ನ್ಯಾಯಾಂಗ ನಿಂದನೆ ಪ್ರಕರಣ: ವಕೀಲ ಪ್ರಶಾಂತ್ ಭೂಷಣ್ಗೆ 1 ರೂ ದಂಡ!
ನವದೆಹಲಿ, ಆಗಸ್ಟ್ 31: ನ್ಯಾಯಾಂಗವನ್ನು ಟೀಕಿಸಿ ಟ್ವೀಟ್ ಮಾಡಿದ್ದಕ್ಕೆ ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸುತ್ತಿದ್ದ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರಿಗೆ ಸುಪ್ರೀಂಕೋರ್ಟ್ 1 ರೂಪಾಯಿ ದಂಡ ವಿಧಿಸಿದೆ.
ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ಬಿಆರ್ ಗವಾಯಿ ಮತ್ತು ಕೃಷ್ಣ ಮುರಾರಿ ಅವರನ್ನು ಒಳಗೊಂಡ ನ್ಯಾಯಪೀಠ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಪ್ರಶಾಂತ್ ಭೂಷಣ್ ತಪ್ಪಿತಸ್ಥ ಎಂದು ತೀರ್ಪು ನೀಡಿತ್ತು. ಪ್ರಶಾಂತ್ ಭೂಷಣ್ ಅವರಿಗೆ ಕ್ಷಮೆ ಕೋರಲು ಕಾಲಾವಕಾಶ ನೀಡಿದ್ದ ನ್ಯಾಯಪೀಠ, ಆಗಸ್ಟ್ 25ರಂದು ತೀರ್ಪು ಕಾಯ್ದಿರಿಸಿತ್ತು.
ಭೂಷಣ್ ವಿರುದ್ಧ ಪ್ರಕರಣದ ತೀರ್ಪಿನ ಶಿಕ್ಷೆ ಪ್ರಕಟಿಸುವ ಸಂದರ್ಭದಲ್ಲಿ ನ್ಯಾ. ಅರುಣ್ ಮಿಶ್ರಾ, ನ್ಯಾಯಮೂರ್ತಿಗಳು ಮಾಧ್ಯಮಗಳ ಮುಂದೆ ಹೋಗಬಾರದು. ನ್ಯಾಯಾಲಯದ ಹೊರಗಿನ ಅವರ ಹೇಳಿಕೆಗಳು ಮುಖ್ಯವಾಗಬಾರದು. ನ್ಯಾಯಾಲಯದ ನಿರ್ಧಾರವು ಮಾಧ್ಯಮಗಳಲ್ಲಿ ಅಭಿಪ್ರಾಯಗಳನ್ನು ಪ್ರಕಟಿಸುವುದಕ್ಕೆ ನೀಡುವ ಹಕ್ಕು ಎಂದು ಬಳಸಿಕೊಳ್ಳಬಾರದು ಎಂದರು.

ನ್ಯಾಯಾಂಗವನ್ನು ನಿಂದಿಸುವಂತಹ ಹೇಳಿಕೆ ನೀಡಿರುವುದಕ್ಕೆ ಪಶ್ಚಾತ್ತಾಪ ವ್ಯಕ್ತಪಡಿಸಲು ಪ್ರಶಾಂತ್ ಭೂಷಣ್ ಅವರಿಗೆ ಅನೇಕ ಅವಕಾಶಗಳನ್ನು ನೀಡಲಾಗಿತ್ತು. ಮಾಧ್ಯಮಗಳಿಗೆ ಹೋಗುವ ಮೂಲಕ ಪ್ರಶಾಂತ್ ಭೂಷಣ್ ತಮ್ಮ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣದ ಸುತ್ತಲಿನ ಘಟನೆಗಳಿಗೆ ಪ್ರಚಾರ ನೀಡಿದರು ಎಂದು ನ್ಯಾಯಪೀಠ ಹೇಳಿತು.
ನ್ಯಾಯಾಂಗ ನಿಂದನೆಯ ಆರೋಪಕ್ಕಾಗಿ ಪ್ರಶಾಂತ್ ಭೂಷಣ್ ಅವರಿಗೆ ಸಾಂಕೇತಿಕವಾಗಿ 1 ರೂ ದಂಡ ವಿಧಿಸಲಾಗುವುದು ಎಂದು ತಿಳಿಸಿದ ಪೀಠ, ಸೆ. 15ರ ಗಡುವಿನ ಒಳಗೆ ಈ ದಂಡ ಪಾವತಿಸಲು ಭೂಷಣ್ ವಿಫಲರಾದರೆ ಅವರನ್ನು ಮೂರು ತಿಂಗಳು ಜೈಲು ಶಿಕ್ಷೆಗೆ ಗುರಿಪಡಿಸಬಹುದು ಅಥವಾ ಮೂರು ವರ್ಷ ವಕೀಲಿಕೆ ವೃತ್ತಿಯಿಂದ ನಿರ್ಬಂಧಿಸಬಹುದು ಎಂದು ಹೇಳಿತು.












Click it and Unblock the Notifications