'ನನ್ನಿಂದ ಪವಾಡ ನಿರೀಕ್ಷಿಸಬೇಡಿ, ಬೂತ್ ಮಟ್ಟದಲ್ಲಿ 'ಕೈ' ಬಲಪಡಿಸಿ'
Recommended Video

ನವದೆಹಲಿ, ಫೆಬ್ರವರಿ 18: ನನ್ನಿಂದ 'ಪವಾಡ'ವನ್ನು ನಿರೀಕ್ಷೆ ಮಾಡಬೇಡಿ. ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಹೆಚ್ಚು ಶ್ರಮ ಹಾಕಿ ಎಂದು ಉತ್ತರಪ್ರದೇಶದ ಬುಂದೇಲ್ ಖಂಡ್ ನ ಕಾಂಗ್ರೆಸ್ ಕಾರ್ಯಕರ್ತರಿಗೆ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.
ಪೂರ್ವ ಉತ್ತರಪ್ರದೇಶದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಮಾತನಾಡಿ, ಯಾರಾದರೂ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುವುದು ಕಂಡುಬಂದರೆ ಅಂಥವರಿಗೆ ಹೊರಗೆ ಹೋಗಲು ಪಕ್ಷದ ಬಾಗಿಲು ತೆರೆದಿದೆ ಎಂದು ಅವರು ಹೇಳಿದ್ದಾರೆ ಎಂಬುದಾಗಿ ಸಭೆಯಲ್ಲಿ ಭಾಗವಹಿಸಿದ್ದ ಪಕ್ಷದ ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ.
ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ಪ್ರಿಯಾಂಕಾ ಗಾಂಧಿ ಅವರು ತಮಗೆ ಜವಾಬ್ದಾರಿ ವಹಿಸಿರುವ ಭಾಗದ ಬೂತ್ ಮಟ್ಟದ ಸಂಘಟನೆಯ ಪರಿಶೀಲನೆ ಮಾಡಿದ್ದಾರೆ. ಆ ಭಾಗದಲ್ಲಿ ಹತ್ತೊಂಬತ್ತು ವಿಧಾನಸಭಾ ಕ್ಷೇತ್ರ ಹಾಗೂ ನಾಲ್ಕು ಲೋಕಸಭಾ ಕ್ಷೇತ್ರಗಳು ಬರಲಿವೆ. ಬುಂದೇಲ್ ಖಂಡ್ ವ್ಯಾಪ್ತಿಯಲ್ಲಿ ಝಾನ್ಸಿ- ಲಲಿತ್ ಪುರ್, ಜಲೌನ್, ಬಂದಾ ಹಾಗೂ ಹಮೀರ್ ಪುರ್ ಲೋಕಸಭಾ ಕ್ಷೇತ್ರಗಳು ಬರಲಿವೆ.

ಮೇಲ್ಮಟ್ಟದಿಂದ ನಾನು ಪವಾಡ ಮಾಡಲು ಸಾಧ್ಯವಿಲ್ಲ. ಪಕ್ಷದ ಕಾರ್ಯಕರ್ತರು ಬೂತ್ ಮಟ್ಟದಿಂದ ಪಕ್ಷವನ್ನು ಬಲಪಡಿಸಬೇಕು. ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಅನ್ನು ಬಲಪಡಿಸಲು ನಿಮ್ಮ ಬೆಂಬಲ ನನಗೆ ಬೇಕಿದೆ ಎಂದು ಸಭೆಯ ವೇಳೆ ಪ್ರಿಯಾಂಕಾ ಹೇಳಿದ್ದಾರೆ. ಮತ್ತು ಇದೇ ವೇಳೆ ದಿವಂಗತ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಪ್ರಿಯಾಂಕಾ ನೆನಪಿಸಿದ್ದಾಗಿ ಕಾರ್ಯಕರ್ತರು ಹೇಳಿದ್ದಾರೆ.
ಪಕ್ಷದ ಕಾರ್ಯಕರ್ತರು ರಾಣಿ ಲಕ್ಷ್ಮೀ ಬಾಯಿ ಪುತ್ಥಳಿಯನ್ನು ಪ್ರಿಯಾಂಕಾ ಗಾಂಧಿಗೆ ಕೊಡುಗೆ ನೀಡಿದ್ದಾರೆ. ಪ್ರಿಯಾಂಕಾ ಗಾಂಧಿ ಅವರನ್ನು ಪೂರ್ವ ಉತ್ತರಪ್ರದೇಶ ಹಾಗೂ ಜ್ಯೋತಿರಾದಿತ್ಯ ಸಿಂಧಿಯಾರನ್ನು ಪಶ್ಚಿಮ ಉತ್ತರಪ್ರದೇಶದ ಎಐಸಿಸಿ ಪ್ರಧಾನ ಕಾರ್ಯಾದರ್ಶಿಯಾಗಿ ನೇಮಿಸಲಾಗಿದೆ.












Click it and Unblock the Notifications