ಚುನಾವಣೆ ಬಳಿಕ ರಾಷ್ಟ್ರ ರಾಜಕಾರಣದಲ್ಲಿ ಅನಿರೀಕ್ಷಿತ ಬೆಳವಣಿಗೆ: ಪಿತ್ರೋಡಾ
ನವದೆಹಲಿ, ಮೇ 04: ಲೋಕಸಭೆ ಚುನಾವಣೆಗೂ ಮುನ್ನವೇ ಮಹಾಘಟಬಂಧನದ ಕನಸು ನುಚ್ಚುನೂರಾಗಿದೆ ಎನ್ನುತ್ತಿರುವವರಿಗೆ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಹೊಸ ಬಾಂಬ್ ಸಿಡಿಸಿದ್ದಾರೆ.
ಲೋಕಸಭಾ ಚುನಾವಣೆಯ ನಂತರ ದೇಶದಲ್ಲಿ ಅಚ್ಚರಿಯ ಬೆಳವಣಿಗೆ ಸಂಭವಿಸಲಿದ್ದು, ಹರಿದು ಹಂಚಿಹೋಗಿರುವ ಮಹಾಘಟಬಂಧನದ ಪಕ್ಷಗಳು 'ಸರಿಯಾದ ಸಮಯದಲ್ಲಿ' ಒಂದಾಗಲಿವೆ, ಸರ್ಕಾರ ರಚಿಸಲಿವೆ ಎಂದು ಸ್ಯಾಮ್ ಪಿತ್ರೋಡಾ ಹೇಳಿದ್ದಾರೆ.
ಕಾಂಗ್ರೆಸ್ ನ ಬಹುಮುಖ್ಯ ಸ್ಟ್ರಾಟಜಿಸ್ಟ್ ಗಳಲ್ಲಿ ಒಬ್ಬರಾದ ಸ್ಯಾಮ್ ಪಿತ್ರೋಡಾ, ಮೋದಿ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವುದೇ ಎಲ್ಲ ಪಕ್ಷಗಳ ಗುರಿಯಾಗಿರುವಾಗ, ಎಲ್ಲ ಪಕ್ಷಗಳೂ ಒಂದು ಹಂತದಲ್ಲಿ ಒಂದಾಗಲಿವೆ ಎಂದು ಸ್ಯಾಮ್ ಪಿತ್ರೋಡಾ ಹೇಳಿದ್ದಾರೆ. ಎಎನ್ ಐ ನ್ಯೂಸ್ ಏಜೆನ್ಸಿಗೆ ನೀಡಿದ ಸಂದರ್ಶನದಲ್ಲಿ ಅವರು ಈ ಎಲ್ಲಾ ವಿಷಯಗಳನ್ನು ಹಂಚಿಕೊಂಡರು.

ಸರಿಯಾದ ಸಮಯದಲ್ಲಿ ಮಹಾಘಟಬಂಧನ ಸೃಷ್ಟಿ
ಲೋಕಸಭೆ ಚುನಾವಣೆಯ ದಿನಾಂಕ ನಿಗದಿಗೂ ಮುನ್ನ ಕಾಂಗ್ರೆಸ್ ನೊಂದಿಗೆ ನಿಂತಿದ್ದ ಎಸ್ಪಿ, ಬಿಎಸ್ಪಿ, ಟಿಎಂಸಿಯಂಥ ಹಲವು ಪಕ್ಷಗಳು ಇಂದು ಕಾಂಗ್ರೆಸ್ ನೊಂದಿಗಿಲ್ಲ. ಈಗ ಚುನಾವಣೆಯನ್ನು ಸ್ವತಂತ್ರವಾಗಿ ಎದುರಿಸಿದರೂ, ಫಲಿತಾಂಶದ ನಂತರ ಎಲ್ಲಾ ಪಕ್ಷಗಳೂ ಒಂದಾಗಿ, ಕಾಂಗ್ರೆಸ್ ನೇತೃತ್ವದಲ್ಲಿ ಸರ್ಕಾರ ನಡೆಸಲಿವೆ ಎಂದು ಸ್ಯಾಮ್ ಪಿತ್ರೋಡಾ ಈ ಸಂದರ್ಶನದಲ್ಲಿ ಹೇಳಿದ್ದಾರೆ.

ಎಲ್ಲರ ಗುರಿಯೂ ಒಂದೇ!
ಎಲ್ಲಾ ವಿಪಕ್ಷಗಳ ಗುರಿಯೂ ಒಂದೇ. ಅದು ನರೇಂದ್ರ ಮೋದಿ ಅವರನ್ನು ಪ್ರಧಾನಿ ಪಟ್ಟದಿಂದ ಕೆಳಗಿಳಿಸುವುದು ಮತ್ತು ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡುವುದು. ಈ ಉದ್ದೇಶ ಹೊತ್ತ ಸಮಾನ ಮನಸ್ಕ ಪಕ್ಷಗಳೆಲ್ಲವೂ ಒಂದಾಗುವುದು ತೀರಾ ಸಹಜ ಬೆಳವಣಿಗೆ- ಸ್ಯಾಮ್ ಪಿತ್ರೋಡಾ

ಕಾಂಗ್ರೆಸ್ ಗೆದ್ದೇ ಗೆಲ್ಲುತ್ತದೆ
ಈ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತದೆ. ಅದರಲ್ಲಿ ಬೇರೆ ಮಾತೇ ಇಲ್ಲ. ಈಗಾಗಲೇ ನಾವು ದಕ್ಷಿಣ ಭಾರತದ ಕೆಲವು ರಾಜ್ಯಗಳಲ್ಲಿ ಅಲ್ಲಿನ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದ್ದೇವೆ. ಉದಾಹರಣೆಗೆ, ತಮಿಳು ನಾಡಿನಲ್ಲಿ ಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿದ್ದೇವೆ. ಅಲ್ಲಿ ಡಿಎಂಕೆ ಪರ ಅಲೆಯಿದೆ. ಆ ರಾಜ್ಯದಲ್ಲಿ ಡಿಎಂಕೆ ಹೆಚ್ಚಿನ ಸ್ಥಾನ ಗೆದ್ದರೆ ಅದರಿಂದ ಕಾಂಗ್ರೆಸ್ಸಿಗೇ ಲಾಭ. ಮೋದಿ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆಯೂ ಇರುವುದರಿಂದ ಕಾಂಗ್ರೆಸ್ ಗೆಲುವು ಸುಲಭ- ಸ್ಯಾಮ್ ಪಿತ್ರೋಡಾ

ಅಖಿಲೇಶ್ ಹೇಳಿಕೆಯಿಂದ ಅಲ್ಲೋಲ ಕಲ್ಲೋಲ
"ಕಾಂಗ್ರೆಸ್ ಬಹುತೇಕ ಕಡೆಗಳಲ್ಲಿ ದುರ್ಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಈ ಮೂಲಕ ಎಸ್ಪಿ-ಬಿಎಸ್ಪಿಗೆ ಲಾಭವಾಗಲಿದೆ. ಬಿಜೆಪಿ ವಿರುದ್ಧದ ಮತಗಳು ಒಡೆಯಬಾರದು ಎಂಬ ಕಾರಣಕ್ಕೆ ಈ ಕ್ರಮ" ಎಂದು ಇತ್ತೀಚೆಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಪ್ರತ್ಯುತ್ತರ ನೀಡಿದ್ದ ಎಸ್ಪಿ ನಾಯಕ ಅಖಿಲೇಶ್ ಯಾದವ್ "ಇಂಥ ಹೇಳಿಕೆಗಳಿಗೆ ಅರ್ಥವಿಲ್ಲ. ಕಾಂಗ್ರೆಸ್ ಅಭ್ಯರ್ಥಿಗಳು ದುರ್ಬಲರು ಎಂದರೆ ನಾನು ನಂಬುವುದಿಲ್ಲ. ಅವರಿಗೆ ಗೆಲ್ಲುವ ವಿಶ್ವಾಸ ಇಲ್ಲದಿರುವುದಕ್ಕೆ ಈ ರೀತಿ ಹೇಳುತ್ತಿದ್ದಾರೆ" ಎಂದು ಖಡಕ್ಕಾಗಿ ಅಖಿಲೇಶ್ ಉತ್ತರಿಸಿದ್ದರು.











Click it and Unblock the Notifications