ರೈತರು ನಿರ್ದಿಷ್ಟ ವಿಷಯಗಳೊಂದಿಗೆ ಚರ್ಚೆಗೆ ಬರಲಿ: ತೋಮರ್
ನವದೆಹಲಿ,ಡಿಸೆಂಬರ್ 1: ಪ್ರತಿಭಟನಾ ನಿರತ ರೈತರು ನಿರ್ದಿಷ್ಟ ವಿಷಯಗಳೊಂದಿಗೆ ಚರ್ಚೆಗೆ ಬರುವಂತೆ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ವಿವಿಧ ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿರುವಂತೆಯೇ ಇಂದು ವಿಜ್ಞಾನ ಭವನದಲ್ಲಿ 35 ರೈತ ಸಂಘಟನೆಗಳ ಪ್ರತಿನಿಧಿಯೊಂದಿಗೆ ಸಮಗ್ರವಾಗಿ ಚರ್ಚೆ ನಡೆಸಲಾಗಿದೆ.
ಎಲ್ಲಾ ರೈತರೊಂದಿಗೆ ಚರ್ಚಿಸಲು ಸಿದ್ಧವಿರುವುದಾಗಿ ತಿಳಿಸಿದ ಸಚಿವರು, ಪ್ರತಿಭಟನೆ ಯಾವಾಗ ಅಂತ್ಯವಾಗಲಿದೆ ಎಂಬುದನ್ನು ಕಾಲವೇ ನಿರ್ಧರಿಸಲಿದೆ. ರೈತರು ಯಾವುದೇ ನಿರ್ದಿಷ್ಟ ಸಮಸ್ಯೆಗಳೊಂದಿಗೆ ಚರ್ಚಿಸಲು ಬಂದರೆ ಅವುಗಳನ್ನು ಪರಿಶೀಲಿಸುವುದಾಗಿ ನರೇಂದ್ರ ಸಿಂಗ್ ತೋಮರ್ ತಿಳಿಸಿದ್ದಾರೆ.

ಮತ್ತೆ ಡಿಸೆಂಬರ್ 3 ರಂದು ಸಭೆ ನಡೆಯಲಿದೆ.ಚಿಕ್ಕ ಸಮಿತಿ ರಚನೆಗೆ ಸಲಹೆ ನೀಡಿದ್ದೇವೆ, ಆದರೆ, ಆ ಸಮಿತಿಯಲ್ಲಿ ತಾವಿರಬೇಕೆಂದು ಅವರು ಹೇಳಿದ್ದು, ಅದಕ್ಕೆ ಒಪ್ಪಿಕೊಂಡಿರುವುದಾಗಿ ತೋಮರ್ ಸಭೆಯ ಬಳಿಕ ತಿಳಿಸಿರುವುದಾಗಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.
ವಿವಾದಾತ್ಮಕ ಕೃಷಿ ಕಾಯ್ದೆಗಳ ಕುರಿತು ಚರ್ಚಿಸಲು ಸಮಿತಿಯೊಂದನ್ನು ರಚಿಸುವ ಕೇಂದ್ರ ಸರ್ಕಾರದ ಪ್ರಸ್ತಾಪವನ್ನು ರೈತ ಸಂಘಟನೆಗಳ ಪ್ರತಿನಿಧಿಗಳು ತಿರಸ್ಕರಿಸಿದ್ದಾರೆ. ಇದರಿಂದ ಮಂಗಳವಾರ ಮಧ್ಯಾಹ್ನದ ಬಳಿಕ ನಡೆದ ಸಭೆ ಯಾವುದೇ ಫಲಿತಾಂಶ ಸಿಗದೆ ಅಂತ್ಯಗೊಂಡಿದೆ.
ಈಗ ಸಮಿತಿ ರಚಿಸಲು ಸಮಯವಲ್ಲ ಎಂದು ರೈತ ಸಂಘಟನೆಗಳು ಕೇಂದ್ರದ ಮೂವರು ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾಡಿದ ಪ್ರಸ್ತಾಪವನ್ನು ತಿರಸ್ಕರಿಸಿವೆ. ಹಾಗೆಯೇ ಗುರುವಾರ ಮತ್ತೊಂದು ಸಭೆಯನ್ನು ನಿಗದಿಗೊಳಿಸಲಾಗಿದ್ದು, ಅಲ್ಲಿಯವರೆಗೂ ಪ್ರತಿಭಟನೆ ಮುಂದುವರಿಸುವುದಾಗಿ ತಿಳಿಸಿವೆ.
ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಮತ್ತಷ್ಟು ರೈತರು ಮತ್ತು ಜಾತಿ ಸಂಘಟನೆಗಳು ಪಂಜಾಬ್ ಹಾಗೂ ಹರಿಯಾಣದಿಂದ ದೆಹಲಿಯತ್ತ ತೆರಳುತ್ತಿದ್ದಾರೆ. ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆದುಕೊಳ್ಳುವಂತೆ ರೈತರು ಆಗ್ರಹಿಸಿದ್ದಾರೆ. ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ಪ್ರತಿಭಟನೆ ಮುಂದುವರಿಸಲಾಗುವುದು ಎಂದು ತಿಳಿಸಿದ್ದಾರೆ.












Click it and Unblock the Notifications