ಸತ್ಯದ ಹೋರಾಟವನ್ನು ಸರ್ಕಾರಗಳು ತಡೆಯಲಾಗಲ್ಲ: ರಾಹುಲ್ ಗಾಂಧಿ
ನವದೆಹಲಿ, ನವೆಂಬರ್.27: ಸತ್ಯದ ಪರವಾಗಿ ನಡೆದ ಯುದ್ಧವನ್ನು ಜಗತ್ತಿನಲ್ಲಿ ಯಾವುದೇ ಸರ್ಕಾರಗಳು ತಡೆಯುವುದಕ್ಕೆ ಸಾಧ್ಯವಿಲ್ಲ ಎಂದು ಸಂಸದ ರಾಹುಲ್ ಗಾಂಧಿ ಕಿಡಿ ಕಾರಿದ್ದಾರೆ. ಕೃಷಿ ಸಂಬಂಧಿತ ಕಾಯ್ದೆ ವಿರುದ್ಧ ರೈತರ ಹೋರಾಟಕ್ಕೆ ಅವರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಸತ್ಯಕ್ಕಾಗಿ ನಡೆದ ಹೋರಾಟವನ್ನು ಯಾವುದೇ ಸರ್ಕಾರಗಳು ತಡೆಯುವುದಕ್ಕೆ ಸಾಧ್ಯವಿಲ್ಲ. "ಇದು ಕೇವಲ ಆರಂಭವಷ್ಟೇ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸರ್ಕಾರವು ರೈತರ ಬೇಡಿಕೆಗಳನ್ನು ಮತ್ತು ಒಪ್ಪಿಕೊಳ್ಳಬೇಕು. ಕೃಷಿ ಸಂಬಂಧಿತ ಕಾಯ್ದೆಯನ್ನು ವಾಪಸ್ ಪಡೆದುಕೊಳ್ಳಬೇಕು" ಎಂದು 'IamWithFarmers' ಹ್ಯಾಷ್ ಟ್ಯಾಗ್ ನೊಂದಿಗೆ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ರೈತರ ಪ್ರತಿಭಟನೆ, ಅಶ್ರುವಾಯು ಪ್ರಯೋಗ, ದೆಹಲಿ ಗಡಿಯಲ್ಲಿ ಸ್ಥಿತಿ ಉದ್ವಿಗ್ನ
ಕೃಷಿ ಸಂಬಂಧಿತ ಕಾಯ್ದೆ ವಿರುದ್ಧ ಸಾವಿರಾರು ಪ್ರತಿಭಟನಾನಿರತ ರೈತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ದೆಹಲಿಯತ್ತ ಆಗಮಿಸುತ್ತಿದ್ದರು. ಆದರೆ ಪೊಲೀಸರು ನವದೆಹಲಿಯ ವಿವಿಧ ಕಡೆಗಳಲ್ಲಿ ರೈತರ ಮೇಲೆ ಅಶ್ರುವಾಯು ಸಿಡಿಸಿದ್ದು, ಬ್ಯಾರಿಕೇಡ್ ಹಾಕುವ ಮೂಲಕ ರೈತರನ್ನು ತಡೆಯಲಾಗಿತ್ತು. ನಂತರದಲ್ಲಿ ರಾಷ್ಟ್ರ ರಾಜಧಾನಿ ಪ್ರವೇಶಿಸಲು ಪ್ರತಿಭಟನಾನಿರತ ರೈತರಿಗೆ ಅನುಮತಿ ನೀಡಲಾಗಿದ್ದು, ಶಾಂತಿಯುತ ಪ್ರತಿಭಟನೆಗೆ ಅವಕಾಶವಿದೆ ಎಂದು ದೆಹಲಿ ಪೊಲೀಸರು ಟ್ವೀಟ್ ಮಾಡಿದ್ದರು.
ಪಂಜಾಬ್ ನಿಂದ ರೈತರ "ದೆಹಲಿ ಚಲೋ":
ಕೃಷಿ ಸಂಬಂಧಿತ ಮಸೂದೆ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ಪಂಜಾಬಿನ 30ಕ್ಕೂ ಹೆಚ್ಚು ರೈತ ಸಂಘಟನೆಗಳು ಮತ್ತು ಸಂಸ್ಥೆಗಳ ಸದಸ್ಯರು ಹಲವು ಮಾರ್ಗಗಳ ಮೂಲಕ ದೆಹಲಿ ಪ್ರವೇಶಿಸಲು ಮುಂದಾಗಿದ್ದರು. ಲಲ್ರೂ, ಶಾಂಬು, ಪಟಿಯಾಲಾ-ಪೆಹೊವಾ, ಪತ್ರಾನ್-ಖಾನೌರ್, ಮೂನಕ್-ತೊಹನ್, ರಟಿಯಾ-ಫತೇಬಾದ್, ತಲವಂಡಿ-ಸಿರ್ಸಾ ಮಾರ್ಗಗಳಿಂದ ರೈತರು ದೆಹಲಿಗೆ ತೆರಳುತ್ತಿದ್ದಾರೆ.
ರೈತರನ್ನು ಕಂಗೆಡಿಸಿದ ಕೃಷಿ ಸಂಬಂಧಿತ ಕಾಯ್ದೆಗಳು:
ಕಳೆದ ಸಪ್ಟೆಂಬರ್.27ರಂದು ಕೇಂದ್ರ ಸರ್ಕಾರವು ಮೂರು ಕೃಷಿ ಸಂಬಂಧಿತ ಕಾಯ್ದೆಗಳ ಜಾರಿಗೊಳಿಸಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅನುಮೋದನೆ ನೀಡಿದ್ದರು. ರೈತರ ಆಕ್ರೋಶಕ್ಕೆ ಕಾರಣವಾಗಿರುವ ಮತ್ತು ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಆ ಮೂರು ಕೃಷಿ ಸಂಬಂಧಿತ ಕಾಯ್ದೆಗಳು ಯಾವುವು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.
1. ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಮಸೂದೆ
2. ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ
3. ಅಗತ್ಯ ಸರಕುಗಳ (ತಿದ್ದುಪಡಿ) ಮಸೂದೆ