ಸಂಸದರು, ಶಾಸಕರ ವಿರುದ್ಧದ ಕ್ರಿಮಿನಲ್ ಪ್ರಕರಣ 2 ವರ್ಷದಲ್ಲಿ ಶೇ.17 ಹೆಚ್ಚಳ
ನವದೆಹಲಿ, ಆ.11: ಹಾಲಿ ಮತ್ತು ಮಾಜಿ ಸಂಸದರು ಮತ್ತು ಶಾಸಕರ ವಿರುದ್ಧ ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳು ಎರಡು ವರ್ಷಕ್ಕಿಂತ ಕಡಿಮೆ ಅವಧಿಯಲ್ಲೇ ಶೇ. 17 ರಷ್ಟು ಜಿಗಿತವನ್ನು ದಾಖಲಿಸಿವೆ. ಇದು ಅಪರಾಧದೊಂದಿಗೆ ರಾಜಕೀಯದ ಸಂಬಂಧವನ್ನು ಸಾಬೀತುಪಡಿಸುತ್ತದೆ. ವಿಚಾರಣೆಯನ್ನು ವೇಗಗೊಳಿಸಲು ಐದು ವರ್ಷಗಳ ಪ್ರಯತ್ನದ ಹೊರತಾಗಿಯೂ ಸುಪ್ರೀಂ ಕೋರ್ಟ್ ಹೆಣಗಾಡುತ್ತಿದೆ. ಚುನಾಯಿತ ಪ್ರತಿನಿಧಿಗಳ ಹಣ ಮತ್ತು ಸ್ನಾಯು ಶಕ್ತಿಗಳಿಂದ ಈ ವಿಚಾರಣೆ ಬಹಳ ವಿಳಂಬವಾಗುತ್ತಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದೆ.
ಮುಖ್ಯ ನ್ಯಾಯಮೂರ್ತಿ ಎನ್ವಿ ರಮಣ ನೇತೃತ್ವದ ಸುಪ್ರೀಂ ಕೋರ್ಟ್ ನ್ಯಾಯಪೀಠದ ಮುಂದೆ ಅಶ್ವಿನಿ ಉಪಾಧ್ಯಾಯ ಸಲ್ಲಿಸಿದ ಪಿಐಎಲ್ನಲ್ಲಿ ಒಂಬತ್ತು ತಿಂಗಳ ನಂತರ ವಿಚಾರಣೆಯನ್ನು ಪುನರಾರಂಭಿಸಿದರು. ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವ ಮೂಲಕ ಸಂಸದರು ಮತ್ತು ಶಾಸಕರ ವಿರುದ್ಧದ ಪ್ರಕರಣಗಳ ತ್ವರಿತ ವಿಚಾರಣೆಯನ್ನು ಕೋರಿ ಅಶ್ವಿನಿ ಉಪಾಧ್ಯಾಯ ಪಿಐಎಲ್ ಸಲ್ಲಿಸಿದ್ದರು.
ಹೈಕೋರ್ಟ್ ಅನುಮತಿ ಇಲ್ಲದೆ ಸಂಸದರು, ಶಾಸಕರ ವಿರುದ್ಧದ ಕೇಸ್ ಹಿಂಪಡೆಯುವುದಕ್ಕೆ ಸುಪ್ರೀಂ ಬ್ರೇಕ್
ಅಮಿಕಸ್ ಕ್ಯೂರಿ ಮತ್ತು ಹಿರಿಯ ವಕೀಲ ವಿಜಯ್ ಹನ್ಸಾರಿಯಾ ಚುನಾಯಿತ ಪ್ರತಿನಿಧಿಗಳ ವಿರುದ್ಧದ ವಿಚಾರಣೆಯ ಸ್ಥಿತಿಯ ಬಗ್ಗೆ ಒಂದು ಕಳಪೆ ಚಿತ್ರವನ್ನು ಚಿತ್ರಿಸುವ ವರದಿಯನ್ನು ಸಲ್ಲಿಸಿದ್ದಾರೆ. ವಕೀಲೆ ಸ್ನೇಹಾ ಕಲಿತಾ ನೆರವಿನೊಂದಿಗೆ ಸಲ್ಲಿಸಿದ ವರದಿಯಲ್ಲಿ, ಹನ್ಸರಿಯಾ ಡಿಸೆಂಬರ್ 2018 ರಲ್ಲಿ ಹಾಲಿ ಮತ್ತು ಮಾಜಿ ಸಂಸದರು ಮತ್ತು ಶಾಸಕರ ವಿರುದ್ಧ ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳ ಸಂಖ್ಯೆ 4,122 ಎಂದು ಹೇಳಿದರು.
ರಾಜಕಾರಣಿಗಳ ಮೇಲಿನ ಕ್ರಿಮಿನಲ್ ಪ್ರಕರಣ ಶೇ.17 ಹೆಚ್ಚಳ
ಸೆಪ್ಟೆಂಬರ್ 2020 ರಲ್ಲಿ ಮಾಜಿ, ಹಾಲಿ ಶಾಸಕರು ಹಾಗೂ ಸಂಸದರ ವಿರುದ್ದದ ಪ್ರಕರಣ 4,859 ಕ್ಕೆ ಏರಿಕೆಯಾಗಿದೆ. ಆದರೆ ಎರಡು ವರ್ಷಗಳಲ್ಲಿ ಶೇ. 17 ರಷ್ಟು ಜಿಗಿತವನ್ನು ದಾಖಲಿಸಿದೆ ಎಂದು 54 ಪುಟಗಳ ವರದಿಯಲ್ಲಿ ಅಮಿಕಸ್ ಕ್ಯೂರಿ ಹೇಳಿದರು. ಕಳೆದ ವರ್ಷ ಸೆಪ್ಟೆಂಬರ್ 16, ಅಕ್ಟೋಬರ್ 6 ಮತ್ತು ನವೆಂಬರ್ 4 ರಂದು ತನ್ನ ಆದೇಶಗಳ ಮೂಲಕ ಪದೇ ಪದೇ ಸುಪ್ರೀಂ ಕೋರ್ಟ್ ಸಿಬಿಐ ಸೇರಿದಂತೆ ಕೇಂದ್ರೀಯ ಏಜೆನ್ಸಿಗಳು ತಾನು ತನಿಖೆ ನಡೆಸುತ್ತಿರುವ ಬಾಕಿ ಪ್ರಕರಣಗಳ ತನಿಖಾ ಬೆಳವಣಿಗೆಯ ವರದಿಯನ್ನು ಸಲ್ಲಿಸುವಂತೆ ತಿಳಿಸಿದೆ. ಈ ರೀತಿ ಪದೇ ಪದೇ ಪುನರಾವರ್ತಿತ ನಿರ್ದೇಶನಗಳ ಹೊರತಾಗಿಯೂ, ಕೇಂದ್ರವು ಅಂತಹ ಯಾವುದೇ ವರದಿಯನ್ನು ಸಲ್ಲಿಸಿಲ್ಲ ಎಂದು ಹನ್ಸಾರಿಯಾ ಹೇಳಿದರು.
ಕೇಂದ್ರ ಸರ್ಕಾರ ಇನ್ನೂ ನಿರ್ಧಾರ ಸ್ಪಷ್ಟಪಡಿಸಿಲ್ಲ
"ಹಾಲಿ ಮತ್ತು ಮಾಜಿ ಚುನಾಯಿತ ಪ್ರತಿನಿಧಿಗಳ ವಿರುದ್ಧ ಇರುವ ಕ್ರಿಮಿನಲ್ ಪ್ರಕರಣಗಳನ್ನು ಪ್ರತ್ಯೇಕವಾಗಿ ವಿಚಾರಣೆ ಮಾಡಲು ಸ್ಥಾಪಿಸಲಾಗಿರುವ ವಿಶೇಷ ನ್ಯಾಯಾಲಯಗಳಲ್ಲಿ ಕೇಂದ್ರ ಅನುದಾನಿತ ವೀಡಿಯೋ ಕಾನ್ಫರೆನ್ಸ್ ಸೌಲಭ್ಯಗಳ ಕುರಿತು ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್ ಪದೇ ಪದೇ ಪ್ರಶ್ನೆ ಮಾಡುತ್ತಿದೆ. ಆದರೆ ಕೇಂದ್ರ ಸರ್ಕಾರವು ಈ ವಿಷಯದ ಬಗ್ಗೆ ತನ್ನ ನಿರ್ಧಾರವನ್ನು ಇನ್ನೂ ಸ್ಪಷ್ಟಪಡಿಸಿಲ್ಲ," ಎಂದು ಹಿರಿಯ ವಕೀಲ ವಿಜಯ್ ಹನ್ಸಾರಿಯಾ ಹೇಳಿದ್ದಾರೆ.
ಪಶ್ಚಿಮ ಬಂಗಾಳ, ಪಂಜಾಬ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್
ರಾಜಕಾರಣಿಗಳ ಕ್ರಿಮಿನಲ್ ಕೇಸ್ ಹಿಂಪಡೆಯುವ ಯತ್ನ
ಅಮಿಕಸ್ ಕ್ಯೂರಿಯು ರಾಜ್ಯ ಸರ್ಕಾರಗಳು ತಮ್ಮ ಪಕ್ಷದ ಸಂಸದರು ಮತ್ತು ಶಾಸಕರ ವಿರುದ್ಧದ ಪ್ರಕರಣಗಳನ್ನು ಹಿಂತೆಗೆದುಕೊಳ್ಳಲು ಪ್ರಯತ್ನಿಸುವ ಪ್ರವೃತ್ತಿಯನ್ನು ಎತ್ತಿ ತೋರಿಸಿದವು. ಇನ್ನು ಸಂಸದರು ಮತ್ತು ಶಾಸಕರ ವಿರುದ್ಧ ಗಂಭೀರವಾದ ಅಪರಾಧಗಳಿಗಾಗಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಉತ್ತರ ಪ್ರದೇಶ ಸರ್ಕಾರವು ಚುನಾಯಿತ ಪ್ರತಿನಿಧಿಗಳ ವಿರುದ್ಧ 76 ಪ್ರಕರಣಗಳನ್ನು ಹಿಂಪಡೆಯಲು ಪ್ರಯತ್ನಿಸಿದೆ. ಸಂಗೀತ ಸೋಮ್, ಕಪಿಲ್ ದೇವ್, ಸುರೇಶ್ ರಾಣಾ ಮತ್ತು ಸಾಧ್ವಿ ಪ್ರಾಚಿ ವಿರುದ್ಧದ ಮುಜಾಫರ್ ನಗರ ಗಲಭೆ ಪ್ರಕರಣಗಳು ಸೇರಿದಂತೆ ಹಲವು ಪ್ರಕರಣಗಳನ್ನು ಹಿಂಪಡೆಯುವ ಯತ್ನ ನಡೆದಿದೆ ಎಂದು ಆರೋಪಿಸಲಾಗಿದೆ. ಕಾರ್ಯಕರ್ತರ ವಿರುದ್ಧ ಜನವರಿ 1, 2020 ರ ಮೊದಲು ದಾಖಲಾದ ರಾಜಕೀಯ ಪ್ರಕರಣಗಳನ್ನು ಹಿಂತೆಗೆದುಕೊಳ್ಳಲು ಮಹಾರಾಷ್ಟ್ರ ಸರ್ಕಾರವು ಕಳೆದ ವರ್ಷ ಡಿಸೆಂಬರ್ 17 ರಂದು ಪ್ರಕಟಿಸಿದ ವರದಿಯನ್ನು ಹನ್ಸರಿಯಾ ಉಲ್ಲೇಖಿಸಿದ್ದಾರೆ.
ಯುಎಪಿಎ ದುರುಪಯೋಗದ ಬಗ್ಗೆ ಕಳವಳ ವ್ಯಕ್ತಪಡಿಸಿದ ಮಾಜಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರು
ಹೈಕೋರ್ಟ್ ಅನುಮತಿ ಇಲ್ಲದೆ ಕೇಸ್ ಹಿಂಪಡೆಯುವುದಕ್ಕೆ ಸುಪ್ರೀಂ ಬ್ರೇಕ್
ಇನ್ನು ಮಂಗಳವಾರ ಈ ಪ್ರಕರಣದ ವಿಚಾರಣೆ ನಡೆಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಎನ್ವಿ ರಮಣ, ನ್ಯಾಯಮೂರ್ತಿ ವಿನೀತ್ ಶರಣ್ ಮತ್ತು ನ್ಯಾಯಮೂರ್ತಿ ಸೂರ್ಯ ಕಾಂತ್ ಅವರನ್ನೊಳಗೊಂಡ ನ್ಯಾಯಪೀಠವು ಸಂಬಂಧಿತ ರಾಜ್ಯದ ಹೈಕೋರ್ಟ್ ಅನುಮತಿಯಿಲ್ಲದೆ ಸಂಸದರು ಮತ್ತು ಶಾಸಕರ ವಿರುದ್ಧದ ಯಾವುದೇ ಮೊಕದ್ದಮೆಯನ್ನು ಹಿಂಪಡೆಯುವಂತಿಲ್ಲ ಎಂಬ ಮಹತ್ವದ ಆದೇಶವನ್ನು ಪ್ರಕಟಿಸಿದೆ. "ಪ್ರಕರಣಗಳ ಹಿಂಪಡೆಯುವಿಕೆಗೆ ಸಂಬಂಧಿಸಿದಂತೆ ಕ್ರಿಮಿನಲ್ ಪ್ರೊಸೀಜರ್ ಸೆಕ್ಷನ್ 321 ರ ಅಡಿಯಲ್ಲಿ ಅಧಿಕಾರ ದುರುಪಯೋಗ ಮಾಡಲಾಗುತ್ತಿದೆ ಎಂಬುವುದು ಮೊದಲ ವಿಷಯವಾಗಿದೆ. ನಮ್ಮ ಶಾಸನಗಳ ಪ್ರಕಾರ ಸುಮೋಟೋ ಪ್ರಕರಣದಲ್ಲಿ ಹೈಕೋರ್ಟ್ನ ಒಪ್ಪಿಗೆ ಇಲ್ಲದೆ ಎಂಪಿ, ಎಂಎಲ್ಎ ವಿರುದ್ಧದ ಯಾವುದೇ ಮೊಕದ್ದಮೆಯನ್ನು ಹಿಂಪಡೆಯಬಾರದು ಎಂದು ನಿರ್ದೇಶಿಸುವುದು ನಮ್ಮ ಸೂಕ್ತ ಆದೇಶ," ಎಂದು ನ್ಯಾಯಾಲಯ ನಿರ್ದೇಶಿಸಿದೆ.
(ಒನ್ಇಂಡಿಯಾ ಸುದ್ದಿ)