ಕ್ಯೂಂಕಿ ಮಂತ್ರಿ ಭಿ ಕಭಿ ಗ್ರಾಜ್ಯುವೇಟ್ ಥಿ : ಸ್ಮೃತಿ ವಿದ್ಯಾರ್ಹತೆ ವಿಡಂಬನೆ
ನವದೆಹಲಿ, ಏಪ್ರಿಲ್ 12 : "ಕ್ಯೂಂಕಿ ಮಂತ್ರಿ ಭಿ ಕಭಿ ಗ್ರಾಜ್ಯುವೇಟ್ ಥಿ (ಯಾಕಂದ್ರೆ ಮಂತ್ರಿ ಕೂಡ ಮೊದಲು ಪದವಿಧರೆ ಆಗಿದ್ದರು)" ಮೆಗಾ ಧಾರಾವಾಹಿ ಸದ್ಯದಲ್ಲಿಯೇ ಬರಲಿದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ 'ಪದವಿ'ಯ ಪ್ರಹಸನವನ್ನು ಕಾಂಗ್ರೆಸ್ ವಕ್ತಾರೆ ಪ್ರಿಯಾಂಕಾ ಚತುರ್ವೇದಿ ಅಪಹಾಸ್ಯ ಮಾಡಿದ್ದಾರೆ.
ಉತ್ತರ ಪ್ರದೇಶದ ಅಮೇಥಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ ಅವರು ನಾಮಪತ್ರ ಸಲ್ಲಿಸಿದ ನಂತರ, ಅವರ ಪದವಿಗೆ ಸಂಬಂಧಿಸಿದಂತೆ ವಿವಾದ ಮತ್ತೆ ಹುಟ್ಟಿಕೊಂಡಿದೆ. ಏಕೆಂದರೆ, ಅದರಲ್ಲಿ ಅವರು ತಾವು ಪದವಿಯನ್ನು ಪೂರ್ತಿಗೊಳಿಸಿಲ್ಲ ಎಂದು ನಮೂದಿಸಿದ್ದಾರೆ.
ಅಮೇಥಿ ಕ್ಷೇತ್ರದ ಅಭ್ಯರ್ಥಿ ಸ್ಮೃತಿ ಇರಾನಿ ಆಸ್ತಿ, ಸಾಲ ವಿವರ
ವಿವಾದ ಏಕೆಂದರೆ, ತಾವು ಈ ಮೊದಲು ದೆಹಲಿ ವಿಶ್ವವಿದ್ಯಾಲಯದಲ್ಲಿ ಕರಸ್ಪಾಂಡನ್ಸ್ ಮೂಲಕ ಪದವಿ ಗಳಿಸಿದ್ದಾಗಿ ಅವರು ಹಿಂದೆ ನಮೂದಿಸಿದ್ದರು. ಈಗ, ಮೂರು ವರ್ಷದ ಡಿಗ್ರಿಯನ್ನು ಪೂರ್ತಿಗೊಳಿಸಿಲ್ಲ ಎಂದು ಅಫಿಡವಿಟ್ ನಲ್ಲಿ ಸ್ಮೃತಿ ಇರಾನಿ ಅವರು ತಿಳಿಸಿರುವುದು ಕಾಂಗ್ರೆಸ್ಸಿಗೆ ಅಪಹಾಸ್ಯ ಮಾಡಲು ಅವಕಾಶ ನೀಡಿದಂತಾಗಿದೆ.
ರಾಹುಲ್ ಗೆ ಪ್ರತಿಷ್ಠೆಯ ಕಣವಾಗಿರುವ 'ಅಮೇಥಿ' ಲೋಕಸಭಾ ಕ್ಷೇತ್ರ
ಈ ಬಗ್ಗೆ ಶುಕ್ರವಾರ ಪತ್ರಿಕಾಗೋಷ್ಠಿ ಕರೆದಿದ್ದ ಕಾಂಗ್ರೆಸ್ ವಕ್ತಾರೆ ಪ್ರಿಯಾಂಕಾ ಚತುರ್ವೇದಿ ಅವರು, 'ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ' ಧಾರಾವಾಹಿಯಿಂದ ಖ್ಯಾತಿ ಗಳಿಸಿದ್ದ ಸ್ಮೃತಿ ಇರಾನಿ ಅವರು ಆ ಹಳೆಯ ಧಾರಾವಾಹಿಯ ಶೀರ್ಷಿಕೆಯನ್ನೇ ಪ್ರಸ್ತಾಪಿಸಿ, 'ಕ್ಯೂಂಕಿ ಮಂತ್ರಿ ಭಿ ಕಭಿ ಗ್ರಾಜ್ಯುವೇಟ್ ಥಿ' ಎಂದು ಸ್ಮೃತಿಯ ಕಾಲೆಳೆದಿದ್ದಾರೆ.
ಒಂದು ಡಿಗ್ರಿ ಹೋಗುತ್ತದೆ, ಮತ್ತೊಂದು ಡಿಗ್ರಿ ಬರುತ್ತದೆ
ಪ್ರಿಯಾಂಕಾ ಚತುರ್ವೇದಿ ಅವರು ಇನ್ನೂ ಮುಂದೆ ಹೋಗಿ, ಆ ಮೆಗಾ ಧಾರಾವಾಹಿಯ ಆರಂಭಿಕ ಸಾಲುಗಳು ಹೀಗಿರಲಿವೆ, 'ಕ್ವಾಲಿಫಿಕೇಶನ್ ನ ರೂಪವೂ ಬದಲಾಗುತ್ತದೆ, ಹೊಸ ಹೊಸ ಸ್ವರೂಪ ಪಡೆದುಕೊಳ್ಳುತ್ತದೆ, ಒಂದು ಡಿಗ್ರಿ ಹೋಗುತ್ತದೆ, ಮತ್ತೊಂದು ಡಿಗ್ರಿ ಬರುತ್ತದೆ, ಹೊಸ ಹೊಸ ಅಫಿಡವಿಟ್ಟುಗಳೂ ಬರುತ್ತಿರುತ್ತವೆ' ಎಂದು ರಾಗವಾಗಿ ಹಾಡಿ ಸ್ಮೃತಿ ಇರಾನಿ ಅವರ ಅಫಿಡವಿಟ್ ಬಗ್ಗೆ ಅಪಹಾಸ್ಯ ಮಾಡಿದ್ದಾರೆ.
ಚುನಾವಣೆ ವೇಳೆಯೇ ಕಾಂಗ್ರೆಸ್ಗೆ ಆಘಾತ: ಪಕ್ಷಕ್ಕೆ ಪ್ರಿಯಾಂಕಾ ಗುಡ್ಬೈ
ಮೂರು ವರ್ಷಗಳ ಪದವಿ ಪೂರ್ತಿಗೊಳಿಸಿಲ್ಲ
ಸ್ಮೃತಿ ಇರಾನಿ ಅವರು ತಮ್ಮ ಅಫಿಡವಿಟ್ ನಲ್ಲಿ, ಪಡೆದಿರುವ ವಿದ್ಯಾರ್ಹತೆಯ ಬಗ್ಗೆ ಪ್ರಸ್ತಾಪಿಸುತ್ತ, ದೆಹಲಿ ಮುಕ್ತ ವಿಶ್ವವಿದ್ಯಾಲಯದಲ್ಲಿ ಬ್ಯಾಚಲರ್ಸ್ ಆಫ್ ಕಾಮರ್ಸ್ - ಭಾಗ 1 ಅನ್ನು 1994ರಲ್ಲಿ ಸೇರಿದ್ದು, ಮೂರು ವರ್ಷಗಳ ಪದವಿಯನ್ನು ಪೂರ್ತಿಗೊಳಿಸಿಲ್ಲ ಎಂದು ಬ್ರಾಕೆಟ್ ನಲ್ಲಿ ಬರೆದಿದ್ದಾರೆ. ಈ ಸಂಗತಿಯೇ ಈಗ ಚರ್ಚೆಗೆ ಗ್ರಾಸವಾಗಿದೆ. ಅಚ್ಚರಿಯ ಸಂಗತಿಯೆಂದರೆ, ಸ್ಮೃತಿ ಅವರು ನರೇಂದ್ರ ಮೋದಿ ಸರಕಾರದಲ್ಲಿ ಹಿಂದೆ ಮಾನವ ಸಂಪನ್ಮೂಲ ಖಾತೆಯ ಸಚಿವೆಯಾಗಿದ್ದರು.
ಕೈ ಸಿಎಂ ಆಪ್ತರ ಮೇಲೆ ಐಟಿ ದಾಳಿ, ರಾಹುಲ್ ಮೌನವೇಕೆ?: ಸ್ಮೃತಿ ಇರಾನಿ
ಹಿಂದಿನ ಚುನಾವಣೆಯಲ್ಲೂ ಇದನ್ನೇ ಹೇಳಿದ್ದರು
2017ರಲ್ಲಿ ಅವರು ರಾಜ್ಯಸಭೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದಾಗ ಅಫಿಡವಿಟ್ ನಲ್ಲಿ ಕೂಡ ಇದನ್ನೇ ನಮೂದಿಸಿದ್ದರು. ಆದರೆ, 2014ರಲ್ಲಿ ಪ್ರಥಮ ಬಾರಿ ಅಮೇಥಿಯಿಂದ ಲೋಕಸಭೆಗೆ ರಾಹುಲ್ ಗಾಂಧಿ ವಿರುದ್ಧ ಸ್ಪರ್ಧಿಸಿದ್ದಾಗ, ದೆಹಲಿ ಮುಕ್ತ ವಿಶ್ವವಿದ್ಯಾಲಯದಲ್ಲಿ ಬ್ಯಾಚಲರ್ಸ್ ಆಫ್ ಕಾಮರ್ಸ್ - ಭಾಗ 1 ಅನ್ನು 1994ರಲ್ಲಿ ಸೇರಿದ್ದು ಎಂದೇ ತಿಳಿಸಿದ್ದರು. ಆದರೆ, ಪೂರ್ತಿಗೊಳಿಸಿಲ್ಲ ಎಂದು ಪ್ರತ್ಯೇಕವಾಗಿ ನಮೂದಿಸಿರಲಿಲ್ಲ. ಆದರೆ, 2004ರಲ್ಲಿ ದೆಹಲಿಯ ಚಾಂದನಿ ಚೌಕ್ ಕ್ಷೇತ್ರದಲ್ಲಿ ಕಪಿಲ್ ಸಿಬಲ್ ವಿರುದ್ಧ ಸ್ಪರ್ಧಿಸಿದ್ದಾಗ, 1996ರಲ್ಲಿ ದೆಹಲಿ ವಿಶ್ವವಿದ್ಯಾಲಯದಿಂದ ಬಿಎ ಪಾಸ್ ಮಾಡಿದ್ದಾಗಿ ನಮೂದಿಸಿದ್ದರು.
ಸ್ಮೃತಿ ವಿದ್ಯಾರ್ಹತೆ ಪ್ರಶ್ನೆ, ಕಾಂಗ್ರೆಸ್ಸಿಗೆ ಬಿಜೆಪಿ ತಿರುಗೇಟು
ಅರ್ಜಿ ತಿರಸ್ಕರಿಸಿದ್ದ ದೆಹಲಿ ಹೈಕೋರ್ಟ್
ಸ್ಮೃತಿ ಇರಾನಿ ಅವರು ನರೇಂದ್ರ ಮೋದಿ ಅವರು ಸಂಪುಟವನ್ನು ಸೇರಿದಾಗಿನಿಂದ ಅವರ ವಿದ್ಯಾರ್ಹತೆಯ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇವೆ. ವಿಭಿನ್ನ ಸಮಯದಲ್ಲಿ ವಿಭಿನ್ನ ವಿದ್ಯಾರ್ಹತೆ ಮಾಡಿದ್ದಾಗಿ ತಿಳಿಸಿದ್ದಾಗಿ ಅವರ ಮೇಲೆ ಆರೋಪವೂ ಇದೆ. ಎರಡು ವರ್ಷಗಳ ಹಿಂದೆ ಅಹ್ಮದ್ ಖಾನ್ ಎಂಬುವವರು ದೆಹಲಿ ಹೈಕೋರ್ಟ್ ನಲ್ಲಿ ಸ್ಮೃತಿ ಇರಾನಿ ವಿರುದ್ಧ ಪದವಿಯ ವಿಷಯವಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ಸ್ಮೃತಿ ಅವರನ್ನು ಅನಗತ್ಯವಾಗಿ ಹಿಂಸಿಸಿರುವ ಉದ್ದೇಶದಿಂದಲೇ ಈ ಅರ್ಜಿ ಸಲ್ಲಿಸಲಾಗಿದೆ ಎಂದು ಕೋರ್ಟ್ ಅರ್ಜಿಯನ್ನು ತಿರಸ್ಕರಿಸಿತ್ತು.
ನಕಲಿ ವಿದ್ಯಾರ್ಹತೆ ಪ್ರಕರಣ: ಸಚಿವೆ ಸ್ಮೃತಿ ಇರಾನಿ ಖುಲಾಸೆ
ರಾಹುಲ್ ಪಡೆದ ಪದವಿ ಯಾವುದು?
ಮಾತಿನಲ್ಲಿ ಚರುತೆಯಾಗಿರುವ ಸ್ಮೃತಿ ಇರಾನಿ ಅವರು ಈ ವಿವಾದದ ಬಗ್ಗೆ ಯಾವುದೇ ತಲೆ ಕೆಡಿಸಿಕೊಳ್ಳದೆ, ಎರಡನೇ ಬಾರಿ ರಾಹುಲ್ ಗಾಂಧಿ ವಿರುದ್ಧ ಅಮೇಥಿಯಲ್ಲಿ ಸೆಡ್ಡು ಹೊಡೆದಿದ್ದಾರೆ. ರಾಹುಲ್ ಗಾಂಧಿ ಅವರು ಅಮೇಥಿ ಕ್ಷೇತ್ರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿರುವ ಅವರು, ಹಲವಾರು ಅಭಿವೃದ್ಧಿ ಕಾಮಗಾರಿ ನಡೆಸಿರುವುದು ನಿಜವೂ ಹೌದು. ಈ ನಡುವೆ, ಅಮೇಥಿಯಿಂದ ಮತ್ತೆ ಸ್ಪರ್ಧಿಸಿರುವ ರಾಹುಲ್ ಗಾಂಧಿ ಅವರು ಕೇಂಬ್ರಿಜ್ ವಿಶ್ವವಿದ್ಯಾಲಯದ ಟ್ರಿನಿಟಿ ಕಾಲೇಜಿನಿಂದ ಎಂಫಿಲ್ ಪದವಿ ಗಳಿಸಿರುವುದಾಗಿ ಅಫಿಡವಿಟ್ ನಲ್ಲಿ ತಿಳಿಸಿದ್ದಾರೆ. ಅಲ್ಲಿ ಭದ್ರತೆಯ ದೃಷ್ಟಿಯಿಂದಾಗಿ ಅವರ ಹೆಸರು ರೌಲ್ ವಿನ್ಸಿ ಎಂದು ನಮೂದಾಗಿದೆ.