ರಾಷ್ಟ್ರದ್ರೋಹ ಪ್ರಕರಣ: ಶಾರ್ಜೀಲ್ ಜಾಮೀನು ಅರ್ಜಿ ವಜಾ
ನವದೆಹಲಿ, ಅಕ್ಟೋಬರ್ 22: 2019 ರ ಡಿಸೆಂಬರ್ನಲ್ಲಿ ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ವಿರೋಧಿಸಿ ನಡೆದಿದ್ದ ಪ್ರತಿಭಟನೆಯಲ್ಲಿ ಮಾಡಿದ್ದ ಭಾಷಣದ ಹಿನ್ನೆಲೆಯಲ್ಲಿ ದಾಖಲಾಗಿದ್ದ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್ಯು) ವಿದ್ಯಾರ್ಥಿ ಶಾರ್ಜೀಲ್ ಇಮಾಮ್ ವಿರುದ್ಧ ದಾಖಲಾಗಿದ್ದ ರಾಷ್ಟ್ರದ್ರೋಹ ಪ್ರಕರಣದಲ್ಲಿ ದೆಹಲಿ ಕೋರ್ಟ್ ಜಾರ್ಮಿನು ಅರ್ಜಿಯನ್ನು ವಜಾ ಮಾಡಿದೆ.
ಜವಹರಲಾಲ್ ನೆಹರೂ ವಿಶ್ವವಿದ್ಯಾಲಯ(JNU)ದ ವಿದ್ಯಾರ್ಥಿ ಶಾರ್ಜೀಲ್ ಇಮಾಮ್ 2019ರ ಡಿಸೆಂಬರ್ 13ರಂದು ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ವಿರೋಧಿಸಿ ಜಾಮೀಯಾ ಮಿಲಿಯಾ ವಿಶ್ವವಿದ್ಯಾಲಯದಲ್ಲಿ ನಡೆದಿದ್ದ ಪ್ರತಿಭಟನೆಯ ಸಂದರ್ಭದಲ್ಲಿ ಕೋಮು ಪ್ರಚೋದಕ ಭಾಷಣೆ ಮಾಡಿದ್ದರು ಎಂದು ಆರೋಪ ಮಾಡಲಾಗಿದೆ. ಹಾಗೆಯೇ ಕಳೆದ ಫೆಬ್ರವರಿಯಲ್ಲಿ ದೆಹಲಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆಯೂ ಇಮಾಮ್ ವಿರುದ್ಧ ದೂರು ದಾಖಲಾಗಿದ್ದು, ಈ ಹಿನ್ನೆಲೆಯಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ.
ಶಾರ್ಜೀಲ್ ಇಮಾಮ್ನ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ ನ್ಯಾಯಾಲಯವು, "ಇಮಾಮ್ ಭಾಷಣವನ್ನು ಕೇಳಿದಾಗ ಅದು ಕೋಮು ದ್ವೇಷ ಹುಟ್ಟಿಸುವಂತಹ ಭಾಷಣ ಎಂದು ಸ್ಪಷ್ಟವಾಗಿ ನಾವು ಹೇಳಬಹುದು. ಭಾಷಣದಲ್ಲಿ ಹಲವಾರು ಪ್ರಚೋದನಕಾರಿ ವಿಚಾರಗಳು ಇದೆ. ಆದ್ದರಿಂದ ಈ ಹಂತದಲ್ಲಿ ನಾವು ಆರೋಪಿ ಶಾರ್ಜೀಲ್ ಇಮಾಮ್ಗೆ ಜಾಮೀನು ನೀಡುವುದಿಲ್ಲ," ಎಂದು ತಿಳಿಸಿದೆ.

ಸ್ವಾಮಿ ವಿವೇಕಾನಂದರ ಹೇಳಿರುವ "ನಮ್ಮ ಯೋಚನೆಗಳಿಂದ ನಾವು ರೂಪಿತವಾಗಿದ್ದೇವೆ. ಆದ್ದರಿಂದ ನಮ್ಮ ಯೋಚನೆಯ ಬಗ್ಗೆ ನಾವು ಜಾಗರೂಕವಾಗಿರಬೇಕು. ಯೋಚನೆಗಳು ಜೀವಂತವಾಗಿರುತ್ತದೆ. ಅವು ಬಲು ದೂರ ಸಾಗುತ್ತವೆ," ಎಂಬ ವಾಕ್ಯವನ್ನು ಉಲ್ಲೇಖ ಮಾಡಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅನೂಜ್ ಅಗರ್ವಾಲ್, "ಶಾರ್ಜೀಲ್ ಇಮಾಮ್ ಭಾಷಣವು ಕೋಮು ದ್ವೇಷವನ್ನು ಬಿತ್ತುವಂತಿದೆ. ಸಮಾಜದ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುವಂತೆ ಇದೆ," ಎಂದು ಅಭಿಪ್ರಾಯಿಸಿದರು.
ಆದೇಶದಲ್ಲಿ ಜಾನ್ ಮಿಲ್ಟನ್ ಸಾಲುಗಳು ಉಲ್ಲೇಖ:
ಇನ್ನು ನ್ಯಾಯಾಧೀಶ ಅನೂಜ್ ಅಗರ್ವಾಲ್ ತನ್ನ ಆದೇಶದಲ್ಲಿ, ಬ್ರಿಟಿನ್ ಮಹಾ ಕವಿ ಜಾನ್ ಮಿಲ್ಟನ್ನ ಸಾಲುಗಳನ್ನು ಕೂಡಾ ಉಲ್ಲೇಖ ಮಾಡಿದ್ದಾರೆ. "ನಾವು ಎಲ್ಲವನ್ನು ತಿಳಿಯುವ, ಮುಕ್ತವಾಗಿ ವಾದ ಮಾಡುವ ಹಾಗೂ ಆತ್ಮಸಾಕ್ಷಿಗೆ ಅನುಗುಣವಾಗಿ ವರ್ತಿಸುವ ಸ್ವಾತಂತ್ಯ್ರ ನೀಡಿ," ಎಂಬ ಬ್ರಿಟಿನ್ ಮಹಾ ಕವಿ ಜಾನ್ ಮಿಲ್ಟನ್ ಸಾಲುಗಳನ್ನು ಉಲ್ಲೇಖ ಮಾಡಿದ್ದಾರೆ. ಈ ಸಂದರ್ಭದಲ್ಲೇ "ನಮ್ಮ ಸಂವಿಧಾನದಲ್ಲಿ ವಾಕ್ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯವೆಂಬ ನಮ್ಮ ಮೂಲಭೂತ ಹಕ್ಕನ್ನು ಉನ್ನತ ಸ್ಥಾನದಲ್ಲಿ ಇರಿಸಲಾಗಿದೆ. ಹಾಗಿರುವಾಗ ನಾವು ಈ ಸ್ವಾತಂತ್ರ್ಯವನ್ನು ಸಮಾಜದ ಶಾಂತಿಗೆ ಧಕ್ಕೆ ಉಂಟು ಮಾಡಲು ಹಾಗೂ ಸಮಾಜದಲ್ಲಿರುವ ಸೌಹಾರ್ದಕ್ಕೆ ಧಕ್ಕೆ ಉಂಟು ಮಾಡಲು ಬಳಸಬಾರದು ಎಂದು ಹೇಳಿದರು.
"ನಾವು ಈ ಸಂದರ್ಭಲ್ಲಿ ಆರೋಪಿ ಶಾರ್ಜೀಲ್ ಇಮಾಮ್ಗೆ ಜಾಮೀನು ನೀಡಲು ಮುಂದಾಗಲಾರೆವು. ಸಹ ಆರೋಪಿಗಳಂತೆ ಈ ಆರೋಪಿ ಅಲ್ಲ. ಸಹ ಆರೋಪಿಗಳಿಗಿಂತ ಭಿನ್ನ ಆರೋಪ ಈ ಆರೋಪಿಯದ್ದು. ಆದ್ದರಿಂದ ಈಗ ಆರೋಪಿ ಶಾರ್ಜೀಲ್ ಇಮಾಮ್ಗೆ ನ್ಯಾಯಾಲಯವು ಜಾಮೀನು ನೀಡದೆ, ಆತನ ಜಾಮೀನು ಅರ್ಜಿಯನ್ನು ವಜಾ ಮಾಡುತ್ತದೆ," ಎಂದು ನ್ಯಾಯಾಲಯವು ತಿಳಿಸಿದೆ.
ಫೆಬ್ರವರಿ 2020ರಲ್ಲಿ ನಡೆದ ದೆಹಲಿ ಗಲಭೆಗಳಿಗೆ ಸಂಬಂಧಿಸಿದಂತೆ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ (ಯುಎಪಿಎ) ಅಡಿ ಉಮರ್ ಖಾಲಿದ್ ಹಾಗೂ ಶಾರ್ಜೀಲ್ ಇಮಾಮ್ರ ಬಂಧನವಾಗಿದೆ. ದೆಹಲಿ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿ ಇತ್ತೀಚೆಗೆ ಸಲ್ಲಿಸಿದ ಆರೋಪಪಟ್ಟಿಯಲ್ಲಿ ಶಾರ್ಜೀಲ್ ಇಮಾಮ್ ಹಾಗೂ ಉಮರ್ ಖಾಲಿದ್ ಸೈದ್ಧಾಂತಿಕವಾಗಿ ಒಂದೇ ಎಂಬ ರೀತಿಯಲ್ಲಿ ಉಲ್ಲೇಖ ಮಾಡಲಾಗಿದೆ. ಈ ಹಿನ್ನೆಲೆ ಕಳೆದ ವಾರ ನಡೆದ ವಿಚಾರಣೆಯ ಸಂದರ್ಭದಲ್ಲಿ ಉಮರ್ ಖಾಲಿದ್ ಪರ ವಕೀಲರು ಶಾರ್ಜೀಲ್ ಇಮಾಮ್ ಹಾಗೂ ಉಮರ್ ಖಾಲಿದ್ ಒಂದೇ ಸಿದ್ಧಾಂತಕ್ಕೆ ಸೇರಿದವರು ಅಲ್ಲ ಎಂದು ಹೇಳಿದ್ದಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications