ಫೇಸ್ಬುಕ್ ಸಲ್ಲಾಪ; ಹತಾಶೆ, ಕೊನೆಗೆ ಶೂಟೌಟ್
ಜಬಲ್ಪುರ (ಮಧ್ಯಪ್ರದೇಶ), ಏ 21: ಫೇಸ್ಬುಕ್ ನಲ್ಲಿ ಸರಸ ಸಲ್ಲಾಪದಲ್ಲಿ ಮೈ ಮರೆತಿದ್ದ ಯುವಕನೊಬ್ಬ ಸತ್ಯ ಬಯಲಾದಾಗ ಹತಾಶೆಗೊಳಗಾಗಿ, ಮೋಸ ಮಾಡಿದವಳನ್ನು ಗುಂಡಿಟ್ಟು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಘಟನೆ ನಡೆದಿದೆ.
ಕೊಲೆಯಾದ ಮಹಿಳೆಯನ್ನು ಜ್ಯೋತಿಕೋರಿ ಎಂದು ಗುರುತಿಸಲಾಗಿದ್ದು, ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡ ಯುವಕ ವಿನೀತ್ ಸಿಂಗ್. ಮಧ್ಯ ಪ್ರದೇಶ ಸರ್ಕಾರದ ನೀರಾವರಿ ಇಲಾಖೆಯಲ್ಲಿ ಗುಮಾಸ್ತನ ಪತ್ನಿಯಾಗಿದ್ದ ಜ್ಯೋತಿಕೋರಿಗೆ 21 ವರ್ಷದ ಹಿರಿಯ ಮಗಳು ಸೇರಿದಂತೆ ಒಟ್ಟು 3 ಮಕ್ಕಳಿದ್ದಾರೆ.
ಫೇಸ್ಬುಕ್ ನ ಮತ್ತೊಂದು ಕರಾಳಮುಖ:

ವಿನೀತ್ ಸಿಂಗ್ ಮತ್ತು ಜ್ಯೋತಿ ಕೋರಿ (Jyoti Kori) ಆಕಸ್ಮಿಕವಾಗಿ ಫೇಸ್ ಬುಕ್ ನಲ್ಲಿ ಸಂದಿಸಿದ್ದು, ಕ್ರಮೇಣ ಸ್ನೇಹಿತರಾಗಿದ್ದಾರೆ. ಆದರೆ ಜ್ಯೋತಿ ತಾನು 21 ವರ್ಷದ ಯುವತಿ ಹಾಗೂ ಅವಿವಾಹಿತೆ ಎಂದು ಹೇಳಿಕೊಂಡಿದ್ದಾಳೆ. ಇದನ್ನು ನಂಬಿದ ವಿನೀತ್ ಆಕೆಯನ್ನು ಪ್ರೇಮಿಸಲು ಆರಂಭಿಸಿದ್ದಾನೆ.
ಸತತ 3 ವರ್ಷ ಇಬ್ಬರೂ ಸಂಪರ್ಕದಲ್ಲಿದ್ದು, ಪ್ರೇಮ ಸಂಭಾಷಣೆಯನ್ನು ನಡೆಸಿದ್ದಾರೆ. ಈ ನಡುವೆ ಪರಸ್ಪರ ಭೇಟಿಯಾಗಬೇಕು ಎಂಬ ಇಚ್ಚೆಯನ್ನು ವಿನೀತ್ ವ್ಯಕ್ತಪಡಿಸಿದ್ದಾನೆ. ತನ್ನ ಮನೆಯವರಿಗೆ ಸುಳಿವು ನೀಡದಂತೆ 3 ವರ್ಷ ಫೇಸ್ ಬುಕ್ ಪ್ರಣಯವನ್ನು ಕಾಪಾಡಿಕೊಂಡು ಬಂದಿದ್ದ ಜ್ಯೋತಿ, ಎರಡು ದಿನ ತಾಯಿ ಮನೆಗೆ ಹೋಗಿ ಬರುವುದಾಗಿ ಹೇಳಿ ವಿನೀತನನ್ನು ಭೇಟಿ ಮಾಡಲು ಹೋಗಿದ್ದಾಳೆ.
ಇತ್ತ ಉತ್ತರ ಪ್ರದೇಶದ ಮುಜಫ್ಫರನಗರ ಮೂಲದ ವಿನೀತ್ ಕೂಡ ದೆಹಲಿಯಲ್ಲಿ ಕೆಲಸ ಹುಡುಕಲು ಹೋಗುತ್ತಿರುವುದಾಗಿ ಮನೆಯಲ್ಲಿ ಸುಳ್ಳು ಹೇಳಿ ಬಂದಿದ್ದಾನೆ. ಕಳೆದ ಶುಕ್ರವಾರ ಇಬ್ಬರೂ ಮುಖಾಮುಖಿ ಭೇಟಿಯಾದಾಗ ವಿನೀತನಿಗೆ ಆಘಾತವಾಗಿದ್ದು, ಸುಳ್ಳು ಹೇಳಿದ್ದಕ್ಕಾಗಿ ಆಕೆಯೊಂದಿಗೆ ಜಗಳವಾಡಿ, ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ.
ಮೂತಿ ಮುಖ ನೋಡದೆ ಪ್ರೀತಿಸಿ ಯಾಮಾರಿದ ವಿನೀತ್, ನಂತರ ತಾನೂ ಗುಂಡು ಹಾರಿಸಿಕೊಂಡು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಆರಂಭದಲ್ಲಿ ಈ ಕೊಲೆಗಳಿಗೆ ಕಾರಣ ತಿಳಿದು ಬಂದಿರಲಿಲ್ಲ. ಸಾಯುವ ಮುನ್ನ ವಿನೀತ್ ನೀಡಿದ ಹೇಳಿಕೆ ಆಧರಿಸಿ ತನಿಖೆ ನಡೆಸಿದಾಗ ಫೇಸ್ ಬುಕ್ ದುರಂತ ಪ್ರೇಮಕಥೆ ಬೆಳಕಿಗೆ ಬಂದಿದೆ.












Click it and Unblock the Notifications