸ್ ನಾಶಪಡಿಸಲು ಸಾಧ್ಯವಿಲ್ಲ'
'ಕಾಂಗ್ರೆಸ್ ಪಕ್ಷ ದುರ್ಬಲ ಎಂದು ಯಾರೂ ಭಾವಿಸಬೇಕಿಲ್ಲ. ಕಾಂಗ್ರೆಸ್ ಪಕ್ಷವನ್ನು ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಹಿಂದೆಯೂ ಅನೇಕ ಸುಳ್ಳು ಆರೋಪ ಎದುರಿಸಿದ್ದೇವೆ. ಸುಳ್ಳು ಆರೋಪ ಮಾಡುವವರಿಗೆ ಜನರೇ ತಕ್ಕಪಾಠ ಕಲಿಸುತ್ತಾರೆ' ಎಂದು ಸೋನಿಯಾ ಗಾಂಧಿ ಹೇಳಿದರು.
'ಆಡಳಿತ ನಡೆಸಲು ಕಲಿಯಿರಿ'
ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸೋನಿಯಾ ಗಾಂಧಿ, 'ನೀವು ಮೊದಲು ಸ್ವತಂತ್ರವಾಗಿ ಆಡಳಿತ ನಡೆಸುವುದನ್ನು ಕಲಿಯಿರಿ, ನಾಗ್ಪುರದಿಂದ ಬಂದ ಸೂಚನೆಯಂತೆ ಆಡಳಿತ ನಡೆಸಬೇಡಿ' ಎಂದು ಪ್ರಧಾನಿ ಮೋದಿಯವರನ್ನು ತರಾಟೆಗೆ ತೆಗೆದುಕೊಂಡರು.
'ಪ್ರಜಾತಂತ್ರ ಅತಂತ್ರವಾಗಲು ಬಿಡುವುದಿಲ್ಲ'
'ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅತಂತ್ರ ಮಾಡಲು ನಾವು ಬಿಡುವುದಿಲ್ಲ. ಅದನ್ನು ರಕ್ಷಿಸುತ್ತೇವೆ. ಜೀವನ ನಮಗೆ ಕಠಿಣ ಪಾಠಗಳನ್ನು ಕಲಿಸಿದೆ. ಸರಿಯಾದ ಸಮಯದಲ್ಲಿ ಜನರೇ ನಿಮಗೆ ತಕ್ಕ ಪಾಠ ಕಲಿಸುತ್ತಾರೆ' ಎಂದು ಸೋನಿಯಾ ಗಾಂಧಿ ಎಚ್ಚರಿಕೆ ನೀಡಿದರು.
'ರಾಜಕೀಯ ಬಿಕ್ಕಟ್ಟು ಸೃಷ್ಟಿ ಮಾಡಿದ್ದೀರಿ'
'ಹಣಬಲವನ್ನು ಉಪಯೋಗಿಸಿ ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಬಿಜೆಪಿ ರಾಜಕೀಯ ಬಿಕ್ಕಟ್ಟನ್ನು ಸೃಷ್ಟಿ ಮಾಡಿದೆ. ಆದರೆ, ಕಾಂಗ್ರೆಸ್ ಪ್ರಜಾತಂತ್ರ ಉಳಿಸಲು ನಿರಂತರವಾಗಿ ಹೋರಾಟ ಮಾಡುತ್ತದೆ' ಎಂದು ಸೋನಿಯಾ ಗಾಂಧಿ ಹೇಳಿದರು.
'ಬಿಜೆಪಿ ರಾಷ್ಟ್ರ ವಿರೋಧಿ ಪಕ್ಷ'
'ಬಿಜೆಪಿ ರಾಷ್ಟ್ರ ವಿರೋಧಿ ಪಕ್ಷವಾಗಿದೆ. ಪ್ರಜಾಪ್ರಭುತ್ವವನ್ನು ಗಣನೆಗೆ ತೆಗೆದುಕೊಳ್ಳದೆ ಕೆಲವು ರಾಜ್ಯಗಳಲ್ಲಿ ಕಾಂಗ್ರೆಸ್ ಸರ್ಕಾರವನ್ನು ದುರ್ಬಲಗೊಳಿಸುವ ಪ್ರಯತ್ನಮಾಡುತ್ತಿದೆ' ಎಂದು ಸೋನಿಯಾ ಗಾಂಧಿ ದೂರಿದರು.