ಡಿ.ಕೆ.ಶಿವಕುಮಾರ್, ಅನರ್ಹ ಶಾಸರ ಭವಿಷ್ಯ ಇಂದು ನಿರ್ಧಾರ
Recommended Video
ನವದೆಹಲಿ, ಸೆಪ್ಟೆಂಬರ್ 25: ಕಾಕತಾಳೀಯವೋ ಏನೋ, ಮೈತ್ರಿಗೆ ಕೈಕೊಟ್ಟ ಅನರ್ಹ ಶಾಸಕರು ಮತ್ತು ಅವರ ವಿರುದ್ಧ ವಿಧಾನಸಭೆಯಲ್ಲಿ ತೊಡೆ ತಟ್ಟಿದ್ದ ಡಿ.ಕೆ.ಶಿವಕುಮಾರ್ ಇಬ್ಬರ ಭವಿಷ್ಯವನ್ನೂ ನ್ಯಾಯಾಲಯ ಇಂದೇ ನಿರ್ಧರಿಸಲಿದೆ.
ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಇಡಿಯಿಂದ ಬಂಧನಕ್ಕೆ ಒಳಗಾಗಿ ನ್ಯಾಯಾಂಗ ಬಂಧನದಲ್ಲಿರುವ ಡಿ.ಕೆ.ಶಿವಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆ ಇಂದು ದೆಹಲಿಯ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ನಡೆಯಲಿದೆ. ಜಾಮೀನು ಕುರಿತು ಆದೇಶವೂ ಇಂದೇ ಹೊರಬೀಳುವ ಸಾಧ್ಯತೆ ಇದೆ.
ಅನರ್ಹ ಶಾಸಕರು ಅನರ್ಹತೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮತ್ತು ಉಪಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ಕೋರಿ ಸಲ್ಲಿಸಿದ್ದ ಮನವಿಯ ವಿಚಾರಣೆ ಇಂದು ಸುಪ್ರೀಂಕೋರ್ಟ್ನಲ್ಲಿ ನಡೆಯಲಿದ್ದು, ಉಪಚುನಾವಣೆ ಸ್ಪರ್ಧೆ ಬಗ್ಗೆ ಸ್ಪಷ್ಟ ಆದೇಶ ಇಂದು ಹೊರಬೀಳುವ ವಿಶ್ವಾಸವಿದೆ.

ಡಿ.ಕೆ.ಶಿವಕುಮಾರ್ ಅವರ ಜಾಮೀನು ಅರ್ಜಿ ಕುರಿತು ಸೆಪ್ಟೆಂಬರ್ 21 ರಂದು ವಾದ-ವಿವಾದ ನಡೆದು, ವಿಚಾರಣೆಯನ್ನು ಸೆಪ್ಟೆಂಬರ್ 25 ಕ್ಕೆ ಅಂದರೆ ಇಂದಿಗೆ ಮುಂದೂಡಲಾಗಿತ್ತು. ಅದರಂತೆ ಇಂದೂ ಸಹ ವಾದ ನಡೆಯಲಿದ್ದು, ಆದೇಶವೂ ಇಂದೇ ಹೊರಬೀಳುವ ಸಾಧ್ಯತೆ ದಟ್ಟವಾಗಿದೆ.
ಅನರ್ಹ ಶಾಸಕರ ಅರ್ಜಿಯು ಸೆಪ್ಟೆಂಬರ್ 23 ರ ಸೋಮವಾರದಂದು ಸುಪ್ರೀಂಕೋರ್ಟ್ನಲ್ಲಿ ನಡೆದಿತ್ತು. ಅನರ್ಹರಿಗೆ ಉಪಚುನಾವಣೆಗೆ ಸ್ಪರ್ಧಿಸಲು ಅನರ್ಹರಿಗೆ ಅವಕಾಶ ಕೊಡಬೇಕೆಂದು ಮುಕುಲ್ ರೊಹ್ಟಗಿ ವಾದಿಸಿದ್ದರೆ, ಕಪಿಲ್ ಸಿಬಲ್ ಅವರು ವಿರುದ್ದವಾಗಿ ವಾದಿಸಿದ್ದರು.
ಇಂದು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಪರವಾಗಿಯೂ ಅನರ್ಹ ಶಾಸಕರ ವಿರುದ್ಧ ವಾದ ಮಂಡನೆ ಆಗಲಿದ್ದು, ದೀರ್ಘ ವಿಚಾರಣೆ ನಡೆಯುವ ಸಂಭವ ಇದೆ. ಅಲ್ಲದೆ ಉಪಚುನಾವಣೆ ನಾಮಪತ್ರ ಸಲ್ಲಿಕೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಸೂಕ್ತ ಆದೇಶವೂ ಇಂದೇ ಹೊರಬೀಳುವ ಸಾಧ್ಯತೆ ಇದೆ.
ಎರಡೂ ಪ್ರಕರಣಗಳು ದೆಹಲಿಯಲ್ಲಿಯೇ ನಡೆಯಲಿದ್ದು, ಅನರ್ಹ ಶಾಸಕರ ಪ್ರಕರಣ ಸುಪ್ರೀಂಕೋರ್ಟ್ನ ತ್ರಿದಸ್ಯ ಪೀಠ ವಿಚಾರಣೆ ನಡೆಸುತ್ತಿದ್ದರೆ. ಡಿ.ಕೆ.ಶಿವಕುಮಾರ್ ಪ್ರಕರಣವು ದೆಹಲಿಯ ರೋಸ್ ಅವೆನ್ಯೂನ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.












Click it and Unblock the Notifications