ರೈತರಿಂದ ದೆಹಲಿಯ ಎಲ್ಲಾ ಪ್ರವೇಶ ದ್ವಾರ ಬಂದ್ ಎಚ್ಚರಿಕೆ
ನವದೆಹಲಿ, ನವೆಂಬರ್ 30 : ಕೊರೆಯುವ ಚಳಿಯ ನಡುವೆಯೇ ಕೇಂದ್ರ ಸರ್ಕಾರದ ವಿರುದ್ಧ ನಡೆಸುತ್ತಿರುವ ಹೋರಾಟವನ್ನು ರೈತರು ಮುಂದುವರೆಸಿದ್ದಾರೆ. ದೆಹಲಿ-ಹರ್ಯಾಣದ ಸಿಂಘು ಗಡಿಯಲ್ಲಿ ಪೊಲೀಸರು ರೈತರನ್ನು ತಡೆದಿದ್ದಾರೆ.
ರೈತರು ದೆಹಲಿಯ ಬುರಾಡಿ ಮೈದಾನಕ್ಕೆ ಬಂದರೆ ಅವರ ಜೊತೆ ಮಾತುಕತೆ ನಡೆಸಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದರು. ಆದರೆ, ಪ್ರತಿಭಟನೆ ನಡೆಸುತ್ತಿರುವ ರೈತರು ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ.
ಬೆಳಗ್ಗೆ 11ಗಂಟೆಗೆ ಮುಂದಿನ ಹೋರಾಟದ ಬಗ್ಗೆ ರೈತರು ಸಭೆ ನಡೆಸಲಿದ್ದಾರೆ. ದೆಹಲಿ ಪ್ರವೇಶ ಮಾಡುವ ಎಲ್ಲಾ 5 ಪ್ರವೇಶ ದ್ವಾರವನ್ನು ಬಂದ್ ಮಾಡುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ. ರೈತರು ದೆಹಲಿಯ ಮಧ್ಯಭಾಗದಕ್ಕೆ ಬರದಂತೆ ತಡೆಯುವ ಪ್ರಯತ್ನಗಳು ನಡೆಯುತ್ತಿವೆ.
ಪಂಜಾಬ್ ಮತ್ತು ಹರ್ಯಾಣ ರಾಜ್ಯದ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಹಲವಾರು ಜನರು, ಸಂಘಟನೆಗಳು ಬೆಂಬಲ ನೀಡಿವೆ. ಹೊಸ ಕೃಷಿ ಕಾನೂನುಗಳ ವಿರುದ್ಧ ರೈತರು ಹೋರಾಟವನ್ನು ನಡೆಸುತ್ತಿದ್ದಾರೆ.

ನಮ್ಮ ಹೋರಾಟ ನಿಲ್ಲುವುದಿಲ್ಲ
"ಗೃಹ ಸಚಿವ ಅಮಿತ್ ಶಾ ವಿಧಿಸಿರುವ ಷರತ್ತು ನಮಗೆ ಒಪ್ಪಿತವಾಗಿಲ್ಲ. ನಾವು ಷರತ್ತುಬದ್ಧ ಯಾವುದೇ ಮಾತುಕತೆ ನಡೆಸುವುದಿಲ್ಲ. ನಮ್ಮ ಹೋರಾಟ ಸಿಂಘುಗಡಿಯಲ್ಲಿ ಅಂತ್ಯಗೊಳ್ಳುವುದಿಲ್ಲ" ಎಂದು ಭಾರತೀಯ ಕಿಸಾನ್ ಯೂನಿಯನ್ ಅಧ್ಯಕ್ಷ ಸುರ್ಜೀತ್ ಎಸ್. ಫುಲ್ ಹೇಳಿದ್ದಾರೆ.

ಮಾತುಕತೆಯ ಪ್ರಸ್ತಾಪ
ಹರ್ಯಾಣ-ದೆಹಲಿ ಗಡಿಯಲ್ಲಿರುವ ರೈತರು ದೆಹಲಿಯ ಬುರಾಡಿ ಮೈದಾನಕ್ಕೆ ತೆರಳಿದರೆ ಡಿಸೆಂಬರ್ 3ರೊಳಗೆ ಅವರ ಜೊತೆ ಅಮಿತ್ ಶಾ ಮಾತುಕತೆ ನಡೆಸಲಿದ್ದಾರೆ ಎಂಬ ಪ್ರಸ್ತಾಪವನ್ನು ಮುಂದಿಡಲಾಗಿತ್ತು. ಆದರೆ, ರೈತರು ಇದಕ್ಕೆ ಒಪ್ಪಿಲ್ಲ.

ಅದು ತೆರೆದ ಜೈಲು
ರೈತರ ಜೊತೆ ಮಾತುಕತೆ ನಡೆಸಲು ಷರತ್ತು ಹಾಕುವುದು ರೈತರಿಗೆ ಮಾಡುವ ಅವಮಾನ. ನಾವು ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಲಿದ್ದೇವೆ. ಬುರಾಡಿ ಉದ್ಯಾನಕ್ಕೆ ಹೋಗುವುದಿಲ್ಲ. ಅದು ತೆರೆದ ಜೈಲು ಎಂದು ರೈತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
|
ಷರತ್ತು ಹಾಕದೆ ಮಾತುಕತೆ ನಡೆಸಿ
"ರೈತರಿಗೆ ಯಾವುದೇ ಷರತ್ತು ಹಾಕದೆ ಅವರ ಜೊತೆ ಮಾತುಕತೆ ನಡೆಸಬೇಕು" ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.












Click it and Unblock the Notifications