ದೆಹಲಿ ಅಬಕಾರಿ ನೀತಿ ಪ್ರಕರಣ: ಅಮಾನತಾಗಿರುವ 11 ಅಬಕಾರಿ ಅಧಿಕಾರಿಗಳಿಗೆ ಸಿಬಿಐ ಸಮನ್ಸ್
ನವದೆಹಲಿ, ಆಗಸ್ಟ್ 23: ದೆಹಲಿ ಅಬಕಾರಿ ಹಗರಣಕ್ಕೆ ಸಂಬಂಧಪಟ್ಟಂತೆ ಕಳೆದ ಕೆಲವು ದಿನಗಳಿಂದ ನಾಲ್ವರು ಮದ್ಯದ ದೊರೆಗಳು ಮತ್ತು ಮಧ್ಯವರ್ತಿಗಳನ್ನು ಸಿಬಿಐ ಪ್ರಶ್ನೆ ಮಾಡಿದ ನಂತರ, ಲೆಫ್ಟಿನೆಂಟ್ ಗವರ್ನರ್ ವಿ.ಕೆ ಸಕ್ಸೇನಾ ಅವರು ಕಳೆದ ವಾರ ಕ್ರಮಕ್ಕೆ ಶಿಫಾರಸು ಮಾಡಿದ 11 ಅಧಿಕಾರಿಗಳಿಗೆ ಸಿಬಿಐ ಸಮನ್ಸ್ ಜಾರಿ ಮಾಡಿದೆ.
ಎಲ್ಲಾ 11 ಅಧಿಕಾರಿಗಳು ದೆಹಲಿ ಅಬಕಾರಿ ಇಲಾಖೆಯ ಭಾಗವಾಗಿದ್ದಾರೆ. ಅವರಲ್ಲಿ ಮೂವರು ಅಂದಿನ ಅಬಕಾರಿ ಕಮಿಷನರ್ ಆರ್ವ ಗೋಪಿಕೃಷ್ಣ, ಅಬಕಾರಿ ಉಪ ಆಯುಕ್ತರಾಗಿದ್ದ ಆನಂದ್ ತಿವಾರಿ ಮತ್ತು ಸಹಾಯಕ ಕಮಿಷನರ್ ಆಗಿದ್ದ ಪಂಕಜ್ ಭಟ್ನಾಗರ್ ಸಿಬಿಐನ ಪ್ರಥಮ ಮಾಹಿತಿ ವರದಿಯಲ್ಲಿ ಹಗರಣದ ಆರೋಪಿಗಳಾಗಿದ್ದಾರೆ. ಆರ್ವ ಗೋಪಿಕೃಷ್ಣ ಮತ್ತು ಆನಂದ್ ತಿವಾರಿ ಅವರನ್ನು ಕೇಂದ್ರ ಗೃಹ ಸಚಿವಾಲಯ ಸೋಮವಾರ ಅಮಾನತುಗೊಳಿಸಿದೆ.
ದಿಲ್ಲಿ ಡಿಸಿಎಂ ಮನೀಶ್ ಸಿಸೋಡಿಯಾ ಮೇಲೆ ಸಿಬಿಐ ತನಿಖೆ ಯಾಕೆ? ಏನಿದು ಪ್ರಕರಣ?
ಮದ್ಯದ ದೊರೆಗಳು ಆರೋಪಿಗಳಾಗಿರುವ ಸರ್ಕಾರಿ ಅಧಿಕಾರಿಗಳ ಜೊತೆ ನಿಕಟ ಸಂಪರ್ಕದಲ್ಲಿದ್ದರು ಮತ್ತು ನಿಯಮನಿವಾಗ ಹಣ ಪಡೆದಿದ್ದಾರೆ ಎಂದು ಎಫ್ಐಆರ್ ನಲ್ಲಿ ಆರೋಪಿಸಲಾಗಿದೆ.
ಸಹಾಯಕ ಕಮಿಷನರ್ಗಳಾದ ನರೀಂದರ್ ಸಿಂಗ್ ಮತ್ತು ನೀರಜ್ ಗುಪ್ತಾ, ಸೆಕ್ಷನ್ ಆಫೀಸರ್ಗಳಾದ ಕುಲ್ಜೀತ್ ಸಿಂಗ್, ಸುಭಾಷ್ ರಂಜನ್ ಮತ್ತು ಸುಮನ್ ಮತ್ತು ಡೀಲ್ ಹ್ಯಾಂಡ್ಗಳಾದ ಸತ್ಯ ಬ್ರತ್ ಭಾರ್ಗವ್, ಸಚಿನ್ ಸೋಲಂಕಿ ಮತ್ತು ಗೌರವ್ ಮಾನ್ ಅಮಾನತುಗೊಂಡ ಇತರ ಎಂಟು ಮಂದಿ ಅಧಿಕಾರಿಗಳಾಗಿದ್ದಾರೆ.
ಕಾರ್ಯವಿಧಾನಗಳ ಸ್ಪಷ್ಟ ಉಲ್ಲಂಘನೆ
ಟೆಂಡರ್ ಅಂತಿಮಗೊಳಿಸುವುದು ಮತ್ತು ಆಯ್ದ ಮಾರಾಟಗಾರರಿಗೆ ಪ್ರಯೋಜನಗಳನ್ನು ವಿಸ್ತರಿಸುವುದು ಸೇರಿದಂತೆ ಅಬಕಾರಿ ನೀತಿಯ ಅನುಷ್ಠಾನದಲ್ಲಿ ಅಧಿಕಾರಿಗಳು ಗಂಭೀರ ಲೋಪವೆಸಗಿದ್ದಾರೆ ಎಂದು ಲೆಫ್ಟಿನೆಂಟ್ ಗವರ್ನರ್ ವಿ.ಕೆ ಸಕ್ಸೇನಾ ಹೇಳಿದ್ದಾರೆ.
ಕಾರ್ಯವಿಧಾನಗಳ ಸ್ಪಷ್ಟ ಉಲ್ಲಂಘನೆ, ಉದ್ದೇಶಪೂರ್ವಕ ತಪ್ಪಾಗಿ ಅರ್ಥೈಸಿಕೊಳ್ಳುವುದು, ಪರವಾನಗಿದಾರರಿಗೆ ಪ್ರಯೋಜನ ಒದಗಿಸಲು ಮೂಲ ಸರ್ಕಾರಿ ಹಣಕಾಸು ನಿಯಮಗಳನ್ನೇ ಗಾಳಿಗೆ ತೂರಿರುವುದು ಆರಂಭಿಕ ತನಿಖೆಯಲ್ಲಿ ಪತ್ತೆಯಾಗಿದೆ.
ಹೊಸ ಅಬಕಾರಿ ನೀತಿಯ ಜಾರಿಯಲ್ಲಿ ಅಧಿಕಾರಿಗಳು ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ದೆಹಲಿ ಮುಖ್ಯ ಕಾರ್ಯದರ್ಶಿ ನರೇಶ್ ಕುಮಾರ್ ಲೆಫ್ಟಿನೆಂಟ್ ಗವರ್ನರ್ ಅವರಿಗೆ ವರದಿ ಸಲ್ಲಿಸಿದ್ದರು. ಕಿಕ್ಬ್ಯಾಕ್ ಮತ್ತು ಕಮಿಷನ್ಗಳ ಬದಲಾಗಿ ಮದ್ಯ ಮಾರಾಟ ಪರವಾನಗಿದಾರರಿಗೆ ಅನಗತ್ಯ ಪ್ರಯೋಜನಗಳನ್ನು ಒದಗಿಸಲಾಗಿದೆ ಎಂದು ವರದಿಯಲ್ಲಿ ಆರೋಪಿಸಲಾಗಿದೆ.
ಎಲ್-ಜಿ ಅಭಿಪ್ರಾಯ ಪಡೆಯದೆ ಅಬಕಾರಿ ನೀತಿ ಮಾರ್ಪಾಡು
ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಕಾನೂನುಬಾಹಿರ ಚಟುವಟಿಕೆಗಳು ಮತ್ತು ನೀತಿಯಲ್ಲಿ ಬದಲಾವಣೆಗಳನ್ನು ಮಾಡುವುದರ ಬಗ್ಗೆ ತಿಳಿದಿದ್ದರೂ ಈ ಅಧಿಕಾರಿಗಳು ಸಂಬಂಧಪಟ್ಟ ಪ್ರಾಧಿಕಾರಕ್ಕೆ ತಿಳಿಸಲಿಲ್ಲ. ಅಲ್ಲದೆ, ಸಚಿವಾಲಯವು ಲೆಫ್ಟಿನೆಂಟ್ ಗವರ್ನರ್ ಅಭಿಪ್ರಾಯ ಪಡೆಯದೆ ಅಬಕಾರಿ ನೀತಿಯನ್ನು ಮಾರ್ಪಡಿಸಿದೆ.
ಸಿಬಿಐ ಸಲ್ಲಿಸಿರುವ ಎಫ್ಐಆರ್ನಲ್ಲಿ ಇಬ್ಬರು ಹಿರಿಯ ಐಎಎಸ್ ಅಧಿಕಾರಿಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಫ್ಐಆರ್ನಲ್ಲಿ ಸಿಸೋಡಿಯಾ ಸೇರಿ 15 ಮಂದಿ ಹೆಸರು
ದೆಹಲಿ ಸರ್ಕಾರದ ಅಬಕಾರಿ ನೀತಿ 2021-22ರ ಅನುಷ್ಠಾನದಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಸಿಬಿಐ ದಾಖಲಿಸಿರುವ ಎಫ್ಐಆರ್ನಲ್ಲಿ ಹೆಸರಿಸಲಾದ 15 ವ್ಯಕ್ತಿಗಳು ಮತ್ತು ಸಂಸ್ಥೆಗಳಲ್ಲಿ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಕೂಡ ಸೇರಿದ್ದಾರೆ.
ಸಿಸೋಡಿಯಾ ನಿವಾಸ ಮತ್ತು ಅಬಕಾರಿ ಆಯುಕ್ತ ಕೃಷ್ಣ ಮತ್ತು ಇತರ ಇಬ್ಬರು ಅಬಕಾರಿ ಇಲಾಖೆ ಅಧಿಕಾರಿಗಳು ಮತ್ತು ಉದ್ಯಮಿಗಳ ಸೇರಿದಂತೆ ಕೆಲವು ಅಧಿಕಾರಿಗಳ ನಿವಾಸ ಸೇರಿದಂತೆ 31 ಸ್ಥಳಗಳಲ್ಲಿ ಸಿಬಿಐ ಶುಕ್ರವಾರ ಶೋಧಕಾರ್ಯ ನಡೆಸಿತು.
ಆಪ್-ಬಿಜೆಪಿ ಆರೋಪ ಪ್ರತ್ಯಾರೋಪ
ತಮ್ಮನ್ನು ಬೆದರಿಸಲು ಕೇಂದ್ರ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದರೆ. ಬಿಜೆಪಿ ಸೇರಿದರೆ ಎಲ್ಲಾ ಆರೋಪಗಳಿಂದ ಮುಕ್ತರಾಗಿಸುವ ಭರವಸೆಯನ್ನು ನಾಯಕರು ನೀಡಿದ್ದಾರೆ ಎಂದು ಮನೀಶ್ ಸಿಸೋಡಿಯಾ ಬಿಜೆಪಿ ವಿರುದ್ಧ ಆರೋಪ ಮಾಡಿದ್ದರು.
ಎಎಪಿ ಸರ್ಕಾರದ ಅಬಕಾರಿ ನೀತಿಯಲ್ಲಿನ ಅಕ್ರಮಗಳ ವಿರುದ್ಧ ದೆಹಲಿ ಬಿಜೆಪಿ ಸಿವಿಲ್ ಲೈನ್ಸ್ ಪ್ರದೇಶದಲ್ಲಿನ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದ ಬಳಿ ಪ್ರತಿಭಟನೆ ನಡೆಸಿತು. ಹಗರಣದಲ್ಲಿ ಪ್ರಮುಖ ಆರೋಪಿಯಾಗಿರುವ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ತಮ್ಮ ಸಂಪುಟದಿಂದ ಹೊರಹಾಕಬೇಕು ಎಂದು ದೆಹಲಿ ಬಿಜೆಪಿ ಅಧ್ಯಕ್ಷ ಆದೇಶ್ ಗುಪ್ತಾ ಆಗ್ರಹಿಸಿದ್ದಾರೆ.
ನೀತಿಯಲ್ಲಿ ಯಾವುದೇ ಹಗರಣವಿಲ್ಲ ಮತ್ತು ಅದನ್ನು ಪಾರದರ್ಶಕವಾಗಿ ಜಾರಿಗೊಳಿಸಲಾಗಿದೆ ಎಂದು ಮನೀಶ್ ಸಿಸೋಡಿಯಾ ಹೇಳಿದ್ದಾರೆ.
ಕಳೆದ ತಿಂಗಳು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ ಸಕ್ಸೇನಾ ಸಿಬಿಐ ತನಿಖೆಗೆ ಶಿಫಾರಸು ಮಾಡಿದ ನಂತರ ಕೇಜ್ರಿವಾಲ್ ಸರ್ಕಾರ ಅಬಕಾರಿ ನೀತಿಯನ್ನು ಹಿಂಪಡೆದಿತ್ತು. ಕೇಜ್ರಿವಾಲ್ ಸರ್ಕಾರ ಅಬಕಾರಿ ನೀತಿಯನ್ನು ರದ್ದುಗೊಳಿಸುವುದರ ಹಿಂದೆ ಯಾವುದೇ ಕಾರಣವನ್ನು ನೀಡಿಲ್ಲ.