ಇನ್ನು ಐದು ವರ್ಷ ನರೇಂದ್ರ ಮೋದಿ ಆಡಳಿತ ಕಾಣಬೇಕಿದೆ: ಸನ್ನಿ ಡಿಯೋಲ್
ನವದೆಹಲಿ, ಏಪ್ರಿಲ್ 23: ಸ್ಟಾರ್ ನಟ ಧರ್ಮೇಂದ್ರ ಅವರ ಪುತ್ರ, ನಟ ಸನ್ನಿ ಡಿಯೋಲ್ ಅವರು ಇಂದು ಅಧಿಕೃತವಾಗಿ ಭಾರತೀಯ ಜನತಾ ಪಕ್ಷ(ಬೆಜೆಪಿ)ವನ್ನು ಸೇರಿಕೊಂಡಿದ್ದಾರೆ. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರ ಸಮ್ಮುಖದಲ್ಲಿ ಬಿಜೆಪಿ ಸದಸ್ಯತ್ವ ಪಡೆದುಕೊಂಡರು.
ಸನ್ನಿ ಡಿಯೋಲ್ ಅವರು ಗುರ್ ದಾಸ್ಪುರ್ ಅಥವಾ ಅಮೃತಸರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆಗಳು ಕಂಡು ಬಂದಿವೆ. ಆದರೆ, ಈ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ ಎಂದು ಬಿಜೆಪಿ ಮೂಲಗಳು ಹೇಳಿವೆ.
ಚುನಾವಣಾ ಅಂಗಳಕ್ಕೆ ಗೌತಮ್ ಗಂಭೀರ್, ಪೂರ್ವ ದೆಹಲಿಯಿಂದ ಸ್ಪರ್ಧೆ
ಪಂಜಾಬಿನಲ್ಲಿ ಶಿರೋಮಣಿ ಅಕಾಲಿ ದಳದ ಜತೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಒಟ್ಟು 13 ಲೋಕಸಭಾ ಸ್ಥಾನಗಳ ಪೈಕಿ ಅಮೃತಸರ್, ಗುರ್ ದಾಸ್ಪುರ್, ಹೋಶಿಯಾರ್ ಪುರ್ 3 ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸುತ್ತಿದೆ. ಅಮೃತಸರ ಕ್ಷೇತ್ರಕ್ಕೆ ನಟಿ ಪೂನಂ ದಿಲ್ಲೋನ್ ಹಾಗೂ ರಾಜಿಂದರ್ ಸಿಂಗ್ ಹೆಸರು ಕೂಡ ಕೇಳಿ ಬಂದಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ಪಡೆದ ಬಳಿಕ ಮಾತನಾಡಿದ ಸನ್ನಿ ಡಿಯೋಲ್, ನನ್ನ ತಂದೆಯವರು ಅಟಲ್ ಜೀ ಬೆಂಬಲಿಸಿ, ಅವರೊಂದಿಗೆ ಕಾರ್ಯನಿರ್ವಹಿಸಿದ್ದರು. ಈಗ ನಾನು ಮೋದಿ ಜೀ ಜತೆ ಕಾರ್ಯನಿರ್ವಹಿಸಲು ಬಯಸಿದ್ದೇನೆ, ಮುಂದಿನ ಐದು ವರ್ಷಗಳ ಕಾಲ ಮೋದಿ ಆಡಳಿತದ ಭಾಗವಾಗುವ ಇಚ್ಛೆಯಿದೆ ಎಂದಿದ್ದಾರೆ.
ನಿರ್ಮಲಾ ಸೀತಾರಾಮನ್
ಬಿಜೆಪಿಗೆ ಸನ್ನಿ ಡಿಯೋಲ್ ಸೇರ್ಪಡೆ ಬಳಿಕ ಮಾತನಾಡಿದ ಸಚಿವೆ ನಿರ್ಮಲಾ ಸೀತಾರಾಮನ್, 1997ರ ಬಾರ್ಡರ್ ಚಿತ್ರವು ಭಾರತ -ಪಾಕಿಸ್ತಾನದ 1971ರ ಯುದ್ಧದ ಕಥೆಯ ಮೇಲೆ ಆಧಾರವಾಗಿತ್ತು. ಸನ್ನಿ ಡಿಯೋಲ್ ಅವರು ಈ ಚಿತ್ರದಲ್ಲಿ ನಟಿಸಿ, ದೇಶಭಕ್ತಿ, ರಾಷ್ಟ್ರೀಯತೆಯ ಸಂದೇಶ ಸಾರಿದರು. ಜನತೆಗೆ ದೇಶದ ಬಗ್ಗೆ ಅಭಿಮಾನ ಮೂಡುವಂಥ ಕಾರ್ಯ ಮಾಡುತ್ತಾ ಬಂದಿದ್ದಾರೆ. ನಿಮ್ಮ ಹೃದಯದಲ್ಲಿ ದೇಶಭಕ್ತಿ ಇರದಿದ್ದರೆ ಇಂಥ ನಟನೆ ಬರಲು ಸಾಧ್ಯವಿಲ್ಲ ಎಂದು ಹೊಗಳಿದರು.
ಗುರ್ ದಾಸನ್ ಪುರ ಕ್ಷೇತ್ರದಿಂದ ಸ್ಪರ್ಧೆ?
ಗುರ್ ದಾಸನ್ ಪುರ ಕ್ಷೇತ್ರದಿಂದ ಸನ್ನಿ ಡಿಯೋಲ್ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಪಂಜಾಬಿನ ಈ ಕ್ಷೇತ್ರವನ್ನು ಹಿರಿಯ ನಟ ವಿನೋದ್ ಖನ್ನಾ ಪ್ರತಿನಿಧಿಸುತ್ತಿದ್ದರು. 2017ರಲ್ಲಿ ವಿನೋದ್ ಖನ್ನಾ ಅವರ ಮರಣ ನಂತರ ಅವರ ಪತ್ನಿ ಕವಿತಾ ಖನ್ನ ಅಥವಾ ಅಕ್ಷಯ್ ಖನ್ನಾ ಅವರನ್ನು ಕರೆ ತರುವ ಸುದ್ದಿ ಹಬ್ಬಿತ್ತು.
ಬಾಲಿವುಡ್ ನ ಜನಪ್ರಿಯ ನಟ ಸನ್ನಿ ಡಿಯೋಲ್
62 ವರ್ಷ ವಯಸ್ಸಿನ ಸನ್ನಿ ಡಿಯೋಲ್ ಅವರು ಹಿಂದಿ ಚಿತ್ರರಂಗದಲ್ಲಿ ಹೆಚ್ಚಾಗಿ ಸಾಹಸಭರಿತ ಚಿತ್ರಗಳಲ್ಲಿ ಕಾಣಿಸಿಕೊಂಡವರು. ಘಾಯಲ್, ಗದರ್ ಎಕ್ ಪ್ರೇಮ್ ಕಥಾ, ದಾಮಿನಿ, ಬಾರ್ಡರ್ ಚಿತ್ರಗಳ ಅಭಿನಯಕ್ಕಾಗಿ ಹೆಸರುವಾಸಿ. ಮೋದಿ ಅವರ ಲೋಕಸಭಾ ಕ್ಷೇತ್ರ ವಾರಣಾಸಿಯ ಕಥೆಯುಳ್ಳ ಮೊಹಲ್ ಅಸ್ಸಿ ಚಿತ್ರದಲ್ಲಿ ಕರಸೇವಕನ ಪಾತ್ರದಲ್ಲಿ ಸನ್ನಿ ಕಾಣಿಸಿಕೊಂಡಿದ್ದರು. ಈ ಚಿತ್ರ ವಿವಾದಕ್ಕೂ ಕಾರಣವಾಗಿತ್ತು.
ತಂದೆ, ತಾಯಿ ಇಬ್ಬರು ಸಂಸದರಾಗಿದ್ದವರು
ಅಪ್ಪ ಧರ್ಮೇಂದ್ರ, ಮಲತಾಯಿ ಹೇಮಮಾಲಿನಿ ನಂತರ ಸನ್ನಿ ಅವರು ಸಕ್ರಿಯ ರಾಜಕೀಯ ಪ್ರವೇಶಿಸುತ್ತಿದ್ದಾರೆ. 2004ರಲ್ಲಿ ರಾಜಸ್ಥಾನದ ಬಿಕಾನೇರ್ ನಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಧರ್ಮೇಂದ್ರ ಅವರು ಗೆಲುವು ಸಾಧಿಸಿದ್ದರು. ಹೇಮಮಾಲಿನಿ ಅವರು ಉತ್ತರಪ್ರದೇಶದ ಮಥುರಾ ಕ್ಷೇತ್ರದ ಹಾಲಿ ಸಂಸದೆಯಾಗಿದ್ದು, ಪುನರ್ ಆಯ್ಕೆ ಬಯಸಿ, ಈ ಬಾರಿ ಕಣದಲ್ಲಿದ್ದಾರೆ.
ಪಂಜಾಬಿನಲ್ಲಿ 3 ಕ್ಷೇತ್ರಗಳಲ್ಲಿ ಬಿಜೆಪಿ ನೇರ ಸ್ಪರ್ಧೆ
ಪಂಜಾಬ್ ನಲ್ಲಿ ಮೇ 19ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಇದು ಲೋಕಸಭೆ ಚುನಾವಣೆಯ ಕೊನೆಯ ಹಂತದ ಮತದಾನದ ಪ್ರಕ್ರಿಯೆಯಾಗಿದೆ. ಮೇ 23ರಂದು ಫಲಿತಾಂಶ ಹೊರಬರಲಿದೆ.ಒಟ್ಟು 13 ಲೋಕಸಭಾ ಸ್ಥಾನಗಳ ಪೈಕಿ ಅಮೃತಸರ್, ಗುರ್ ದಾಸ್ಪುರ್, ಹೋಶಿಯಾರ್ ಪುರ್ 3 ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸುತ್ತಿದೆ.