ಟೀ ಕುಡಿಯಲು ಕರೆದ ಕೇಂದ್ರ ಸಚಿವರಿಗೆ ಜಿಲೇಬಿ ತಿನ್ನಲು ಬರ ಹೇಳಿದ ರೈತರು
ನವದೆಹಲಿ, ಡಿ 2: ಲೋಕಸಭಾ ಚುನಾವಣೆಯ ವೇಳೆ 'ಚಾಯ್ ಪೇ ಚರ್ಚಾ' ಬಿಜೆಪಿಯ ಘೋಷ ವಾಕ್ಯವಾಗಿತ್ತು. ಆದರೆ ಈ ಚಾಯ್, ರಾಜಧಾನಿಯಲ್ಲಿ ಧರಣಿ ಕೂತಿರುವ ಅನ್ನದಾತರ ಮನವೊಲಿಸಲು ಸಾಧ್ಯವಾಗಲಿಲ್ಲ.
ನೂತನ ಕೃಷಿ ನೀತಿ ವಿರುದ್ದ ಸಿಡಿದೆದ್ದಿರುವ ರೈತರ ಜೊತೆಗಿನ ಕೇಂದ್ರ ಸರಕಾರದ ಮಾತುಕತೆ ವಿಫಲವಾಗಿದೆ. ಮತ್ತೊಂದು ಪ್ರಸ್ತಾವನೆಯೊಂದಿಗೆ ಕೇಂದ್ರ ಸರಕಾರ ಗುರುವಾರ (ಡಿ 3) ರೈತ ಮುಖಂಡರ ಜೊತೆ ಮಾತುಕತೆ ನಡೆಸಲಿದೆ.
35 ರೈತರ ಜೊತೆಗೆ ನಗರದ ವಿಜ್ಞಾನ ಭವನದಲ್ಲಿ, ಕೇಂದ್ರ ಕೃಷಿ ಸಚಿವ ನರೇಂದ್ರ ತೋಮರ್ ಸುಮಾರು ತೊಂಬತ್ತು ನಿಮಿಷಗಳ ಕಾಲ ಮಾತುಕತೆ ನಡೆಸಿದರು. ರೈತರ ಬೇಡಿಕೆಗಳನ್ನು ಪರಿಶೀಲಿಸಲು ಸಮಿತಿ ರಚಿಸುವುದಾಗಿ ಕೇಂದ್ರ ಸರಕಾರ ನೀಡಿದ ಭರವಸೆಯನ್ನು ರೈತರ ಪ್ರತಿನಿಧಿಗಳು ತಿರಸ್ಕರಿಸಿದರು.

ವಿಜ್ಞಾನ ಭವನದ ಹೊರಗಡೆ ರೈತರ ಪ್ರತಿನಿಧಿಗಳಿಗೆ ಟೀ ವ್ಯವಸ್ಥೆಯನ್ನು ಮಾಡಲಾಗಿತ್ತು. ಆದರೆ ಈ ಟೀ ಪಾರ್ಟಿಯಲ್ಲಿ ರೈತ ಮುಖಂಡರು ಪಾಲ್ಗೊಳ್ಳಲಿಲ್ಲ. ಭಾರೀ ಪ್ರತಿಭಟನೆಯಲ್ಲಿ ನಿರತರಾಗಿರುವ ರೈತರ ಪ್ರತಿನಿಧಿಗಳು, ಸಾರಾಸಗಟವಾಗಿ, ಕೇಂದ್ರದ ಆಫರ್ ಅನ್ನು ತಿರಸ್ಕರಿಸಿದರು.
ಸಭೆಯ ನಂತರ ಮಾತನಾಡಿದ ಪ್ರತಿನಿಧಿಯೊಬ್ಬರು, "ಕೇಂದ್ರ ಸಚಿವ ತೋಮರ್ ಸಾಹೇಬ್ರು ಟೀ ಕುಡಿಯಲು ನಮ್ಮನ್ನು ಆಹ್ವಾನಿಸಿದರು. ನಾವು ಬರುವುದಿಲ್ಲ ಎಂದೆವು, ಯಾಕೆಂದರೆ, ನಿಮ್ಮ ಮಾಧ್ಯಮ ರೈತರು ಟೀ, ಪಕೋಡ ತಿನ್ನಲು ಬಂದರು ಎಂದು ಸುದ್ದಿ ಮಾಡುತ್ತವೆ. ಅದರ ಬದಲು, ನೀವೇ ನಮ್ಮ ಸ್ಥಳಕ್ಕೆ ಬನ್ನಿ, ನಿಮಗೆ ಜಿಲೇಬಿ ತಿನ್ನಿಸುತ್ತೇವೆ"ಎಂದು ರೈತ ಮುಖಂಡ ರುಂದು ಸಿಂಗ್ ಹೇಳಿದ್ದಾರೆ.
"ಕಳೆದ ನವೆಂಬರ್ ಹದಿಮೂರರಂದು ನಡೆದ ಸಭೆಯಲ್ಲಿ ನಮ್ಮ ಬೇಡಿಕೆಯನ್ನು ಕೇಂದ್ರ ಸರಕಾರದ ಮುಂದೆ ಸ್ಪಷ್ಟವಾಗಿ ಇಟ್ಟಿದ್ದೆವು. ಇಂದಿನ ಸಭೆಯಲ್ಲಿ ಆಶಾದಾಯಕ ಬೆಳವಣಿಗೆ ನಡೆಯಬಹುದು ಎನ್ನುವ ನಮ್ಮ ನಿರೀಕ್ಷೆ ಸುಳ್ಳಾಗಿದೆ"ಎಂದು ಭಾರತೀಯ ಕಿಶಾನ್ ಯೂನಿಯನ್ ನ ಚಂದ ಸಿಂಗ್ ಬೇಸರ ವ್ಯಕ್ತ ಪಡಿಸಿದ್ದಾರೆ. (ಚಿತ್ರ:ಪಿಟಿಐ)












Click it and Unblock the Notifications