ಹೈದರಾಬಾದ್ ಕೇಂದ್ರಾಡಳಿತ ಪ್ರದೇಶವಾಗಲ್ಲ
ನವದೆಹಲಿ, ಅ.12: ಆಂಧ್ರಪ್ರದೇಶವನ್ನು ವಿಭಜಿಸಿ ತೆಲಂಗಾಣ ರಾಜ್ಯ ರಚಿಸುವ ಕುರಿತು ರೂಪುರೇಷೆ ಸಿದ್ಧಪಡಿಸಲು ಮಂತ್ರಿಗಳ ಸಮೂಹ (GoM) ಇದೇ ಮೊದಲ ಬಾರಿಗೆ ಶುಕ್ರವಾರ ಸಭೆ ನಡೆಸಿತು. ರಾಜ್ಯದ ಎಲ್ಲ ಭಾಗದ ಜನರ ಅಹವಾಲುಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಯಾವ ಭಾಗಕ್ಕೂ ಅನ್ಯಾಯವಾಗದಂತೆ ನೋಡಿಕೊಳ್ಳಲು ಸಭೆ ತೀರ್ಮಾನಿಸಿತು.
ಹೈದ್ರಾಬಾದ್ ನಗರ ಕೇಂದ್ರಾಡಳಿತ ಪ್ರದೇಶವಾಗುವುದಿಲ್ಲ. ಸೀಮಾಂಧ್ರ ಭಾಗಕ್ಕೆ ಭಾರಿ ಆರ್ಥಿಕ ಪ್ಯಾಕೇಜ್, ಹೊಸ ರಾಜಧಾನಿಯನ್ನು ಅತ್ಯಾಧುನಿಕ ರೀತಿಯಲ್ಲಿ ಅಭಿವೃದ್ಧಿಪಡಿಸುವ ಭರವಸೆಯನ್ನು ಸಭೆಯಲ್ಲಿ ನೀಡಲಾಗಿದೆ. ಆದರೆ ಹೈದ್ರಾಬಾದ್ ಅನ್ನು 10 ವರ್ಷಗಳ ಕಾಲ ಉಭಯ ರಾಜ್ಯಗಳ ರಾಜಧಾನಿಯಾಗಿ ಮಾಡುವ ಪ್ರಸ್ತಾಪದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂಬ ಅಂಶವನ್ನು ಸಭೆ ಸ್ಪಷ್ಟಪಡಿಸಿದೆ.
ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ವಿಚಾರ ವ್ಯಕ್ತವಾಯಿತು. ಅನಾರೋಗ್ಯದ ನಿಮಿತ್ತ ಎ.ಕೆ. ಆಂಟನಿ ಮತ್ತು ವಿದೇಶದಲ್ಲಿರುವ ನಿಮಿತ್ತ ಪಿ. ಚಿದಂಬರಂ ಸಭೆಗೆ ಹಾಜರಾಗಲಿಲ್ಲ. ಉಳಿದಂತೆ ಗುಲಾಂ ನಬಿ ಆಜಾದ್ , ಎಂ ವೀರಪ್ಪ ಮೊಯ್ಲಿ, ಜೈರಾಮ್ ರಮೇಶ್, ವಿ. ನಾರಾಯಣಸಾಮಿ ಹಾಜರಾಗಿದ್ದರು.

ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಶಿಂಧೆ ಮತ್ತು ಆಜಾದ್, 'ರಾಜ್ಯ ರಚನೆ ಕುರಿತ ಮೂಲ ಮಾನದಂಡಗಳು, ಯಾವ ಮಾದರಿಯಲ್ಲಿ ರಾಜ್ಯ ರಚಿಸಬೇಕು ಎಂಬ ಬಗ್ಗೆ ಚರ್ಚಿಸಲಾಯಿತು. ಸಮಿತಿಗೆ ಯಾವುದೇ ಕಾಲಮಿತಿ ಇಲ್ಲ. ಆಂಧ್ರದ ಎಲ್ಲ ಭಾಗದ ಜನರ ಅಹವಾಲು ಆಲಿಸಲಾಗುವುದು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು. ರಾಜ್ಯ ಸರ್ಕಾರದಿಂದ ಮಾಹಿತಿ ಬಯಸಿ ತ್ವರಿತಗತಿಯಲ್ಲಿ ಮುಂದಿನ ಕ್ರಮ ಕೈಗೊಳ್ಳಲು ನಿರ್ಣಯಿಸಲಾಯಿತು' ಎಂದರು.
ಮುಖ್ಯವಾಗಿ ನೈಸರ್ಗಿಕ ಸಂಪತ್ತು(ಕಲ್ಲಿದ್ದಲು, ಜಲ ಸಂಪನ್ಮೂಲ, ಅನಿಲ ಹಾಗೂ ಇಂಧನ) ಬಳಕೆ, ವಿದ್ಯುತ್ ಉತ್ಪಾದನೆ ಹಾಗೂ ಪ್ರಸರಣ ಮುಂತಾದ ವಿಷಯಗಳ ಬಗ್ಗೆ ಸಭೆಯಲ್ಲಿ ಸೂಕ್ಷ್ಮವಾಗಿ ಚರ್ಚಿಸಲಾಗಿದೆ. ಸಂಪನ್ಮೂಲ ಹಂಚಿಕೆ ವಿಷಯದಲ್ಲಿ ಮತ್ತೊಮ್ಮೆ ಗೊಂದಲ, ಆತಂಕ ಸೃಷ್ಟಿಯಾಗದಂತೆ ಮಾಡುವುದು ಸರ್ಕಾರದ ಸದ್ಯದ ಸವಾಲಾಗಿದೆ.(ಪಿಟಿಐ)











Click it and Unblock the Notifications