ದೆಹಲಿ ಗಲಭೆ: 'ನಿರ್ದಯ, ಆಘಾತಕಾರಿ'- ಪೊಲೀಸರಿಗೆ 25 ಸಾವಿರ ದಂಡ ವಿಧಿಸಿದ ಕೋರ್ಟ್
ನವದೆಹಲಿ, ಜು.14: ಫೆಬ್ರವರಿ 2019 ರ ಗಲಭೆಗೆ ಸಂಬಂಧಿಸಿದ ಪ್ರಕರಣವೊಂದನ್ನು ತಪ್ಪಾಗಿ ನಿರ್ವಹಿಸಿದ್ದಕ್ಕಾಗಿ ದೆಹಲಿ ಪೊಲೀಸರಿಗೆ ಸ್ಥಳೀಯ ನ್ಯಾಯಾಲಯವು 25 ಸಾವಿರ ದಂಡ ವಿಧಿಸಿದೆ ಹಾಗೂ ಪೊಲೀಸರ ಕ್ರಮವನ್ನು ಕೋರ್ಟ್ ತೀವ್ರವಾಗಿ ಖಂಡಿಸಿದೆ. ಗಲಭೆಯಲ್ಲಿ ಹಲ್ಲೆಗೆ ಒಳಗಾದ ಮೊಹಮ್ಮದ್ ನಾಸಿರ್ ದೆಹಲಿ ಪೊಲೀಸರ ವಿರುದ್ದ ಕ್ರಮ ಕೈಗೊಳ್ಳಲು ನ್ಯಾಯಾಲಯದ ಮೊರೆ ಹೋಗಬಹುದು ಎಂದು ಕೂಡಾ ಹೇಳಿದೆ.
ಗಲಭೆಯ ಸಂದರ್ಭದಲ್ಲಿ ಕಣ್ಣಿಗೆ ಗುಂಡು ಬಿದ್ದಿದ್ದ ಮೊಹಮ್ಮದ್ ನಾಸಿರ್, ತನ್ನ ಪ್ರದೇಶದ ಆರು ಜನರ ವಿರುದ್ಧ ದೂರು ನೀಡಿದ್ದು, ಪ್ರತಿಯೊಬ್ಬರ ಹೆಸರನ್ನು ಉಲ್ಲೇಖ ಮಾಡಿದ್ದನು. ಈ ಪ್ರಕರಣದ ಆರೋಪಿಗಳಲ್ಲಿ ಓರ್ವ ಬಿಜೆಪಿ ಮಾಜಿ ಶಾಸಕ ನರೇಶ್ ಗೌರ್ ಆಗಿದ್ದಾರೆ.
ಸಂಪೂರ್ಣವಾಗಿ ಸಂಬಂಧವಿಲ್ಲದ ಪ್ರಕರಣವೊಂದಕ್ಕೆ ಪೊಲೀಸರು ಆತನ ದೂರನ್ನು ಹೋಲಿಕೆ ಮಾಡಲು ಯತ್ನಿಸಿದಾಗ ಮೊಹಮ್ಮದ್ ನಾಸಿರ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ರನ್ನು ಸಂಪರ್ಕಿಸಿದ್ದಾನೆ. ಕೆಳ ನ್ಯಾಯಾಲಯವು ಅರ್ಜಿಯನ್ನು ಎತ್ತಿಹಿಡಿದಿದ್ದು, ಈ ಪ್ರಕರಣದಲ್ಲಿ ಪೊಲೀಸರು ಎಫ್ಐಆರ್ ವರದಿಯನ್ನು ಸಲ್ಲಿಸುವಂತೆ ಒತ್ತಾಯಿಸಿದೆ. ಆದರೆ ಪೊಲೀಸರು ಸೆಷನ್ಸ್ ನ್ಯಾಯಾಲಯದಲ್ಲಿ ಆದೇಶವನ್ನು ಪ್ರಶ್ನಿಸಿದರು.

ಪೂರ್ಣ ವಿಚಾರಣೆಯ ನಂತರ, ನ್ಯಾಯಾಧೀಶರು ಈ ವಿಷಯದಲ್ಲಿ ಪೊಲೀಸ್ ಕ್ರಮವು "ಆಘಾತಕಾರಿ" ಮತ್ತು "ನಿರ್ದಯ" ಎಂದು ಹೇಳಿದರು. "ದೆಹಲಿ ಹೈಕೋರ್ಟ್ ನಿಯಮಗಳ ಆದೇಶ ಈ ವಿಷಯದಲ್ಲಿ ಪೊಲೀಸರು ಅನುಸರಿಸಿಲ್ಲ. ತನಿಖೆಯನ್ನು ಅತ್ಯಂತ ಪ್ರಾಸಂಗಿಕ, ಕಠೋರ ಮತ್ತು ವಿಡಂಬನಾತ್ಮಕ ರೀತಿಯಲ್ಲಿ ಮಾಡಲಾಗಿದೆ ಎಂದು ಸ್ಪಷ್ಟವಾಗಿ ದೃಢಪಟ್ಟಿದೆ," ಎಂದು ನ್ಯಾಯಾಧೀಶರು ತಮ್ಮ ಆದೇಶದಲ್ಲಿ ಹೇಳಿದರು.
ಯಾವುದೇ ತನಿಖೆಯಿಲ್ಲದೆ ಪೊಲೀಸರು ಹೇಗೆ ಆರೋಪಿಗಳಿಗೆ ಕ್ಲೀನ್ ಚಿಟ್ ನೀಡಿದರು ಎಂದು ಪ್ರಶ್ನಿಸಿದ ನ್ಯಾಯಾಧೀಶರು, "ಇಡೀ ಪ್ರಕರಣವನ್ನು ನೋಡಿದ ನಂತರ, ಪೊಲೀಸರು ಆರೋಪಿಗಳನ್ನು ಉಳಿಸಲು ಕೆಲಸ ಮಾಡುತ್ತಿರುವುದು ಸ್ಪಷ್ಟವಾಗಿದೆ," ಎಂದಿದ್ದಾರೆ.
ಹಾಗೆಯೇ ಇಂತಹ ಪ್ರಕರಣಗಳ ತನಿಖೆ ಸೂಕ್ತ ರೀತಿಯಲ್ಲಿ ನಡೆಸಬೇಕೆಂದು ನ್ಯಾಯಾಲಯ ದೆಹಲಿ ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಿತು.
ವಿವಾದಾತ್ಮಕ ಪೌರತ್ವ (ತಿದ್ದುಪಡಿ) ಕಾಯ್ದೆಯ ಬೆಂಬಲಿಗರು ಮತ್ತು ಕಾಯ್ದೆಯ ವಿರುದ್ಧ ಪ್ರತಿಭಟಿಸುವವರ ನಡುವೆ 2019 ರ ಫೆಬ್ರವರಿಯಲ್ಲಿ ದೆಹಲಿಯ ಈಶಾನ್ಯ ಭಾಗಗಳಲ್ಲಿ ಹಿಂಸಾಚಾರ ಹಲವಾರು ದಿನಗಳವರೆಗೆ ಮುಂದುವರಿದಿದೆ. ಹಿಂಸಾಚಾರದಲ್ಲಿ 50 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು ಸುಮಾರು 200 ಜನರು ಗಾಯಗೊಂಡಿದ್ದಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications