"ಪೊಲೀಸರನ್ನು ಏಕೆ ದೂಷಿಸುತ್ತೀರಾ, ಅವರು ಕಾನೂನು ಕಾಪಾಡುತ್ತಿದ್ದಾರೆ"
ನವದೆಹಲಿ, ಫೆಬ್ರವರಿ.16: ದೇಶದ ಪೊಲೀಸರನ್ನು ದೂಷಿಸುವ ಜನರ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಗುಡುಗಿದ್ದಾರೆ. ನವದೆಹಲಿಯಲ್ಲಿ 73ನೇ ರೈಸಿಂಗ್ ಡೇ ಪರೇಡ್ ನ್ನು ಉದ್ದೇಶಿಸಿ ಮಾತನಾಡಿದ ಅವರು, ಪೊಲೀಸರ ಕಾರ್ಯಕ್ಕೆ ಶಹಬ್ಬಾಶ್ ಎಂದರು.
ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಹೋರಾಟಕಾರರನ್ನು ನಿಯಂತ್ರಿಸುವುದಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಎಲ್ಲರೂ ಪೊಲೀಸರ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಆದರೆ, ಪೊಲೀಸರನ್ನು ಯಾರೊಬ್ಬರೂ ದೂಷಿಸುವಂತಿಲ್ಲ.
ದೇಶದ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಪೊಲೀಸರ ಕಾರ್ಯವೈಖರಿಯನ್ನು ಎಲ್ಲರೂ ಮೆಚ್ಚಿಕೊಳ್ಳಬೇಕು. ಎಲ್ಲ ಜಾತಿ-ಧರ್ಮಗಳನ್ನು ಬದಿಗೊತ್ತಿ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಅಮಿತ್ ಶಾ ಹಾಡಿ ಹೊಗಳಿದ್ದಾರೆ.

ಪ್ರಧಾನಮಂತ್ರಿ ಮೋದಿ ಹೇಳಿಕೆ ಬಗ್ಗೆ ಉಲ್ಲೇಖ:
ಇನ್ನು, ಈ ಹಿಂದೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೀಡಿದ ಹೇಳಿಕೆ ಬಗ್ಗೆಯೂ ಕೇಂದ್ರ ಸಚಿವ ಅಮಿತ್ ಶಾ ಉಲ್ಲೇಖಿಸಿದರು. ದೇಶವನ್ನು ರಕ್ಷಿಸುತ್ತಿರುವ ಪೊಲೀಸರ ಬಗ್ಗೆ ನಾವು ಅರ್ಥ ಮಾಡಿಕೊಳ್ಳಬೇಕು. ಯಾರೂ ಕೂಡಾ ಪೊಲೀಸರನ್ನು ಟೀಕಿಸಬಾರದು, ಬದಲಿಗೆ ಅವರ ಕರ್ತವ್ಯ ನಿಷ್ಠೆಯನ್ನು ಮೆಚ್ಚಿಕೊಳ್ಳಬೇಕು ಎಂದು ಮೋದಿ ಹೇಳಿದ್ದರು. ಇದೇ ಹೇಳಿಕೆಯನ್ನು ಅಮಿತ್ ಶಾ ಕೂಡಾ ಉಲ್ಲೇಖಿಸಿದರು.
ಪೊಲೀಸರು ಶಾಂತಿ ಕಾಪಾಡುವ ನಿಟ್ಟಿನಲ್ಲಿ ಶ್ರಮ ವಹಿಸಿ ಕೆಲಸ ಮಾಡುತ್ತಾರೆ. ಅಗತ್ಯವಿದ್ದವರಿಗೆ ಪೊಲೀಸರು ಸಹಾಯಕ್ಕೆ ಬರುತ್ತಾರೆ. ಪೊಲೀಸರು ಯಾರಿಗೂ ಶತ್ರುಗಳಲ್ಲ. ಅವರು ಶಾಂತಿಪ್ರಿಯರಾಗಿದ್ದು, ನಾವೆಲ್ಲರೂ ಪೊಲೀಸರನ್ನು ಗೌರವಿಸಬೇಕು ಎಂದು ಅಮಿತ್ ಶಾ ಹೇಳಿದ್ದಾರೆ.












Click it and Unblock the Notifications