ಮೀ ಟೂ: ಮಾನಹಾನಿ ಪ್ರಕರಣದ ರಾಜಿ ಮಾಡಿಕೊಳ್ಳಲು ಅಕ್ಬರ್, ರಮಣಿಗೆ ಕೋರ್ಟ್ ಸಲಹೆ
ನವದೆಹಲಿ, ನವೆಂಬರ್ 21: 'ಮೀ ಟೂ' ಪ್ರಕರಣದ ವಿಚಾರವಾಗಿ ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಮಾಜಿ ಕೇಂದ್ರ ಸಚಿವ ಎಂಜೆ ಅಕ್ಬರ್ ಹೂಡಿರುವ ಅಪರಾಧ ಮಾನನಷ್ಟ ಮೊಕದ್ದಮೆಯನ್ನು ರಾಜಿ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುವ ಅವಕಾಶವಿದೆಯೇ ಎಂದು ನೋಡುವಂತೆ ದೆಹಲಿ ನ್ಯಾಯಾಲಯವೊಂದು ಶನಿವಾರ ಹೇಳಿದೆ.
ಪತ್ರಕರ್ತರಾಗಿದ್ದ ಎಂಜೆ ಅಕ್ಬರ್ ಅವರು ಸುಮಾರು 20 ವರ್ಷಗಳ ಕಾಲ ತಮ್ಮೊಂದಿಗೆ ಲೈಂಗಿಕವಾಗಿ ಅಸಭ್ಯ ವರ್ತನೆ ತೋರಿದ್ದರು ಎಂದು ಆರೋಪಿಸಿದ್ದ ಪ್ರಿಯಾ ರಮಣಿ ವಿರುದ್ಧ ಎಂಜೆ ಅಕ್ಬರ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
2018ರಲ್ಲಿ ತೀವ್ರಗೊಂಡಿದ್ದ 'ಮೀ ಟೂ' ಚಳವಳಿಯ ಸಂದರ್ಭದಲ್ಲಿ ಅಕ್ಬರ್ ವಿರುದ್ಧ ಮಾಡಿದ್ದ ಆರೋಪಗಳು ಸತ್ಯವಾಗಿವೆ ಮತ್ತು ಸಾರ್ವಜನಿಕ ಒಳಿತಿಗಾಗಿ ಅವುಗಳನ್ನು ಬಹಿರಂಗಪಡಿಸಲಾಗಿದೆ ಎಂದು ಸಮರ್ಥಿಸಿಕೊಂಡಿದ್ದರು.

ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಹಿಂದಿನ ನ್ಯಾಯಾಧೀಶರು ಬೇರೆ ನ್ಯಾಯಾಲಯಕ್ಕೆ ಬುಧವಾರ ವರ್ಗಾವಣೆ ಹೊಂದಿರುವುದರಿಂದ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ರವೀಂದ್ರ ಕುಮಾರ್ ಪಾಂಡೆ ಕೊನೆಯ ಹಂತದ ವಾದ ವಿವಾದಗಳನ್ನು ಹೊಸದಾಗಿ ಆಲಿಸಿದರು.
ಈ ವಿಚಾರದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲು ತಮ್ಮ ಕಕ್ಷಿದಾರರೊಂದಿಗೆ ಸಮಾಲೋಚನೆ ನಡೆಸಲು ಸಮಯ ಬೇಕಾಗುತ್ತದೆ ಎಂದು ಅಕ್ಬರ್ ಪರ ವಕೀಲರಾದ ಗೀತಾ ಲೂತ್ರಾ ಹೇಳಿದರು. ಈ ಪ್ರಕರಣದಲ್ಲಿನ ವಾಸ್ತವಗಳು ವಿಚಿತ್ರವಾಗಿರುವುದರಿಂದ ಯಾವುದೇ ರೀತಿ ಬಗೆಹರಿಸುವ ಅವಕಾಶ ಕಡಿಮೆ ಇದೆ ಎಂದು ರಮಣಿ ಪರ ವಕೀಲ ಭವೂಕ್ ಚೌಹಾಣ್ ಹೇಳಿದರು.
ರಾಜಿ ಒಪ್ಪಂದದ ಕುರಿತು ಎರಡೂ ಕಡೆಯ ವಕೀಲರು ಪ್ರತಿಕ್ರಿಯೆ ನೀಡಬೇಕು ಮತ್ತು ನವೆಂಬರ್ 24ರ ಮುಂದಿನ ವಿಚಾರಣೆಯ ದಿನಾಂಕದಂದು ಅಭಿಪ್ರಾಯ ಸಲ್ಲಿಸಬೇಕು ಎಂದು ಕೋರ್ಟ್ ಸೂಚಿಸಿದೆ. 2018ರ ಅಕ್ಟೋಬರ್ 15ರಂದು ಎಂಜೆ ಅಕ್ಬರ್ ಅವರು ರಮಣಿ ವಿರುದ್ಧ ಕ್ರಮಿನಲ್ ಡಿಫಾಮೇಷನ್ ಪ್ರಕರಣ ದಾಖಲಿಸಿದ್ದರು. ಎರಡು ದಿನದ ಬಳಿಕ ಅವರು ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.












Click it and Unblock the Notifications