ಗುಂಪು ಹತ್ಯೆ ತಡೆಗೆ ಕೇಂದ್ರದಿಂದ ಉನ್ನತ ಮಟ್ಟದ ಸಮಿತಿ ರಚನೆ
ನವದೆಹಲಿ, ಜುಲೈ 24: ಗುಂಪು ಹತ್ಯೆ ಪ್ರಕರಣಗಳನ್ನು ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರ ಉನ್ನತ ಮಟ್ಟದ ಸಮಿತಿಯೊಂದನ್ನು ಸೋಮವಾರ ರಚಿಸಿದೆ.
ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಗೌಬಾ ನೇತೃತ್ವದ ಸಮಿತಿಯು ನಾಲ್ಕು ವಾರಗಳ ಒಳಗೆ ಸರ್ಕಾರಕ್ಕೆ ಶಿಫಾರಸುಗಳನ್ನು ಸಲ್ಲಿಸಲಿದೆ.
ಅಲ್ವಾರ್ ಹತ್ಯೆ: ವ್ಯಕ್ತಿ ಪ್ರಾಣಕ್ಕಿಂತ ಗೋವುಗಳು ಮುಖ್ಯವಾದವೇ ಪೊಲೀಸರಿಗೆ?
ಈ ಸಂಬಂಧ ಹೇಳಿಕೆ ಹೊರಡಿಸಿರುವ ಕೇಂದ್ರ ಸರ್ಕಾರ, ದೇಶದ ಕೆಲವು ಭಾಗಗಳಲ್ಲಿ ಜನರ ಗುಂಪುಗಳು ನಡೆಸುತ್ತಿರುವ ಹಿಂಸಾಚಾರದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಕಳವಳವಿದೆ.
ಇಂತಹ ಘಟನೆಗಳನ್ನು ಸರ್ಕಾರ ಈಗಾಗಲೇ ಖಂಡಿಸಿದೆ. ಇಂತಹ ಘಟನಾವಳಿಗಳನ್ನು ತಡೆಗಟ್ಟುವ ಉದ್ದೇಶದಿಂದ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಲು ಹಾಗೂ ಸೂಕ್ತ ಕಾನೂನುಗಳನ್ನು ಜಾರಿಗೊಳಿಸಲು ಬದ್ಧವಾಗಿದೆ ಎಂದು ಸಂಸತ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸುತ್ತಿದೆ ಎಂದು ಹೇಳಿಕೆ ತಿಳಿಸಿದೆ.
ಸಂವಿಧಾನದ ಪ್ರಕಾರ ಪೊಲೀಸ್ ಮತ್ತು ಸಾರ್ವಜನಿಕ ಸುವ್ಯವಸ್ಥೆ ಎನ್ನುವುದು ರಾಜ್ಯಗಳ ವಿಚಾರ. ಅಪರಾಧಗಳನ್ನು ನಿಯಂತ್ರಿಸುವುದು, ಕಾನೂನು ಹಾಗೂ ಸುವ್ಯವಸ್ಥೆಗಳನ್ನು ನಿಭಾಯಿಸುವುದು ಹಾಗೂ ನಾಗರಿಕರ ಜೀವ ಮತ್ತು ಆಸ್ತಿಗಳಿಗೆ ಭದ್ರತೆ ಒದಗಿಸುವುದು ರಾಜ್ಯ ಸರ್ಕಾರಗಳ ಹೊಣೆ.
ಮೋದಿ ಜನಪ್ರಿಯತೆ ಹೆಚ್ಚಿದಷ್ಟೂ ಗುಂಪು ಹತ್ಯೆ ಹೆಚ್ಚಳ: ಮೇಘ್ವಾಲ್ ವಿವಾದ
ತಮ್ಮ ಕಾನೂನು ವ್ಯಾಪ್ತಿಯೊಳಗೆ ಅಪರಾಧಗಳನ್ನು ತಡೆಗಟ್ಟಲು ಕಾನೂನುಗಳನ್ನು ರೂಪಿಸಲು ಹಾಗೂ ಜಾರಿ ಮಾಡಲು ಅವರಿಗೆ ಅವಕಾಶವಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ನ್ಯಾಯಾಂಗ ಇಲಾಖೆ, ಕಾನೂನು ವ್ಯವಹಾರಗಳ ಇಲಾಖೆ, ಸಂಸದೀಯ ಇಲಾಖೆ, ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಇಲಾಖೆಗಳ ಕಾರ್ಯದರ್ಶಿಗಳು ಈ ಸಮಿತಿಯ ಸದಸ್ಯರಾಗಿರುತ್ತಾರೆ.
ಗುಂಪು ಹತ್ಯೆ ಮತ್ತು ಹಿಂಸಾಚಾರದಂತಹ ಘಟನೆಗಳನ್ನು ತಡೆಗಟ್ಟಲು ಸೂಕ್ತ ಕಾನೂನನ್ನು ರೂಪಿಸುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದ ವಾರದ ಬಳಿಕ ಕೇಂದ್ರ ಈ ಕ್ರಮ ಕೈಗೊಂಡಿದೆ.