ಪ್ರಚಾರ ಅವಧಿ ಕಡಿತ: ಚುನಾವಣೆ ಆಯೋಗದ ನಿರ್ಧಾರ ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕೆ ಎಂದ ಕಾಂಗ್ರೆಸ್
ನವದೆಹಲಿ, ಮೇ 16: ಪಶ್ಚಿಮ ಬಂಗಾಲದಲ್ಲಿ ಲೋಕಸಭೆ ಚುನಾವಣೆಯ ಬಹಿರಂಗ ಪ್ರಚಾರದ ಅವಧಿಯನ್ನು ಚುನಾವಣೆ ಆಯೋಗವು ಒಂದು ದಿನ ಕಡಿತಗೊಳಿಸಿದ್ದು, ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿಗೆ ನೀಡಿದ ಕೊಡುಗೆ ಹಾಗೂ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಪ್ಪು ಚುಕ್ಕೆ ಎಂದು ಕಾಂಗ್ರೆಸ್ ಕರೆದಿದೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಕಾಂಗ್ರೆಸ್ ವಕ್ತಾರ ರಣ್ ದೀಪ್ ಸುರ್ಜೆವಾಲಾ, ಪಶ್ಚಿಮ ಬಂಗಾಲದ ಮಾಥುರ್ ಪುರ್ ಹಾಗೂ ಡುಂ ಡುಂನಲ್ಲಿ ಮುಂಚೆಯೇ ನಿಗದಿ ಆಗಿದ್ದ ಪ್ರಧಾನಿ ಮೋದಿ ಚುನಾವಣೆ ಪ್ರಚಾರ ಸಭೆಗೆ ಅನುಕೂಲ ಆಗುವಂತೆ ಈ ದಿನ ರಾತ್ರಿ ಹತ್ತು ಗಂಟೆ ತನಕ ಚುನಾವಣೆ ಆಯೋಗ ಅವಕಾಶ ನೀಡಿದೆ ಎಂದಿದ್ದಾರೆ.
ಭಾರತದ ಚುನಾವಣೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬುಧವಾರದಂದು ಪಶ್ಚಿಮ ಬಂಗಾಲದಲ್ಲಿ ಪರಿಚ್ಛೇದ 324 ಬಳಸಿ, ಅಲ್ಲಿನ ಒಂಬತ್ತು ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ಪ್ರಚಾರ ಅವಧಿ ಕಡಿತಗೊಳಿಸಲಾಯಿತು. ಭಯ ಹಾಗೂ ದ್ವೇಷದ ವಾತಾವರಣ ಎಂಬ ಕಾರಣ ನೀಡಿ, ಚುನಾವಣೆ ಆಯೋಗ ಈ ನಿರ್ಧಾರ ಮಾಡಿತು.
ಬಹಿರಂಗ ಪ್ರಚಾರದ ಅವಧಿ 20 ಗಂಟೆ ಕಡಿತ
ಮಂಗಳವಾರದಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ರೋಡ್ ಶೋ ನಂತರ ಕೋಲ್ಕತ್ತದಲ್ಲಿ ಭಾರೀ ಹಿಂಸಾಚಾರ ನಡೆದಿತ್ತು. ಅಂದ ಹಾಗೆ ಚುನಾವಣೆ ಪ್ರಚಾರವು ಶುಕ್ರವಾರ ಸಂಜೆ 5 ಗಂಟೆಗೆ ಮುಕ್ತಾಯ ಆಗಬೇಕಿತ್ತು. ಆ ಒಂಬತ್ತು ಲೋಕಸಭಾ ಕ್ಷೇತ್ರಗಳಿಗೆ ಮೇ 19ನೇ ತಾರೀಕು ಚುನಾವಣೆ ನಡೆಯಲಿದೆ. ಚುನಾವಣೆ ಆಯೋಗವು ಬಹಿರಂಗ ಪ್ರಚಾರದ ಅವಧಿಯನ್ನು 20 ಗಂಟೆ ಕಡಿತಗೊಳಿಸಿ, ಗುರುವಾರ ರಾತ್ರಿ 10ಕ್ಕೆ ಕೊನೆ ಮಾಡಿದೆ. ಇದು ಭಾರತದ ಪ್ರಜಾಪಭುತ್ವ ವ್ಯವಸ್ಥೆಗೆ ಕಪ್ಪು ಚುಕ್ಕೆ. ಮೋದಿ ಅವರದು ಮುಂಚೆಯೇ ನಿಗದಿಯಾದ ಪ್ರಚಾರ ಸಭೆಗೆ ಯಾವುದೇ ತೊಂದರೆ ಆಗದಂತೆ ಈ ರೀತಿಯ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸುರ್ಜೇವಾಲಾ ಹೇಳಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಶಿಕ್ಷಿಸುತ್ತಿದೆ
ಬಿಜೆಪಿ ಅಧ್ಯಕ್ಷ ಅಮಿತ್ ಶಾ ನೇತೃತ್ವದ ಬಿಜೆಪಿ ಗೂಂಡಾಗಳನ್ನು ಶಿಕ್ಷೆಗೊಳಪಡಿಸುವುದು ಬಿಟ್ಟು, ಚುನಾವಣೆ ಅಯೋಗವು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಶಿಕ್ಷಿಸುತ್ತಿದೆ ಎಂದು ಆರೋಪಿಸಿದ ಸುರ್ಜೇವಾಲಾ, ನ್ಯಾಯಸಮ್ಮತ ಹಾಗೂ ಮುಕ್ತ ಚುನಾವಣೆ ನಡೆಸಲು ತನ್ನಿಂದ ಅಗುವುದಿಲ್ಲ ಎಂದು ಚುನಾವಣೆ ಅಯೋಗ ಒಪ್ಪಿಕೊಂಡಂತೆ ಆಗಿದೆ ಎಂದರು.
ಮೋದಿ- ಅಮಿತ್ ಶಾ ಕೈಯಲ್ಲಿ ಅಸಹಾಯಕವಾಯಿತೇ ಚು.ಆಯೋಗ?
ಈಗ ಪ್ರತಿಯೊಬ್ಬ ನಾಗರಿಕರೂ ಚುನಾವಣೆ ಆಯೋಗದ ಸ್ವಾತಂತ್ರ್ಯ, ನಿಷ್ಪಕ್ಷಪಾತ, ಉದ್ದೇಶ ಹಾಗೂ ನ್ಯಾಯ ಸಮ್ಮತ ಧೋರಣೆಯನ್ನು ಪ್ರಶ್ನಿಸುವಂತಾಗಿದೆ. ಮೋದಿ ಹಾಗೂ ಅಮಿತ್ ಶಾ ಜೋಡಿಯ ಕೈಯಲ್ಲಿ ನಿಸ್ಸಹಾಯಕವಾಯಿತೇ ಚುನಾವಣೆ ಆಯೋಗ ಎಂದು ಪ್ರಶ್ನಿಸುವಂತಾಗಿದೆ. ಆಡಳಿತಾರೂಢ ಬಿಜೆಪಿ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ದಾಳಿ ನಡೆಸುತ್ತಿದೆ ಎಂದು ಅರೋಪಿಸಿದ್ದಾರೆ.
ಮೋದಿ ಕೋಡ್ ಆಫ್ ಮಿಸ್ ಕಂಡಕ್ಟ್
ಕಾಂಗ್ರೆಸ್ ಈ ತನಕ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ವಿರುದ್ಧ ಚುನಾವಣೆ ಆಯೋಗದ ಬಳಿ ಹನ್ನೊಂದು ದೂರು ನೀಡಿದೆ. ಚುನಾವಣೆ ನೀತಿ ಸಂಹಿತೆಯನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ. ಆದರೆ ಚುನಾವಣೆ ಆಯೋಗವೇ ಮೋದಿ ಹಾಗೂ ಅಮಿತ್ ಶಾಗೆ ಶರಣಾಗಿದೆ. ಮಾಡೆಲ್ ಕೋಡ್ ಆಫ್ ಕಂಡಕ್ಟ್ (ಎಂಸಿಸಿ) ಎಂಬುದು ಮೋದಿ ಕೋಡ್ ಆಫ್ ಮಿಸ್ ಕಂಡಕ್ಟ್ ಆಗಿದೆ ಎಂದು ಸುರ್ಜೇವಾಲಾ ಆರೋಪ ಮಾಡಿದ್ದಾರೆ.