ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು: ಹೆತ್ತವರ ಆದಿಯಾಗಿ ಹೇಳಿದ್ದೇನು ಜನ?
ದೆಹಲಿ, ಜನವರಿ.07: ದೆಹಲಿ ನಿರ್ಭಯಾ ಅತ್ಯಾಚಾರಿಗಳ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವಲ್ಲಿ ಕೋರ್ಟ್ ಕೊನೆಗೂ ಅಂತಿಮ ತೀರ್ಮಾನ ತೆಗೆದುಕೊಂಡಿದೆ. ಏಳು ವರ್ಷಗಳ ನಂತರ ಕೋರ್ಟ್ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ಹೊರಡಿಸಿದೆ.
ಜನವರಿ.22ರಂದು ನಾಲ್ವರು ಆರೋಪಿಗಳನ್ನು ಗಲ್ಲುಶಿಕ್ಷೆಗೆ ಗುರುಪಡಿಸುವಂತೆ ದೆಹಲಿಯ ಪಟಿಯಾಲಾ ಹೌಸ್ ಕೋರ್ಟ್ ಮಹತ್ವದ ತೀರ್ಪು ಹೊರಡಿಸಿದೆ. ಬೆಳಗ್ಗೆ 7 ಗಂಟೆ ವೇಳೆ ಆರೋಪಿಗಳನ್ನು ಗಲ್ಲುಶಿಕ್ಷೆಗೆ ಒಳಪಡಿಸಲು ತೀರ್ಪು ನೀಡಲಾಗಿದೆ.
ದೆಹಲಿ ಪಟಿಯಾಲಾ ಹೌಸ್ ಕೋರ್ಟ್ ತೀರ್ಪಿಗೆ ಮೃತ ನಿರ್ಭಯಾ ತಾಯಿ ಆಶಾ ದೇವಿ ಸಂತಸ ವ್ಯಕ್ತಪಡಿಸಿದ್ದಾರೆ. ನನ್ನ ಮಗಳ ಸಾವಿಗೆ ಕೊನೆಗೂ ನ್ಯಾಯ ಸಿಕ್ಕಿದೆ. ನ್ಯಾಯದೇವತೆ ಮೇಲೆ ದೇಶದ ಜನತೆಗೆ ಇದೀಗ ನಂಬಿಕೆ ಹೆಚ್ಚಾಗಿದೆ ಎಂದು ಆಶಾ ದೇವಿ ಅಭಿಪ್ರಾಯ ವ್ಯಕ್ತಪಡಿಸಿದರು.

"ಇದು ನಿರಂತರ ಹೋರಾಟಕ್ಕೆ ದಕ್ಕಿದ ನ್ಯಾಯ"
2012ರಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಪ್ರಕರಣವನ್ನು ಕೋರ್ಟ್ ಗಂಭೀರವಾಗಿ ಪರಿಗಣಿಸಿದೆ. 7 ವರ್ಷಗಳ ನಿರಂತರ ಹೋರಾಟದ ಬಳಿಕ ನಮ್ಮ ಮನವಿಯನ್ನು ಕೋರ್ಟ್ ಪುರಸ್ಕರಿಸಿದೆ. ಕ್ರೌರ್ಯ ಮೆರೆದ ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ವಿಧಿಸಿದೆ. ಇದು ನ್ಯಾಯಾಂಗ ವ್ಯವಸ್ಥೆ ಮೇಲಿನ ಗೌರವವನ್ನು ಹೆಚ್ಚಿಸಿದೆ ಎಂದು ನಿರ್ಭಯಾ ತಾಯಿ ಆಶಾ ದೇವಿ ಸಂತಸ ವ್ಯಕ್ತಪಡಿಸಿದ್ದಾರೆ.

"ಮೃತ ನಿರ್ಭಯಾ ಆತ್ಮಹಕ್ಕೆ ಶಾಂತಿ ಸಿಕ್ಕಿತು"
ಪಟಿಯಾಲಾ ಹೌಸ್ ಕೋರ್ಟ್ ತೀರ್ಪನ್ನು ಪಂಜಾಬ್ ನ ಮಹಿಳಾ ಆಯೋಗದ ಅಧ್ಯಕ್ಷೆ ಮನಿಶಾ ಗುಲಾತಿ ಸ್ವಾಗತಿಸಿದ್ದಾರೆ. 2012ರ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಗ್ಗೆ ಕೋರ್ಟ್ ನೀಡಿರುವ ತೀರ್ಪಿನಿಂದ ಸಂತಸವಾಗುತ್ತಿದೆ. ಮೃತ ನಿರ್ಭಯಾ ಆತ್ಮಕ್ಕೆ ತೀರ್ಪಿನಿಂದ ಶಾಂತಿ ಸಿಕ್ಕಂತೆ ಆಗಿದೆ ಎಂದು ಹೇಳಿದರು.

ಹೆತ್ತವರ ಹೋರಾಟಕ್ಕೆ ಧನ್ಯವಾದ ಎಂದ ಸ್ವಾತಿ
2012ರಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಪ್ರಕರಣದ ವಿರುದ್ಧ ಹೆತ್ತವರ ಹೋರಾಟ ನಿರಂತರವಾಗಿತ್ತು. ಹೆತ್ತವರ ಹೋರಾಟಕ್ಕೆ ಹ್ಯಾಂಡ್ಸ್ ಆಫ್ ಎಂದು ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಳ್ ಹೇಳಿದರು. ಅಲ್ಲದೇ, ಆರೋಪಿಗಳನ್ನು ಶಿಕ್ಷಿಸಲು ಏಳು ವರ್ಷಗಳನ್ನು ತೆಗೆದುಕೊಳ್ಳುವ ಅವಶ್ಯಕತೆಯಿತ್ತೇ ಎಂದು ಪ್ರಶ್ನೆ ಮಾಡಿದ್ದಾರೆ.

ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಅರ್ಜಿ
ಇನ್ನು, ಅಪರಾಧಿಗಳ ಪರ ವಕೀಲ ಎ.ಪಿ. ಸಿಂಗ್ ಮಾತನಾಡಿದ್ದು, ಪಟಿಯಾಲಾ ಹೌಸ್ ಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್ ಮೊರೆ ಹೋಗುವುದಾಗಿ ಹೇಳಿದರು. ರಾಜಕೀಯ, ಸಾರ್ವಜನಿಕ ಹಾಗೂ ಮಾಧ್ಯಮಗಳ ಒತ್ತಡದಿಂದ ಈ ರೀತಿಯ ತೀರ್ಪನ್ನು ನೀಡಲಾಗಿದೆ ಎಂದು ಸಿಂಗ್ ಆರೋಪಿಸಿದ್ದಾರೆ. ಅಲ್ಲದೇ, ಈ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದ್ದಾರೆ.












Click it and Unblock the Notifications