ಟ್ರಾಫಿಕ್ ಪೊಲೀಸ್ ಕೊಟ್ಟ ಚಲನ್ ಹರಿದು ಬೈಕ್ ಸವಾರ ಮಾಡಿದ್ದೇನು?
ನವದೆಹಲಿ,ಸೆ. 06: ಹೆಲ್ಮೆಟ್ ಧರಿಸದೆ ವಾಹನ ಚಾಲನೆ, ಲೈಸನ್ ರಹಿತ ಚಾಲನೆ, ಡಿಎಲ್ ಇಲ್ಲ, ಆರ್ ಸಿ ಬುಕ್ ಇಲ್ಲ, ಹಳೆ ವಾಹನವಾದರೆ ಎಮಿಷನ್ ಟೆಸ್ಟ್ ಮಾಡಿಸಿಲ್ಲ, ನಂಬರ್ ಪ್ಲೇಟ್ ಸರಿಯಿಲ್ಲ, ಕುಡಿದು ವಾಹನ ಚಲಾಯಿಸುವುದು ಹೀಗೆ ಟ್ರಾಫಿಕ್ ಪೊಲೀಸರು ದಂಡ ವಿಧಿಸುವುದರಲ್ಲಿ ನಿರತರಾಗಿದ್ದಾರೆ. ದೆಹಲಿಯ ಸವಾರನೊಬ್ಬ ಈ ರೀತಿ ದಂಡದ ಚಲನ್ ಕೊಟ್ಟ ಪೊಲೀಸರೇ ಗಾಬರಿಯಾಗುವಂಥ ಕೆಲಸ ಮಾಡಿದ್ದಾನೆ.
ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ಮಾಡಿದ ಬಳಿಕ ದಂಡದ ಮೊತ್ತ ಹೆಚ್ಚಾಗಿದೆ. ಪೊಲೀಸರ ಉದ್ದೇಶ ದಂಡಕ್ಕೆ ಹೆದರಿ ಟ್ರಾಫಿಕ್ ನಿಯಮ ಪಾಲಿಸಲಿ ಎಂಬುದಾದರೂ ವಾಹನ ಸವಾರರು ಜಾಗೃತರಾಗುವುದಕ್ಕಿಂತ ದಂಡದ ಮೊತ್ತ ಕಡಿಮೆಯಾದರೆ ಸಾಕು ಎಂಬ ನಿರೀಕ್ಷೆಯಲ್ಲೇ ಇದ್ದಾರೆ.
ದೆಹಲಿಯಲ್ಲಿ ಸ್ಕೂಟಿ ಸವಾರನೊಬ್ಬನಿಗೆ ಸಾವಿರಾರು ರುಪಾಯಿ ದಂಡ ವಿಧಿಸಿದ ಸುದ್ದಿ ಬೆನ್ನಲ್ಲೇ ಮತ್ತೊಂದು ಸುದ್ದಿ ಬಂದಿದೆ. ಶೇಖ್ ಸರಾಯಿ ಪ್ರದೇಶದಲ್ಲಿ ಗುರುವಾರದಂದು ಬೈಕ್ ಸವಾರನೊಬ್ಬನನ್ನು ತಡೆದ ಪೊಲೀಸರು, ವಿವಿಧ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸಾವಿರಾರು ರುಪಾಯಿ ದಂಡ ತೆರುವಂತೆ ಸೂಚಿಸಿ ಚಲನ್ ನೀಡಿದ್ದಾರೆ.

ಬೈಕಿನಿಂದ ಡಾಕ್ಯುಮೆಂಟ್ಸ್ ತೆಗೆಯುತ್ತಿದ್ದ ವ್ಯಕ್ತಿ ಇದ್ದಕ್ಕಿದ್ದಂತೆ ತನ್ನ ಬೈಕಿಗೆ ಬೆಂಕಿ ಹಚ್ಚಿದ್ದಾನೆ. ಪೊಲೀಸರು ಹಿಂತಿರುಗಿ ನೋಡುವಷ್ಟರಲ್ಲಿ ಬೈಕು ಧಗ ಧಗ ಉರಿದು ಹೋಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳಾ ಸಿಬ್ಬಂದಿ ಬಂದು ಬೆಂಕಿ ನಂದಿಸುವಷ್ಟರಲ್ಲಿ ಬೈಕು ಸುಟ್ಟು ಕರಕಲಾಗಿ ಬಿಟ್ಟಿದೆ.
ಈ ಘಟನೆ ಬಳಿಕ ಬೈಕ್ ಸವಾರನನ್ನು ವಶಕ್ಕೆ ಪಡೆದ ಪೊಲೀಸರು ವೈದ್ಯಕೀಯ ಪರೀಕ್ಷೆ ಒಳಪಡಿಸಿದ್ದಾರೆ. ವಿಚಿತ್ರವಾಗಿ ಆಡುತ್ತಿದ್ದ ಈ ವ್ಯಕ್ತಿ ಮಾನಸಿಕ ಸ್ಥಿಮಿತ ಕಳೆದುಕೊಂಡು ಈ ರೀತಿ ವರ್ತಿಸಿರಬಹುದು ಎಂದು ಶಂಕಿಸಲಾಗಿದೆ.
ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿಯಾದ ಬಳಿಕ ಸೆಪ್ಟೆಂಬರ್ 01ರಿಂದ ಸಂಚಾರಿ ನಿಯಮ ಉಲ್ಲಂಘಿಸುವವರು ಭಾರಿ ದಂಡ ತೆರಬೇಕಾಗಿದೆ.












Click it and Unblock the Notifications