ಟೂಲ್ಕಿಟ್ ಪ್ರಕರಣ; ದಿಶಾ ರವಿಗೆ ಸದ್ಯಕ್ಕೆ ಜಾಮೀನಿಲ್ಲ
ನವದೆಹಲಿ, ಫೆಬ್ರವರಿ 20: ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್ಬರ್ಗ್ ಹಂಚಿಕೊಂಡಿದ್ದ ಟೂಲ್ ಕಿಟ್ ಪ್ರಕರಣದಲ್ಲಿ ಬಂಧಿತರಾಗಿರುವ ದಿಶಾ ರವಿ ಜಾಮೀನು ಅರ್ಜಿ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ಶನಿವಾರ ನಡೆಸಿದ್ದು, ಮುಂದಿನ ಮಂಗಳವಾರ ತೀರ್ಪು ನೀಡುವುದಾಗಿ ತಿಳಿಸಿದೆ. ಹೀಗಾಗಿ ದಿಶಾ ಅವರಿಗೆ ಸದ್ಯಕ್ಕೆ ಜಾಮೀನು ದೊರೆತಿಲ್ಲ.
ಜಾಮೀನು ಕೋರಿ ದಿಶಾ ರವಿ ಅರ್ಜಿ ಸಲ್ಲಿಸಿದ್ದು, ಶನಿವಾರ ದೆಹಲಿ ಹೈಕೋರ್ಟ್ ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿತ್ತು. ಶನಿವಾರ ಮಧ್ಯಾಹ್ನ ವಿಚಾರಣೆ ಆರಂಭಗೊಂಡಿದ್ದು, ದೆಹಲಿ ಪೊಲೀಸರು ಹಾಗೂ ದಿಶಾ ಪರ ವಕೀಲರ ಹೇಳಿಕೆಗಳನ್ನು ನ್ಯಾಯಾಲಯ ದಾಖಲಿಸಿದೆ. ಈ ಎಲ್ಲಾ ವಿಚಾರಣೆಗಳ ನಂತರ, ಮಂಗಳವಾರ ತೀರ್ಪು ನೀಡುವುದಾಗಿ ತಿಳಿಸಿದೆ. ಮುಂದೆ ಓದಿ...
ಮಾಧ್ಯಮಗಳಿಗೆ ಮಾಹಿತಿ ಸೋರಿಕೆ: ದೆಹಲಿ ಪೊಲೀಸರ ವಿರುದ್ಧ ಕೋರ್ಟ್ ಮೊರೆ ಹೋದ ದಿಶಾ ರವಿ
"ಭಾರತದಲ್ಲಿ ಅಶಾಂತಿ ಸೃಷ್ಟಿಸುವ ಯೋಜನೆ"
"ಇದು ಬರೀ ಟೂಲ್ ಕಿಟ್ ಅಲ್ಲ. ಭಾರತದ ಪ್ರತಿಷ್ಠೆ ತಗ್ಗಿಸುವ, ಭಾರತದಲ್ಲಿ ಅಶಾಂತಿ ಸೃಷ್ಟಿಸುವ ಯೋಜನೆ" ಎಂದು ಪರಿಸರ ಕಾರ್ಯಕರ್ತೆ ದಿಶಾ ರವಿ ಕುರಿತು ಹೈಕೋರ್ಟ್ನಲ್ಲಿ ದೆಹಲಿ ಪೊಲೀಸರು ತಿಳಿಸಿದ್ದಾರೆ.
ಗ್ರೆಟಾ ಜೊತೆ ಹಾಗೂ ಖಲಿಸ್ತಾನಿ ಸಂಬಂಧಿ ಗುಂಪಿನೊಂದಿಗೆ ದಿಶಾ ರವಿ ಸಂಪರ್ಕ ಹೊಂದಿದ್ದರು ಎಂಬುದು ಅವರ ಚಾಟ್ಗಳಿಂದ ತಿಳಿದುಬಂದಿದೆ. ಅಷ್ಟಲ್ಲದೇ ಕಾನೂನು ಕ್ರಮದ ಭಯದಿಂದ ಅವುಗಳನ್ನು ಡಿಲೀಟ್ ಮಾಡಿರುವುದೂ ಕಂಡುಬಂದಿದೆ. ಇದು ಟೂಲ್ ಕಿಟ್ ಸೃಷ್ಟಿ ಹಿಂದಿನ ಉದ್ದೇಶವನ್ನೂ ತಿಳಿಸುತ್ತದೆ ಎಂದು ಪೊಲೀಸರು ಹೇಳಿದ್ದಾರೆ. ಭಾರತದಲ್ಲಿ ಅಶಾಂತಿ ಸೃಷ್ಟಿಸುವ ಜಾಗತಿಕ ಸಂಚಿನಲ್ಲಿ ಭಾರತದವರೇ ಆದ ದಿಶಾ ರವಿ ಅವರೂ ಇದ್ದಾರೆ. ರೈತರ ಪ್ರತಿಭಟನೆ ನೆಪವನ್ನೇ ಅವರು ಬಳಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ."ದಿಶಾ ರವಿ ಸಾಕ್ಷ್ಯ ನಾಶ ಮಾಡಲು ಪ್ರಯತ್ನಿಸಿದ್ದು ಏಕೆ?"
ಖಲಿಸ್ತಾನಿ ಗುಂಪುಗಳೊಂದಿಗೆ ದಿಶಾ ರವಿ ಸಂಪರ್ಕ ಹೊಂದಿದ್ದರು ಎಂಬುದಕ್ಕೆ ಹಲವು ಸಾಕ್ಷ್ಯಗಳು ದೊರೆತಿವೆ. ಜೊತೆಗೆ ಟೂಲ್ ಕಿಟ್ ರಚಿಸಿದ, ಹಂಚಿದ ಮಾಹಿತಿಗಳೂ ದೊರೆತಿವೆ. ಇಲ್ಲವೆಂದಿದ್ದರೆ ದಿಶಾ ರವಿ ಸಾಕ್ಷ್ಯಗಳನ್ನು ನಾಶಪಡಿಸಲು ಪ್ರಯತ್ನ ಪಡುವ ಅವಶ್ಯಕತೆಯಾದರೂ ಏನಿತ್ತು ಎಂದು ಪ್ರಶ್ನಿಸಿದ್ದಾರೆ. ತಪ್ಪು ಮಾಡಿಲ್ಲವೆಂದರೆ ಈ ಪ್ರಯತ್ನದ ಅಗತ್ಯವೇ ಇರಲಿಲ್ಲ ಎಂದು ಹೇಳಿದ್ದಾರೆ.
ದಿಶಾ ರವಿ ಪ್ರಕರಣ: ದೆಹಲಿ ಪೊಲೀಸರು, ಮಾಧ್ಯಮಗಳಿಗೆ ಹೈಕೋರ್ಟ್ ಎಚ್ಚರಿಕೆ
"ಜಾಗತಿಕ ಮಟ್ಟದಲ್ಲಿ ರೈತರ ಹೋರಾಟ ಚರ್ಚಿಸಿದ್ದೇ ತಪ್ಪಾ?"
ದಿಶಾ ಪರ ವಕೀಲರು ಕೂಡ ವಾದ ಮಂಡಿಸಿದ್ದು, ದಿಶಾಗೆ ಸಿಖ್ ಫಾರ್ ಜಸ್ಟೀಸ್ ಜೊತೆ ಸಂಪರ್ಕವಿತ್ತು ಎನ್ನಲಾದ ಯಾವುದೇ ಸಾಕ್ಷ್ಯಗಳು ಇಲ್ಲ. ರೈತರ ಹೋರಾಟವನ್ನು ಜಾಗತಿಕ ಮಟ್ಟದಲ್ಲಿ ಚರ್ಚಿಸುವುದು ತಪ್ಪು ಎಂದಾದರೆ, ಆಕೆ ಜೈಲಿನಲ್ಲಿರುವುದು ಸರಿಯೇ ಎಂದು ವಾದಿಸಿದರು. ಹೊರಗಿನವರೊಂದಿಗೆ ಮಾತನಾಡಿದರು ಎಂದ ಮಾತ್ರಕ್ಕೆ ಹೊರಗಿನವರು ಆಗಿ ಹೋಗುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ. ಟೂಲ್ಕಿಟ್ನಲ್ಲಿ ಅಪರಾಧ ಎನ್ನುವಂಥದ್ದು ಏನಿದೆ? ಪರಿಸರ ಹಾಗೂ ಕೃಷಿ ನಡುವೆ ಸಂಬಂಧ ಇರುವ ಕಾರಣ ದಿಶಾ ಹೋರಾಟದಲ್ಲಿ ತೊಡಗಿಕೊಂಡಿದ್ದಾರಷ್ಟೆ ಎಂದು ವಾದಿಸಿದ್ದಾರೆ.
Recommended Video
ತೀರ್ಪು ಮುಂದೂಡಿದ ಕೋರ್ಟ್
ದಿಶಾ ರವಿ ಕುರಿತು ವಿಚಾರಣೆಯನ್ನು ಮೂರು ಗಂಟೆಗಳ ಕಾಲ ನಡೆಸಿದ ದೆಹಲಿ ಹೈಕೋರ್ಟ್, ಮುಂದಿನ ಮಂಗಳವಾರ ಜಾಮೀನಿನ ಕುರಿತು ತೀರ್ಪು ನೀಡುವುದಾಗಿ ತಿಳಿಸಿತು. ವಿಚಾರಣೆ ಮುಗಿಯುವವರೆಗೂ ದಿಶಾ ದೆಹಲಿ ಬಿಟ್ಟು ಹೋಗುವುದಿಲ್ಲ ಎಂದು ಅಫಿಡವಿಟ್ ನೀಡುವುದಾಗಿ ದಿಶಾ ಪರ ವಕೀಲರು ಕೇಳಿಕೊಂಡಿದ್ದಾರೆ.
ಗ್ರೆಟಾ ಥನ್ ಬರ್ಗ್ ಟ್ವೀಟ್ ಮಾಡಿದ್ದ ಟೂಲ್ ಕಿಟ್ ಸಂಪಾದನೆ ಮಾಡಿದ ಆರೋಪದಲ್ಲಿ ಪೊಲೀಸರು ದಿಶಾ ಅವರನ್ನು ಬಂಧಿಸಿದ್ದರು. ದಿಶಾಗೆ ಖಲಿಸ್ತಾನ ಪರ ಚಳವಳಿಯೊಂದಿಗೆ ಇದೆ ಎನ್ನಲಾದ ನಂಟನ್ನು ಖಾತರಿಪಡಿಸಿಕೊಳ್ಳಲು ಆಕೆಯ ವಿಚಾರಣೆ ನಡೆಸುವುದು ಅಗತ್ಯವಿದೆ ಎಂದು ತಿಳಿಸಿ ಪೊಲೀಸರು ಬಂಧಿಸಿದ್ದರು.