ಡಿ.ಕೆ.ಶಿವಕುಮಾರ್ ಪ್ರಕರಣ: ನ್ಯಾಯಾಲಯದಲ್ಲಿ ನಡೆದ ವಾದದ ಪೂರ್ಣ ವಿವರ
ನವದೆಹಲಿ, ಸೆಪ್ಟೆಂಬರ್ 04: ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಿದ್ದ ಇಡಿ (ಜಾರಿ ನಿರ್ದೇಶನಾಲಯ) ಇಂದು ದೆಹಲಿಯ ವಿಶೇಷ ನ್ಯಾಯಾಲಯದ ಮುಂದೆ ಅವರನ್ನು ಹಾಜರುಪಡಿಸಿತು.
ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯವು ಡಿ.ಕೆ.ಶಿವಕುಮಾರ್ ಅವರನ್ನು ಸೆಪ್ಟೆಂಬರ್ 13 ರವರೆಗೆ ಇಡಿ ವಶಕ್ಕೆ ನೀಡಿ ಆದೇಶ ನೀಡಿದೆ. ಪ್ರಕರಣದ ಸಂಬಂಧ ಇಡಿ ಪರ ವಕೀಲರು ಹೇಳಿದ್ದೇನು, ಡಿ.ಕೆ.ಶಿವಕುಮಾರ್ ಪರ ವಕೀಲರು ಹೇಳಿದ್ದೇನು ಎಂಬ ಪೂರ್ಣ ಮಾಹಿತಿ ಇಲ್ಲಿದೆ.
ಹಿರಿಯ ವಕೀಲರಾದ ಅಭಿಷೇಕ್ ಮನು ಸಿಂಘ್ವಿ ಮತ್ತು ದಯನ್ ಕೃಷ್ಣನ್ ಅವರು ವಾದ ಮಂಡಿಸಿದರು. ಇಡಿ ಪರವಾಗಿ ಅಡ್ವೊಕೇಟ್ ಜನರಲ್ ಕೆ.ಎಂ.ನಟರಾಜ್ ವಾದ ಮಂಡಿಸಿದರು. ಪ್ರಕರಣದ ವಿಚಾರಣೆಯನ್ನು ವಿಜಯ್ ಕುಮಾರ್ ಕುಹುಕ್ ಆಲಿಸಿ ಆದೇಶ ನೀಡಿದರು.

ಪ್ರಕರಣದ ವಿಚಾರಣೆಗೆ ಇಂದು ಮೂರು ಬಾರಿ ಸಮಯ ನಿಗದಿಪಡಿಸಲಾಗಿತ್ತು, ಮೊದಲಿಗೆ 12 ಗಂಟೆ ನಂತರ 2 ಗಂಟೆ ಕೊನೆಗೆ 3 ಗಂಟೆ ಎಂದು ಹೇಳಲಾಗಿತ್ತು. ಅಂತಿಮವಾಗಿ 3:30 ರ ಸುಮಾರಿಗೆ ವಿಚಾರಣೆ ಆರಂಭವಾಯಿತು.
ಇಡಿ ಸಲ್ಲಿಸಿದ್ದ ಅರ್ಜಿಯ ಪ್ರಕಾರ ಡಿ.ಕೆ.ಶಿವಕುಮಾರ್ ಅವರನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪ್ರಿವೆಂಷನ್ ಆಫ್ ಮನಿ ಲಾಂಡರಿಂಗ್ ಆಕ್ಟ್) ಅಡಿಯಲ್ಲಿ ಬಂಧಿಸಲಾಗಿದೆ. ಇಡಿ ಪರ ವಕೀಲರು ಡಿ.ಕೆ.ಶಿವಕುಮಾರ್ ಅವರನ್ನು 14 ದಿನಗಳ ಕಾಲ ಇಡಿ ವಶಕ್ಕೆ ಕೇಳಿದರು.
ಐಟಿ ತನಿಖೆ ಮತ್ತು ವಿವಿಧ ಸಾಕ್ಷೀದಾರರು ನೀಡಿರುವ ಹೇಳಿಕೆಗಳು ಡಿ.ಕೆ.ಶಿವಕುಮಾರ್ ಅವರು ತಪ್ಪು ಮಾಡಿರುವ ಬಗ್ಗೆ ಪುರಾವೆಗಳನ್ನು ಬಹಿರಂಗಗೊಳಿಸುತ್ತಿವೆ ಎಂದು ಇಡಿ ಪರ ವಕೀಲ ನಟರಾಜ್ ಹೇಳಿದರು.

ಇಡಿಯು ಡಿ.ಕೆ.ಶಿವಕುಮಾರ್ ಅವರಿಗೆ ಸಮನ್ಸ್ ಜಾರಿ ಮಾಡಿತ್ತು ಮತ್ತು ಅವರು ಹಾಜರಾದರು ಆದರೆ ಅವರು ವಿಚಾರಣೆಗೆ ಸೂಕ್ತವಾಗಿ ಸಹಕರಿಸಲಿಲ್ಲ ಮತ್ತು ಸತ್ಯವನ್ನು ಒಪ್ಪಿಕೊಳ್ಳಲಿಲ್ಲ ಎಂದು ಇಡಿ ಪರ ವಕೀಲರು ಆರೋಪ ಹೊರಿಸಿದರು.
ಇಡಿ ತನಿಖೆ ಅತ್ಯಂತ ನಿರ್ಣಾಯಕ ಘಟ್ಟದಲ್ಲಿದ್ದು, ಈ ಸಮಯದಲ್ಲಿ ಡಿಕೆಶಿ ಅವರನ್ನು ವಶಕ್ಕೆ ಪಡೆದು ವಿಚಾರಿಸುವುದು ಅತ್ಯಂತ ಅವಶ್ಯಕವಾಗಿದೆ, ಡಿಕೆಶಿಗೆ ದಾಖಲೆಗಳನ್ನು ಎದುರಿಗಿರಿಸಿ ಅವರಿಂದ ಸತ್ಯ ಹೇಳಿಸಲು ವಶಕ್ಕೆ ಪಡೆಯುವುದು ಅವಶ್ಯಕವಾಗಿದೆ ಎಂದು ನಟರಾಜ್ ಹೇಳಿದರು.
ಹಣದ ಮೂಲದ ಪಕ್ಕಾ ಮಾಹಿತಿ ಹೊರಗೆ ಎಳೆಯ ಬೇಕಿದೆ. ಕೆಲವು ವಿಷಯಗಳ ಮಾಹಿತಿ ಡಿಕೆಶಿ ಅವರಿಗೆ ಮಾತ್ರವೇ ತಿಳಿದಿದೆ ಹಾಗಾಗಿ ಇವರನ್ನು ವಶಕ್ಕೆ ಪಡೆಯುವುದು ಅತ್ಯಂತ ಅವಶ್ಯಕವಾಗಿದೆ ಎಂದು ನಟರಾಜ್ ಹೇಳಿದರು.

ಡಿ.ಕೆ.ಶಿವಕುಮಾರ್ ಪ್ರಜ್ಞಾಪೂರ್ವಕವಾಗಿ ತನಿಖೆಯ ಹಾದಿ ತಪ್ಪಿಸುವ ಪ್ರಯತ್ನ ಮಾಡಿದ್ದಾರೆ. ರೇಡ್ ಸಮಯದಲ್ಲಿ ಸಿಕ್ಕ ಹಣದ ಬಗ್ಗೆ ಮಾಹಿತಿಯನ್ನು ಹೊರಗೆ ಹಾಕಿಲ್ಲ ಎಂದು ಇಡಿ ಪರ ವಕೀಲ ನಟರಾಜ್ ವಾದಿಸಿದರು.
ಡಿ.ಕೆ.ಶಿವಕುಮಾರ್ ಅವರನ್ನು ವಶಕ್ಕೆ ಪಡೆಯಲೇ ಬೇಕಾಗಿದೆ ಎಂದು ವಾದಿಸಿದ ನಟರಾಜ್ ಕೆಲವು ಸಾಕ್ಷ್ಯಗಳನ್ನು (ದಾಖಲೆಗಳು) ನ್ಯಾಯಾಧೀಶರ ಮುಂದೆ ಇರಿಸಿದರು. ನಟರಾಜ್ ತಮ್ಮ ವಾದವನ್ನು ಮುಗಿಸಿದರು.
ವಾದ ಆರಂಭಿಸಿದ ಡಿ.ಕೆ.ಶಿವಕುಮಾರ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ, ಈಗಾಗಲೇ ಡಿಕೆಶಿ ಅವರನ್ನು 33-34 ಗಂಟೆಗಳ ಕಾಲ ವಿಚಾರಣೆ ಮಾಡಲಾಗಿದೆ. ಅವರನ್ನು ಕರೆದಾಗ ಅವರು ಬಂದಿದ್ದಾರೆ, ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಅವರು ಎಲ್ಲೂ ತಪ್ಪಿಸಿಕೊಂಡು ಹೋಗಿಲ್ಲ, ಪರಾರಿಯಾಗುವ ಸಂಭವವೂ ಇಲ್ಲ ಎಂದು ವಾದಿಸಿದರು.
ಏನಾದರೂ ಚಕಿತಗೊಳಿಸುವ ಘಟನೆ, ಹೊಸದಾಗಿ ಏನಾದರೂ ನಡೆದಿದ್ದರೆ ಸರಿ, ಇಲ್ಲವಾದರೆ ವಶಕ್ಕೆ ಪಡೆಯುವ ಅಗತ್ಯವಿಲ್ಲ ಎಂದ ಸಿಂಘ್ವಿ, ಡಿ.ಕೆ.ಶಿವಕುಮಾರ್ ಪರವಾಗಿ ಜಾಮೀನು ಅರ್ಜಿಯನ್ನು ಸಲ್ಲಿಸಿದರು.
ಇಡೀಯ ಪ್ರಕರಣವು 02/02/2017 ರ ಐಟಿ ರೇಡ್ನಿಂದ ಪ್ರಾರಂಭವಾಯಿತು. ಸ್ವತಃ ಐಟಿ ಪ್ರಕರಣ ದಾಖಲಿಸಲು 10 ತಿಂಗಳು ತೆಗೆದುಕೊಂಡಿತು. ಅಂತಿಮವಾಗಿ 13/06/2018 ರಂದು ಪ್ರಕರಣ ದಾಖಲಿಸಿತು ಎಂಬುದನ್ನು ನ್ಯಾಯಾಲಯಕ್ಕೆ ಗಮನಕ್ಕೆ ತಂದರು ಸಿಂಘ್ವಿ.
ಈ ಪ್ರಕರಣಗಳ ಎಲ್ಲ ತನಿಖೆಗಳಿಗೆ ಹೈಕೋರ್ಟ್ ತಡೆ ವಿಧಿಸಿತ್ತು, ಆ ತಡೆ ಸೆಪ್ಟೆಂಬರ್ 17 ರ ವರೆಗೆ ಇದೆ ಎಂದ ಸಿಂಘ್ವಿ, ಡಿಕೆಶಿ ಮೇಲೆ ಹೊರಿಸಲಾಗಿರುವ ಆರೋಪವು 'ಸಂಯುಕ್ತ' ತೆರನಾದುದು. ಮನಿ ಲಾಂಡರಿಂಗ್ ಪ್ರಿವೆಂಟ್ ಆಕ್ಟ್ನಲ್ಲಿ ಇದು ಇಲ್ಲವೇ ಇಲ್ಲ ಎಂದು ವಾದಿಸಿದರು.
ಯಾಂತ್ರಿಕವಾಗಿ ಸುಖಾಸುಮ್ಮನೆ ವಶಕ್ಕೆ ನೀಡಲಾಗುವುದಿಲ್ಲ, ಇದು ಅಪರೂಪದ್ದು, ವಶಕ್ಕೆ ಪಡೆಯಬೇಕೆಂದರೆ ಗಟ್ಟಿಯಾದ ಅಪರಾಧವಾಗಬೇಕು, ಈಗ ಹೊರಿಸಿರುವುದು ಸಂಯುಕ್ತ ಅಪರಾಧ, ನಿರ್ದಿಷ್ಟ ಅಪರಾಧವಲ್ಲ ಎಂದು ಸಿಂಘ್ವಿ ವಾದಿಸಿದರು.
ವಶಕ್ಕೆ ಸಲ್ಲಿಸಿರುವ ಅರ್ಜಿಯು ಹಟಮಾರಿತನದಿಂದ ಕೂಡಿದೆ. 'ನೀನು ಸತ್ಯ ಮಾತನಾಡಿಲ್ಲ ಅದಕ್ಕಾಗಿ ನಿನ್ನ ಬಂಧಿಸುತ್ತೇನೆ' ಎಂದು ನಿರ್ಧಿರಿಸಿರುವ ಇಡಿ ಕ್ರಮ ಹಾಸ್ಯಾಸ್ಪದವಾದು, ನಿಮಗೆ ಬೇಕಾದ 'ಸತ್ಯ'ವನ್ನು ನನ್ನ ಕಕ್ಷೀದಾರ ಮಾತನಾಡಲಿಲ್ಲ ಎಂದು ಕಕ್ಷೀದಾರನನ್ನು ಬಂಧಿಸಬಹುದೇ ಎಂದು ಸಿಂಘ್ವಿ ಪ್ರಶ್ನಿಸಿದರು.
ಆರ್ಟಿಕಲ್ 20 ನೇರವಾಗಿ ಡಿಕೆಶಿಗೆ ಸಾಂವಿಧಾನಿಕ ಭದ್ರತೆಯನ್ನು ಒದಗಿಸಿದೆ ಎಂದ ಸಿಂಘ್ವಿ, ಮೌನವಾಗಿರುವ ಹಕ್ಕಿನ ಬಗ್ಗೆ ಸಿಂಘ್ವಿ ಅವರು ಓದಿ ನ್ಯಾಯಾಲಯಕ್ಕೆ ತಿಳಿಸಿದರು. ವಶಕ್ಕೆ ಪಡೆಯುವುದು ತಪ್ಪೊಪ್ಪಿಕೊಳ್ಳುವಂತೆ ಮಾಡಲು ಅಲ್ಲ ಎಂದು ಸಹ ಸಿಂಘ್ವಿ ಹೇಳಿದರು.
ಕಕ್ಷೀದಾರ ಮಾಡಿರದ ತಪ್ಪನ್ನು ಒಪ್ಪಿಕೊಳ್ಳುತ್ತಿಲ್ಲ ಎಂದ ಮಾತ್ರಕ್ಕೆ ಆತ ವಿಚಾರಣೆಗೆ ಸಹಕರಿಸುತ್ತಿಲ್ಲ ಎನ್ನಲಾಗುವುದಿಲ್ಲ, ಕೂಡಲೇ ಕಕ್ಷೀದಾರನಿಗೆ ಜಾಮೀನು ನೀಡಬೇಕು ಎಂಬುದು ನನ್ನ ಮೊದಲನೇ ಪ್ರಾರ್ಥನೆ ಎಂದು ಸಿಂಘ್ವಿ ಮನವಿ ಮಾಡಿದರು.
ಡಿ.ಕೆ.ಶಿವಕುಮಾರ್ ಅವರಿಗೆ ಕಡಿಮೆ ರಕ್ತದ ಒತ್ತಡ ಮತ್ತು ಥೈರಾಯ್ಡ್ ಸಮಸ್ಯೆ ಇದೆ, ಅವರು ಸಮಯಕ್ಕೆ ಅನುಗುಣವಾಗಿ ಮಾತ್ರೆಗಳನ್ನು ತೆಗೆದುಕೊಳ್ಳಬೇಕು, ಕೆಲವು ಕಾರಣಗಳಿಂದಾಗಿ ಅವರಿಗೆ ಇಂದು ಊಟ ಸಹ ನೀಡಲಾಗಿಲ್ಲ ಎಂದು ಡಿಕೆಶಿ ಅವರ ಆರೋಗ್ಯ ಮಾಹಿತಿಯನ್ನು ನೀಡಿದರು.
ಕರ್ನಾಟಕ ಸರ್ಕಾರಿ ನೌಕರರ ಬಡಾವಣೆ ಡಿಕೆಶಿಗೆ ಸೇರಿದ್ದಲ್ಲ, ಡಿಕೆಶಿ ಬಳಿ ಇರುವುದು ಒಂದೇ ಮನೆ ಅದರ ಬಗ್ಗೆ ಮಾಹಿತಿ ಈಗಾಗಲೇ ನೀಡಲಾಗಿದೆ ಎಂದು ಹೇಳಿ ಸಿಂಘ್ವಿ ತಮ್ಮ ವಾದ ಮುಗಿಸಿದರು. ಡಿಕೆಶಿ ಪರ ಮತ್ತೊಬ್ಬ ವಕೀಲ ದಯಾನ್ ಕೃಷ್ಣನ್ ತಮ್ಮ ವಾದ ಆರಂಭಿಸಿದರು.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಸೆಕ್ಷನ್ 50(4) ಪ್ರಕಾರ ಬಂಧಿಸಲು ಸಾಧ್ಯವಿಲ್ಲ ಎಂದು ದಯಾನ್ ಕೃಷ್ಣನ್ ವಾದಿಸಿದರು.
ಇಡಿ ಪರ ವಕೀಲ ನಟರಾಜ್ ವಾದ ಆರಂಭಿಸಿ, ಅಕ್ರಮ ಹಣ ವರ್ಗಾವಣೆ ಕಾಯ್ದೆಯ ಅನ್ವಯ ಇದೊಂದು ಸ್ವತಂತ್ರ್ಯ ಅಪರಾಧವಾಗಿದೆ ಮತ್ತು ಇದು ಕೇವಲ ಐಟಿ ಇಲಾಖೆ ವ್ಯಾಪ್ತಿಯ ಅಪರಾಧ ಎಂದು ಹೇಳಲು ಆಗದು ಎಂದು ಹೇಳಿದರು.
ಇಡಿ ತನಿಖೆ ವಿರುದ್ಧ ಡಿ.ಕೆ.ಶಿವಕುಮಾರ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದರ ಬಗ್ಗೆ ಇಡಿಗೆ ಮಾಹಿತಿ ಇತ್ತು, ಹಾಗಾಗಿಯೇ ಅವರು ಡಿಕೆಶಿ ಅವರನ್ನು ಬಂಧಿಸಿದರು ಎಂದು ಸಿಂಘ್ವಿ ಹೇಳಿದರು.
ವಾದಗಳನ್ನು ಆಲಿಸಿದ ನ್ಯಾಯಾಧೀಶ ವಿಜಯ್ ಕುಮಾರ್ ಕುಹುಕ್ ಅವರು, ಆದೇಶವನ್ನು ಕೆಲ ಸಮಯ ಕಾಯ್ದಿರಿಸಿದರು. ನಂತರ ಡಿ.ಕೆ.ಶಿವಕುಮಾರ್ ಅವರನ್ನು ಸೆಪ್ಟೆಂಬರ್ 13 ರವರೆಗೆ ಇಡಿ ವಶಕ್ಕೆ ನೀಡಿದರು. ಕುಟುಂಬ ಸದಸ್ಯರು ಮತ್ತು ವಕೀಲರು ಪ್ರತಿದಿನವೂ ಅವರನ್ನು ಭೇಟಿ ಮಾಡಬಹುದು ಎಂದು ಅವಕಾಶ ನೀಡಿದರು.












Click it and Unblock the Notifications