ಪಂಚಗವ್ಯದ ಔಷಧೀಯ ಗುಣದ ವೈಜ್ಞಾನಿಕ ಸಾಬೀತಿಗೆ ಕೇಂದ್ರದಿಂದ ಸಮಿತಿ ರಚನೆ
ನವದೆಹಲಿ, ಮೇ 19: ಪಂಚಗವ್ಯದಲ್ಲಿ ಔಷಧ ಗುಣ ಇದೆಯಾ ಹಾಗೂ ಅದರ ಉಪಯುಕ್ತತೆ ಬಗ್ಗೆ ತಿಳಿದು, ವೈಜ್ಞಾನಿಕ ದೃಢೀಕರಣ ಮಾಡಿಕೊಳ್ಳಲು ಮೂರು ವರ್ಷಗಳ ರಾಷ್ಟ್ರೀಯ ಯೋಜನೆಯೊಂದಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಚಾಲನೆ ನೀಡಿದೆ. ಅಂದಹಾಗೆ ಪಂಚಗವ್ಯ ಅಂದರೆ ಗೋಮಯ, ಮೂತ್ರ, ಹಾಲು, ಮೊಸರು ಮತ್ತು ತುಪ್ಪವನ್ನು ಬಳಸಿ ತಯಾರಿಸಲಾಗುತ್ತದೆ.
ಧಾರ್ಮಿಕ ಕಾರ್ಯಕ್ರಮ ಹಾಗೂ ವಿಶೇಷ ಸಂದರ್ಭಗಳಲ್ಲಿ ಪಂಚಗವ್ಯವನ್ನು ಸ್ವೀಕರಿಸಿದರೆ ದೇಹ ಶುದ್ಧಿಯಾಗುತ್ತದೆ ಎಂಬುದು ಹಿಂದೂ ಧರ್ಮದ ನಂಬಿಕೆ. ಆದ್ದರಿಂದ ಈ ಯೋಜನೆಗೆ ಚಾಲನೆ ನೀಡಲಾಗಿದೆ. ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಹರ್ಷವರ್ಧನ್ 19 ಸದಸ್ಯರ ರಾಷ್ಟ್ರೀಯ ಸಮಿತಿಯ ಮುಖ್ಯಸ್ಥರಾಗಿರುತ್ತಾರೆ. ಈ ಸಮಿತಿಯು ಪಂಚಗವ್ಯಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ ನಡೆಯುವ ಸಂಶೋಧನೆಗಳಿಗೆ ಮಾರ್ಗದರ್ಶನ ನೀಡಲಿದೆ.
ಇನ್ನು ಸಮಿತಿಯ ಸದಸ್ಯರಾಗಿ ವೈಜ್ಞಾನಿಕ ಮತ್ತು ಕೈಗಾರಿಕಾ ತರಬೇತಿ ಮಂಡಳಿಯ ಮಾಜಿ ಮಹಾ ನಿರ್ದೇಶಕ ಆರ್.ಎ. ಮಾಷೇಲ್ಕರ್, ನಳಂದ ವಿಶ್ವವಿದ್ಯಾಲಯದ ಕುಲಪತಿ ವಿಜಯ ಭಟ್ಕರ್, ಐಐಟಿ ದೆಹಲಿಯ ನಿರ್ದೇಶಕ ವಿ. ರಾಮಗೋಪಾಲ್ ರಾವ್ ಮತ್ತು ಮೂವರು ಪ್ರಾಧ್ಯಾಪಕರು ಇದ್ದಾರೆ. ಕೇಂದ್ರ ಸರಕಾರದ ವಿಜ್ಞಾನಕ್ಕೆ ಸಂಬಂಧಿಸಿದ ಇಲಾಖೆಗಳ ಹಲವು ಕಾರ್ಯದರ್ಶಿಗಳು ಕೂಡ ಸದಸ್ಯರಾಗಿರುತ್ತಾರೆ.
ಇದಕ್ಕೆ ಜೈವಿಕ ತಂತ್ರಜ್ಞಾನ ಇಲಾಖೆ ಮತ್ತು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ ಈ ಯೋಜನೆಗೆ ಬೆಂಬಲ ನೀಡಲಿದೆ. 'ಪಂಚಗವ್ಯವನ್ನು ನೈಸರ್ಗಿಕ ಉತ್ಪನ್ನ ಎಂದು ನಾವು ಪರಿಗಣಿಸುತ್ತೇವೆ. ಇದರ ಕೆಲವು ಅಂಶಗಳ ಬಗ್ಗೆ ಸಿಎಸ್ ಐಆರ್ ಸಂಶೋಧನೆ ನಡೆಸಿತ್ತು. ಈಗ ಅದರ ವೈದ್ಯಕೀಯ ಅಂಶಗಳ ಬಗ್ಗೆ ಗಮನ ಹರಿಸಲಾಗುವುದು ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ ಅಷುತೋಷ್ ಶರ್ಮಾ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.
ಕಳೆದ ಏಪ್ರಿಲ್ 25ಕ್ಕೆ ಸಮಿತಿ ರಚಿಸಲಾಗಿದೆ.ಸಂಶೋಧನಾ ಯೋಜನೆಗಳ ಆಯ್ಕೆ ಮತ್ತು ವೆಚ್ಚದ ಬಗ್ಗೆ ಶಿಫಾರಸು ಮಾಡುವುದು ಸಮಿತಿಯ ಹೊಣೆ. ಈ ತನಕ ಯಾವುದೇ ಪ್ರಸ್ತಾವ ಬಂದಿಲ್ಲ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕೆ. ವಿಜಯರಾಘವನ್ ತಿಳಿಸಿದ್ದಾರೆ. ಈ ಹಿಂದಿನ ಎನ್ಡಿಎ ಸರಕಾರದ ಅವಧಿಯಲ್ಲೂ ಪಂಚಗವ್ಯದ ಔಷಧೀಯ ಗುಣಗಳ ಬಗ್ಗೆ ಸಂಶೋಧನೆ ನಡೆದಿತ್ತು.