ಅನಾರೋಗ್ಯ: ಏಮ್ಸ್ ಆಸ್ಪತ್ರೆಗೆ ಮುತ್ತಪ್ಪ ರೈ ದಾಖಲು
ಬೆಂಗಳೂರು, ಆಗಸ್ಟ್ 24: ಜೈ ಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ಮಾಜಿ ಭೂಗತ ಲೋಕದ ದೊರೆ ಮುತ್ತಪ್ಪ ರೈ ಅನಾರೋಗ್ಯದಿಂದ ಬಳಲುತ್ತಿದ್ದು ಅವರು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಬಗ್ಗೆ ಅವರ ಹತ್ತಿರ ಸ್ನೇಹಿತರು, ಕುಟುಂಬ ವರ್ಗ ಕೆಲವು ಪತ್ರಿಕೆಗಳಿಗೆ ಮಾಹಿತಿ ನೀಡಿದ್ದು, ಏಮ್ಸ್ ನಲ್ಲಿರುವ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ. ಆದರೆ ಅವರು ರೈ ಅವರ ಅನಾರೋಗ್ಯಕ್ಕೆ ಕಾರಣವನ್ನು, ಸ್ವರೂಪವನ್ನು ಹೇಳಲು ನಿರಾಕರಿಸಿದ್ದಾರೆ.
ಮಾಜಿ ಡಾನ್ ಮುತ್ತಪ್ಪ ರೈ, ಪ್ರಸ್ತುತ ಜೈ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷರಾಗಿದ್ದು, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ 'ಸಮಾಜ ಸೇವಕ' ಹೆಸರಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮುತ್ತಪ್ಪ ರೈ ಅವರು ರಿಯಲ್ ಎಸ್ಟೇಟ್ ಉದ್ಯಮಪತಿಗಳೂ ಆಗಿದ್ದಾರೆ.

ಮುತ್ತಪ್ಪ ರೈ ಕುರಿತು ಸಿನಿಮಾ ನಿರ್ದೇಶಿಸುವುದಾಗಿ ಈ ಹಿಂದೆ ರಾಮ್ ಗೋಪಾಲ್ ವರ್ಮ ಹೇಳಿದ್ದರು. ಈ ಬಗ್ಗೆ ದೊಡ್ಡ ಕಾರ್ಯಕ್ರಮವನ್ನೂ ಮಾಡಲಾಗಿತ್ತು. ಆದರೆ ಸಿನಿಮಾ ಇನ್ನೂ ಸೆಟ್ಟೇರಿಲ್ಲ.
ಕೆಲವು ತಿಂಗಳುಗಳ ಹಿಂದೆಯಷ್ಟೆ ಮುತ್ತಪ್ಪ ರೈ ಅನ್ನು ಸಿಐಡಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ಆಯುಧ ಪೂಜೆಯಂದು ಶಸ್ತ್ರಾಸ್ತ್ರಗಳನ್ನು ಇಟ್ಟು ಪೂಜೆ ಮಾಡಿದ ಚಿತ್ರ ವೈರಲ್ ಆಗಿತ್ತು. ಹಾಗಾಗಿ ಮುತ್ತಪ್ಪ ರೈಗೆ ನೊಟೀಸ್ ನೀಡಲಾಗಿತ್ತು.












Click it and Unblock the Notifications