ಪತ್ರಕರ್ತ ಜುಬೇರ್ ಜಾಮೀನು ಅರ್ಜಿ ತಿರಸ್ಕೃತ; 14 ದಿನ ನ್ಯಾಯಾಂಗ ಬಂಧನ
ನವದೆಹಲಿ, ಜುಲೈ 02: ಹಿಂದೂ ದೇವತೆಯ ವಿರುದ್ಧ 2018ರಲ್ಲಿ ಪೋಸ್ಟ್ ಮಾಡಿದ ಆಕ್ಷೇಪಾರ್ಹ ಟ್ವೀಟ್ಗೆ ಸಂಬಂಧಿಸಿದ ಪ್ರಕರಣದಲ್ಲಿ ಆಲ್ಟ್ನ್ಯೂಸ್ ಸಹ-ಸಂಸ್ಥಾಪಕ ಆಗಿರುವ ಪತ್ರಕರ್ತ ಮೊಹಮ್ಮದ್ ಜುಬೇರ್ಗೆ ದೆಹಲಿ ನ್ಯಾಯಾಲಯವು ಶನಿವಾರ ಜಾಮೀನು ನೀಡುವುದಕ್ಕೆ ನಿರಾಕರಿಸಿದೆ. ಆರೋಪಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪತ್ರಕರ್ತ ಮೊಹಮ್ಮದ್ ಜುಬೇರ್ ಅನ್ನು ಶನಿವಾರ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸ್ನಿಗ್ಧಾ ಸರ್ವರಿಯಾ ಎದುರು ಹಾಜರುಪಡಿಸಲಾಯಿತು. ದೆಹಲಿ ಪೊಲೀಸರು 14 ದಿನಗಳ ನ್ಯಾಯಾಂಗ ಬಂಧನಕ್ಕೊಪ್ಪಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅದೇ ರೀತಿ ಆರೋಪಿ ಮೊಹಮ್ಮದ್ ಜುಬೇರ್ ಕೂಡ ಜಾಮೀನು ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಆಲ್ಟ್ ನ್ಯೂಸ್ನ ಜುಬೈರ್ನನ್ನು ಬೆಂಗಳೂರಿಗೆ ಕರೆ ತಂದ ಪೊಲೀಸರು
ದೆಹಲಿ ಪೊಲೀಸರು ಸತ್ಯ-ಪರೀಕ್ಷಕನ ವಿರುದ್ಧ ಕ್ರಿಮಿನಲ್ ಪಿತೂರಿ ಮತ್ತು ಸಾಕ್ಷ್ಯನಾಶದ ಹೊಸ ಆರೋಪಗಳನ್ನು ಹೊರೆಸಿದ್ದಾರೆ. FCRA ಅಥವಾ ವಿದೇಶಿ ಕೊಡುಗೆ (ನಿಯಂತ್ರಣ) ಕಾಯಿದೆಯ ಸೆಕ್ಷನ್ 35 ಜೊತೆಗೆ ಹೊಸ ಆರೋಪವನ್ನು ಸೇರ್ಪಡೆ ಮಾಡಲಾಗಿದೆ.
ಶುಕ್ರವಾರ ಪೊಲೀಸರ ಪ್ರತಿಕ್ರಿಯೆ ಕೇಳಿದ್ದ ಹೈಕೋರ್ಟ್
ಕಳೆದ 2018ರಲ್ಲಿ ಹಿಂದೂ ದೇವತೆಯ ವಿರುದ್ಧ ಪೋಸ್ಟ್ ಮಾಡಿದ ಆಕ್ಷೇಪಾರ್ಹ ಟ್ವೀಟ್ಗೆ ಸಂಬಂಧಿಸಿದ ಪ್ರಕರಣದಲ್ಲಿ ತನ್ನ ಪೊಲೀಸ್ ಬಂಧನದ ಕಾನೂನುಬದ್ಧತೆ ಪ್ರಶ್ನಿಸಿ ಪತ್ರಕರ್ತ ಮೊಹಮ್ಮದ್ ಜುಬೇರ್ ಮನವಿ ಮಾಡಿಕೊಂಡಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ದೆಹಲಿ ಹೈಕೋರ್ಟ್ ಶುಕ್ರವಾರ ದೆಹಲಿ ಪೊಲೀಸರಿಂದ ಪ್ರತಿಕ್ರಿಯೆ ಕೇಳಿತ್ತು. ಶನಿವಾರ ಜುಬೇರ್ನ ಜಾಮೀನು ಅರ್ಜಿಯನ್ನು ವಿರೋಧಿಸಿದ ಪ್ರಾಸಿಕ್ಯೂಷನ್, ಅವರು ಪಾಕಿಸ್ತಾನದಂತಹ ಹಲವಾರು ವಿದೇಶಗಳಿಂದ ಪಡೆದ ದೇಣಿಗೆಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂಬ ಅಂಶವನ್ನು ದೆಹಲಿ ನ್ಯಾಯಾಲಯದ ಮುಂದೆ ಉಲ್ಲೇಖಿಸಿದರು.
ಜುಬೇರ್ ಕಾನೂನು ಕ್ರಮಕ್ಕೆ ಅರ್ಹರು ಎಂದು ವಾದ ಮಂಡನೆ
ಮೊಹಮ್ಮದ್ ಜುಬೇರ್ ಕಂಪನಿಯೊಂದರ ನಿರ್ದೇಶಕರಾಗಿಯೂ ಇದ್ದಾರೆ ಎಂದು ಪ್ರಾಸಿಕ್ಯೂಟರ್ ನ್ಯಾಯಾಲಯಕ್ಕೆ ತಿಳಿಸಿದರು. "ನೀವು ಕಂಪನಿಯೊಂದರ ನಿರ್ದೇಶಕರು ಆಗಿದ್ದೀರಿ. ನೀವು ಪತ್ರಕರ್ತರೂ ಆಗಿದ್ದೀರಿ, ಇದ್ಯಾವುದೂ ಅಪರಾಧವಲ್ಲ. ಆದರೆ ನೀವು ಮಾಡಿರುವ ಪೋಸ್ಟ್ ಅಪರಾಧವಾಗಿದ್ದು, ಕಾನೂನು ಕ್ರಮವನ್ನು ಎದುರಿಸಲು ಅರ್ಹರಾಗಿದ್ದೀರಿ," ಎಂದು ಶ್ರೀವಾಸ್ತವ ವಾದಿಸಿದರು. ಇದಲ್ಲದೇ ನೀವು ನಿರ್ದೇಶಕರಾಗಿರುವ ಕಂಪನಿಯವಿರುದ್ಧ ಯಾವುದೇ ನೋಟಿಸ್ ಅನ್ನು ನೀಡಿಲ್ಲ ಎಂಬುದನ್ನು ತಮ್ಮ ವಾದದಲ್ಲಿ ಪ್ರಸ್ತಾಪಿಸಿದರು.
ಮೊಹಮ್ಮದ್ ಜುಬೇರ್ ಬಂಧನವಾಗಿದ್ದು ಯಾವಾಗ?
ಜೂನ್ 27 ರಂದು ತನ್ನ ಟ್ವೀಟ್ಗಳ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಲ್ಲಿ ಜುಬೇರ್ ಅನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ಅದೇ ದಿನ ವಿಚಾರಣಾ ನ್ಯಾಯಾಲಯವು ಆರೋಪಿಯನ್ನು ಒಂದು ದಿನದ ಪೊಲೀಸ್ ಕಸ್ಟಡಿಗೆ ನೀಡಿತ್ತು. ಒಂದು ದಿನದ ಕಸ್ಟಡಿಯಲ್ ವಿಚಾರಣೆಯ ಮುಕ್ತಾಯದ ನಂತರ, ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (CMM) ಜುಬೇರ್ ಕಸ್ಟಡಿಯನ್ನು ಇನ್ನೂ ನಾಲ್ಕು ದಿನಗಳವರೆಗೆ ವಿಸ್ತರಿಸಿದ್ದರು.
ಜುಬೇರ್ ವಿರುದ್ಧ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಪ್ರಕರಣ
ಕಳೆದ ಜೂನ್ನಲ್ಲಿ, ಆರೋಪಿ ಮೊಹಮ್ಮದ್ ಜುಬೇರ್ ವಿರುದ್ಧ ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 153 ಎ ಅಡಿಯಲ್ಲಿ ಧರ್ಮ, ಜನಾಂಗ, ಜನ್ಮ ಸ್ಥಳ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು ಮತ್ತು 295 ಎ ಅಡಿಯಲ್ಲಿ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯದ ಪ್ರಕರಣ ದಾಖಲಿಸಲಾಗಿತ್ತು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಟ್ವಿಟರ್ ಬಳಕೆದಾರರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದರು.