ಕಮಲ ಪಕ್ಷ ಸೇರಿದ ಜನರಲ್ ವಿಕೆ ಸಿಂಗ್
ನವದೆಹಲಿ, ಮಾ.1 : ನಿವೃತ್ತ ಭೂಸೇನೆ ಮುಖ್ಯಸ್ಥ ಜನರಲ್ ವಿಕೆ ಸಿಂಗ್ ಶನಿವಾರ ಭಾರತೀಯ ಜನತಾ ಪಕ್ಷವನ್ನು ಸೇರಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಸಿಂಗ್ ಅವರನ್ನು ಆತ್ಮೀಯವಾಗಿ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ. ಆದರೆ, ಸಿಂಗ್ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಾರೆಯೇ ಎಂಬ ಪ್ರಶ್ನೆಗೆ ಇನ್ನೂ ಉತ್ತರ ದೊರಕಿಲ್ಲ.
ಶನಿವಾರ ನವದೆಹಲಿಯಲ್ಲಿರುವ ಬಿಜೆಪಿ ಕಚೇರಿಗೆ ಆಗಮಿಸಿದ ವಿ.ಕೆ.ಸಿಂಗ್ ಅವರನ್ನು ರಾಜನಾಥ್ ಸಿಂಗ್ ಅವರು ಹೂಗುಚ್ಛವನ್ನು ನೀಡುವ ಮೂಲಕ ಪಕ್ಷಕ್ಕೆ ಬರ ಮಾಡಿಕೊಂಡರು. ಇದಕ್ಕೂ ಮೊದಲು ಇಂಡಿಯಾ ಗೇಟ್ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ವಿಕೆ ಸಿಂಗ್, ತಾವು ಬಿಜೆಪಿ ಪಕ್ಷ ಸೇರುತ್ತಿರುವುದಾಗಿ ಘೋಷಿಸಿದ್ದರು. [ಮೋದಿ ಜತೆ ಇದ್ದಿದ್ದಕ್ಕೆ ವಿಕೆ ಸಿಂಗ್ ಗೆ ಕುತ್ತು]

ಬಿಜೆಪಿ ಸೇರಿರುವ ವಿಕೆ ಸಿಂಗ್, ಸೇನೆಯಲ್ಲಿರುವ ಪ್ರತಿಯೊಬ್ಬ ಸೈನಿಕನು ದೇಶದ ಕುರಿತು ಮಾತ್ರ ಚಿಂತಿಸುತ್ತಾನೆ. ನಾನು ಕೂಡ ದೇಶಕ್ಕೆ ನನ್ನ ಕೈಲ್ಲಾದ ಸೇವೆ ಸಲ್ಲಿಸುತ್ತೇನೆ. ನಾನು ರಾಷ್ಟ್ರೀಯ, ದೇಶವನ್ನು ಮುನ್ನಡೆಸಬಲ್ಲ ಮತ್ತು ಖಚಿತ ನಿರ್ಧಾರ ಕೈಗೊಳ್ಳುವ ಪಕ್ಷವನ್ನು ಸೇರಿದ್ದೇನೆ ಎಂದು ಹೇಳಿದ್ದಾರೆ.
ಬಿಜೆಪಿ ಸೇರಿರುವ ನೀವು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಿರಾ? ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ವಿಕೆ ಸಿಂಗ್ ಈ ಬಗ್ಗೆ ನನಗೆ ತಿಳಿದಿಲ್ಲ. ನನ್ನ ಸ್ಪರ್ಧೆ ಬಗ್ಗೆ ಪಕ್ಷವೇ ತೀರ್ಮಾನ ಕೈಗೊಳ್ಳಲಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಬಾಲಿವುಡ್ ಐಟಂ ಕ್ಷೀನ್ ರಾಖಿ ಸಾವಂತ್ ಸಹ ಬಿಜೆಪಿಗೆ ಸೇರ್ಪಡೆಗೊಂಡರು. [ಬಿಜೆಪಿಗೆ ಐಟಂ ಕ್ಷೀನ್ ರಾಖಿ ಸಾವಂತ್]
2013ರಲ್ಲಿ ಹರ್ಯಾಣದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ವಿಕೆ ಸಿಂಗ್, ನರೇಂದ್ರ ಮೋದಿ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದರು. ನಂತರ ಸಾಮಾಜಿಕ ಹೋರಾಟಗಾರ ಮತ್ತು ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ಅವರು ನಡೆಸುತ್ತಿದ್ದ ಸತ್ಯಾಗ್ರಹದಲ್ಲಿ ಸಿಂಗ್ ಪಾಲ್ಗೊಂಡಿದ್ದರು. ಸದ್ಯ ಬಿಜೆಪಿ ಸೇರುವ ಮೂಲಕ ರಾಜಕೀಯಕ್ಕೆ ಕಾಲಿಟ್ಟಿದ್ದಾರೆ.












Click it and Unblock the Notifications