JNU: ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷೆ ಮೇಲೆ ಎಫ್ಐಆರ್, ಹಿಂಸಾಚಾರದ ಹೊಣೆಹೊತ್ತ ಹಿಂದೂ ಸಂಘಟನೆ
ನವದೆಹಲಿ, ಜನವರಿ 7: ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ (ಜೆಎನ್ಯು) ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಘಟಕದ ಅಧ್ಯಕ್ಷೆ ಐಷ್ ಘೋಷ್ ಮತ್ತು ಇತರೆ 19 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಭಾನುವಾರ ನಡೆದ ಹಿಂಸಾಚಾರದ ಘಟನೆಗೂ ಮುನ್ನ ಐಷ್ ಘೋಷ್ ಮತ್ತು ಇತರರು ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಸರ್ವರ್ ಕೊಠಡಿಯನ್ನು ಧ್ವಂಸಗೊಳಿಸಿದ್ದರು ಎಂದು ಆರೋಪಿಸಲಾಗಿದೆ.
ಜೆಎನ್ಯು ಆಡಳಿತ ನೀಡಿದ ದೂರಿನ ಅನ್ವಯ ಎಫ್ಐಆರ್ ದಾಖಲಿಸಲಾಗಿದೆ. ಜೆಎನ್ಯುದಲ್ಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಒಟ್ಟು ಮೂರು ಎಫ್ಐಆರ್ಗಳನ್ನು ದಾಖಲಿಸಿದ್ದು, ಐಷ್ ಘೋಷ್ ಮತ್ತು ಇತರರ ವಿರುದ್ಧ ಜ. 5ರಂದು ಪ್ರಕರಣ ದಾಖಲಿಸಿದ್ದಾರೆ.
ಹಿಂಸಾಚಾರ ನಡೆದು ಎರಡು ದಿನಗಳಾದರೂ ಪೊಲೀಸರು ಇದುವರೆಗೂ ಯಾರನ್ನೂ ಬಂಧಿಸಿಲ್ಲ. ಆದರೆ ಗಾಯಗೊಂಡಿರುವ ಘೋಷ್ ಮತ್ತು ಇತರ ವಿರುದ್ಧ ಪ್ರಕರಣ ದಾಖಲಾಗಿದೆ. ದೈಹಿಕ ಹಿಂಸಾಚಾರದಲ್ಲಿ ಭಾಗಿಯಾಗಿದ್ದು, ಮಹಿಳಾ ಸಿಬ್ಬಂದಿಯನ್ನು ದೂಡಿದ್ದು ಮತ್ತು ಕಾವಲುಗಾರರಿಗೆ ಬೆದರಿಕೆ ಹಾಕಿದ ಆರೋಪಗಳು ಘೋಷ್ ಅವರ ಮೇಲಿದೆ. ಶುಕ್ರವಾರ ದಾಖಲಾಗಿದ್ದ ಎರಡನೆಯ ಎಫ್ಐಆರ್ ಸರ್ವರ್ ಕೊಠಡಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದ್ದಾಗಿದ್ದು, ಇದರಲ್ಲಿ ಘೋಷ್ ಹೆಸರನ್ನು ಉಲ್ಲೇಖಿಸಿಲ್ಲ.

ಎರಡೂ ಸಂಘಟನೆಗಳು ಭಾಗಿ
ಮೂರನೇ ಎಫ್ಐಆರ್ ಭಾನುವಾರ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದ್ದಾಗಿದೆ. ಈ ಘಟನೆಯಲ್ಲಿ ವಿದ್ಯಾರ್ಥಿಗಳು, ಉಪನ್ಯಾಸಕರು ಮತ್ತು ವಿ.ವಿಯ ಸಿಬ್ಬಂದಿ ಸೇರಿದಂತೆ ಸುಮಾರು 34 ಮಂದಿ ಗಾಯಗೊಂಡಿದ್ದರು. ದೆಹಲಿ ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆ ಪ್ರಕಾರ ಭಾನುವಾರದ ಹಿಂಸಾಚಾರದಲ್ಲಿ ಜೆಎನ್ಯುಎಸ್ಯು ಮತ್ತು ಎಬಿವಿಪಿ ಎರಡೂ ಸಂಘಟನೆಗಳ ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ.
|
ಹಿಂದೂ ರಕ್ಷಾ ದಳ ಹೊಣೆ
ಜ. 5ರಂದು ನಡೆದ ಆಘಾತಕಾರಿ ದಾಳಿಗೆ ಬಲಪಂಥೀಯ ಸಂಘಟನೆ ಹಿಂದೂ ರಕ್ಷಾ ದಳ ಹೊಣೆಗಾರಿಕೆ ಹೊತ್ತುಕೊಂಡಿದೆ. ದೇಶ ವಿರೋಧಿ ಮತ್ತು ಹಿಂದೂ ವಿರೋಧಿ ಚಟುವಟಿಕೆಗಳು ನಡೆಯುತ್ತಿರುವ ಜೆಎನ್ಯು ಆವರಣದೊಳಗೆ ಹಿಂದೂ ರಕ್ಷಾ ದಳ ಕಾರ್ಯಕರ್ತರು ಭಾನುವಾರ ರಾತ್ರಿ ನುಗ್ಗಿದ್ದಾಗಿ ಸಂಘಟನೆಯ ನಾಯಕ ಭೂಪೇಂದ್ರ ತೋಮರ್ ಅಲಿಯಾಸ್ ಪಿಂಕಿ ಚೌಧರಿ ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ಬೇರೆ ಕಡೆಯೂ ಇದೇ ಕ್ರಮ
'ಜೆಎನ್ಯು ಕಮ್ಯುನಿಸ್ಟರ ಕೂಟವಾಗಿದೆ. ನಾವು ಅಂತಹ ಕೂಟಗಳನ್ನು ಸಹಿಸುವುದಿಲ್ಲ. ಅವರು ನಮ್ಮ ಧರ್ಮವನ್ನು ಮತ್ತು ದೇಶವನ್ನು ನಿಂದಿಸುತ್ತಾರೆ. ನಮ್ಮ ಧರ್ಮದೆಡೆಗಿನ ಅವರ ನಿಲುವುಗಳು ದೇಶ ವಿರೋಧಿಯಾಗಿದೆ. ಭವಿಷ್ಯದಲ್ಲಿ ಕೂಡ ಇತರೆ ವಿಶ್ವವಿದ್ಯಾಲಯಗಳಲ್ಲಿ ಯಾರಾದರೂ ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾದರೆ ಇದೇ ರೀತಿಯ ಕ್ರಮ ತೆಗೆದುಕೊಳ್ಳುತ್ತೇವೆ' ಎಂದು 1.59 ನಿಮಿಷದ ವಿಡಿಯೋದಲ್ಲಿ ಹೇಳಿದ್ದಾರೆ.

ಪ್ರಾಣ ತ್ಯಾಗಕ್ಕೂ ಸಿದ್ಧ
'ಅವರು ನಮ್ಮ ದೇಶದಲ್ಲಿ ಬದುಕುತ್ತಿದ್ದಾರೆ. ಅವರು ಇಲ್ಲಿ ತಿನ್ನುತ್ತಿದ್ದಾರೆ. ಇಲ್ಲಿಯೇ ತಮ್ಮ ಶಿಕ್ಷಣ ಪಡೆಯುತ್ತಿದ್ದಾರೆ. ಕೊನೆಗೆ ದೇಶದ್ರೋಹಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಜೆಎನ್ಯುದಲ್ಲಿನ ಹಿಂಸಾಚಾರ ಕೃತ್ಯದಲ್ಲಿ ಭಾಗಿಯಾದವರು ಎಲ್ಲರೂ ನಮ್ಮ ಕಾರ್ಯಕರ್ತರು. ನಮ್ಮ ದೇಶಕ್ಕಾಗಿ ನಮ್ಮ ಪ್ರಾಣತ್ಯಾಗ ಮಾಡಲು ಎಂದಿಗೂ ಸದಾ ಸಿದ್ಧರಾಗಿರುತ್ತೇವೆ' ಎಂದಿದ್ದಾರೆ.

ವಿಡಿಯೋ ದೃಶ್ಯಗಳ ಪರಿಶೀಲನೆ
ಪಿಂಕಿ ಚೌಧರಿ ನೀಡಿರುವ ಹೇಳಿಕೆಗಳ ಆಧಾರದಲ್ಲಿ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ಈ ಹೇಳಿಕೆಯನ್ನು ದೆಹಲಿ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಜೆಎನ್ಯುದಲ್ಲಿದ್ದ ಮುಸುಕುಧಾರಿ ವ್ಯಕ್ತಿಗಳನ್ನು ಗುರುತುಹಚ್ಚಲು ಪೊಲೀಸರು ವಿಡಿಯೋ ದೃಶ್ಯಾವಳಿಗಳ ನೆರವನ್ನು ಪಡೆದುಕೊಳ್ಳುತ್ತಿದ್ದಾರೆ. ಜತೆಗೆ ಮುಖ ಪತ್ತೆಹಚ್ಚುವ ವ್ಯವಸ್ಥೆಯನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.












Click it and Unblock the Notifications