ಆಮ್ ಆದ್ಮಿ ವಿರುದ್ಧ ತನಿಖಾಸ್ತ್ರ ಬಳಸಿದ ಕೇಂದ್ರ
ನವದೆಹಲಿ, ನ.11 : ನವದೆಹಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕೇಂದ್ರ ಸರ್ಕಾರ ಆಮ್ ಆದ್ಮಿ ಪಕ್ಷದ ವಿರುದ್ಧ ಸಮರ ಸಾರಿದೆ. ಪಕ್ಷಕ್ಕೆ ಹರಿದು ಬಂದಿರುವ ಆದಾಯ ಮತ್ತು ಖಾತೆಯ ವಿವರಗಳ ಬಗ್ಗೆ ತನಿಖೆ ನಡೆಸುವಂತೆ ಆದೇಶ ನೀಡಿದೆ. ಹಲವಾರು ದೂರುಗಳ ಬಂದ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಹೇಳಿದ್ದಾರೆ.
ನವದೆಹಲಿಯಲ್ಲಿ ಸೋಮವಾರ ಮಾತನಾಡಿದ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ, ಆಮ್ ಆದ್ಮಿ ಪಕ್ಷಕ್ಕೆ ವಿದೇಶಗಳಿಂದ ಹಣ ಹರಿದು ಬರುತ್ತಿದೆ ಎಂಬ ಬಗ್ಗೆ ನಮಗೆ ದೂರುಗಳು ಬಂದಿದ್ದವು. ಸದ್ಯ ಈ ಕುರಿತು ತನಿಖೆ ನಡೆಸುವಂತೆ ಆದೇಶ ನೀಡಲಾಗಿದೆ ಎಂದು ಹೇಳಿದರು. ಕೆಲವು ದಿನಗ ಹಿಂದೆ ದೆಹಲಿ ಹೈಕೋರ್ಟ್ ಸಹ ಆಮ್ ಆದ್ಮಿ ಪಕ್ಷದ ಹಣದ ಮೂಲಗಳ ಬಗ್ಗೆ ತನಿಖೆ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿತ್ತು.

ಆಮ್ ಆದ್ಮಿ ಪಕ್ಷಕ್ಕೆ ವಿದೇಶಗಳಿಂದ ಎಷ್ಟು ಹಣ ಹರಿದು ಬಂದಿದೆ, ದೇಶಗಳು ಯಾವುವು ಮುಂತಾದ ವಿವರಗಳು ತನಿಖೆಯ ಮೂಲಕ ತಿಳಿದು ಬರಲಿದೆ ಎಂದು ಸುಶೀಲ್ ಕುಮಾರ್ ಶಿಂಧೆ ಹೇಳಿದ್ದಾರೆ. ಡಿ.4ರಂದು ದೆಹಲಿಯಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಅದಕ್ಕೂ ಮೊದಲು ಆಮ್ ಆದ್ಮಿ ಪಕ್ಷದ ಅನುದಾನಗಳ ಬಗ್ಗೆ ತನಿಖೆ ನಡೆಸುವಂತೆ ಕೇಂದ್ರ ಆದೇಶ ನೀಡಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅರವಿಂದ್ ಕೇಜ್ರಿವಾಲ್, ಕೇಂದ್ರ ಸರ್ಕಾರ ನಮ್ಮ ಹಣದ ಮೂಲಗಳ ಬಗ್ಗೆ ತನಿಖೆ ನಡೆಸಲಿ, ಯಾವುದೇ ನಾವು ಸಿದ್ಧ. ಕಾಂಗ್ರೆಸ್ ಸಹ ತನ್ನ ಪಕ್ಷದ ಅನುದಾನಗಳ ಕುರಿತ ಮಾಹಿತಿಯನ್ನು ನಮಗೆ ನೀಡಬೇಕೆಂದು ಕೇಜ್ರಿವಾಲ್ ಸವಾಲು ಹಾಕಿದ್ದಾರೆ.
ಹೈಕೋರ್ಟ್ ಆದೇಶ : ಆಮ್ ಆದ್ಮಿ ಪಕ್ಷ ಕಾನೂನು ಉಲ್ಲಂಘಿಸಿ, ಅಕ್ರಮವಾಗಿ ವಿದೇಶದಿಂದ ನಿಧಿ ಸಂಗ್ರಹ ಮಾಡುತ್ತಿದೆ, ಈ ಸಂಬಂಧ ತನಿಖೆ ಕೈಗೊಳ್ಳಬೇಕು ಎಂದು ವಕೀಲರಾದ ಎಂ.ಎಲ್ ಶರ್ಮಾ ಅವರು ದೆಹಲಿ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಪಕ್ಷದ ಖಾತೆಯ ಬಗ್ಗೆ ತನಿಖೆ ನಡೆಸಿ, ಡಿಸೆಂಬರ್ 10ರೊಳಗಾಗಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿತ್ತು. (ಆಮ್ ಆದ್ಮಿ ಬ್ಯಾಂಕ್ ಖಾತೆ ಬಗ್ಗೆ ತನಿಖೆ)
ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಸಮಾಜದ ವಿವಿಧ ಸ್ತರದಲ್ಲಿರುವ ವ್ಯಕ್ತಿಗಳಿಂದ ಪಕ್ಷಕ್ಕಾಗಿ ದೇಣಿಗೆ ಪಡೆದಿದ್ದು, ಅನಿವಾಸಿ ಭಾರತೀಯರು, ರಿಕ್ಷಾವಾಲಾಗಳು ಮತ್ತು ವ್ಯಾಪಾರಿಗಳಿಂದ 12 ಕೋಟಿ ರೂ. ದೇಣಿಗೆ ಸ್ವೀಕರಿಸಿದೆ ಎಂದು ಸೆಪ್ಟೆಂಬರ್ ನಲ್ಲಿ ವರದಿಯಾಗಿತ್ತು. ಪಕ್ಷಕ್ಕೆ ಜನರು 10 ರು ನಿಂದ ಲಕ್ಷ ರು ತನಕ ದೇಣಿಗೆ ನೀಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. (ಜನ ಸಾಮಾನ್ಯರ ಪಕ್ಷದಲ್ಲಿದೆ ಕೋಟಿಗಟ್ಟಲೆ ಫಂಡ್)












Click it and Unblock the Notifications