ಮನೀಶ್ ಸಿಸೋಡಿಯಾ ಮನೆ ಮೇಲೆ ಸಿಬಿಐ ದಾಳಿ: ಏನು ಸಿಕ್ಕಿಲ್ಲ ಎಂದ ಡಿಸಿಎಂ
ನವದೆಹಲಿ, ಆಗಸ್ಟ್ 30: ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮನೆ ಮೇಲೆ ನಡೆದ ಸಿಬಿಐ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಲೀನ್ ಚಿಟ್ ಸಿಕ್ಕಿದೆ. ಕೇಂದ್ರೀಯ ತನಿಖಾ ದಳ (ಸಿಬಿಐ) ಅಧಿಕಾರಿಗಳಿಗೆ ತಮ್ಮ ಮನೆಯಲ್ಲಿ ಮತ್ತು ಅವರ ಬ್ಯಾಂಕ್ ಲಾಕರ್ನಲ್ಲಿ ಏನೂ ಸಿಕ್ಕಿಲ್ಲ ಎಂದು ಹೇಳಿದ್ದಾರೆ.
ಘಾಜಿಯಾಬಾದ್ ಬ್ಯಾಂಕ್ನಲ್ಲಿನ ಲಾಕರ್ ಅನ್ನು ಮಂಗಳವಾರ ಕೇಂದ್ರ ಏಜೆನ್ಸಿಯ ಅಧಿಕಾರಿಗಳು ಪರೀಕ್ಷಿಸಿದ ನಂತರ ಮಾಧ್ಯಮಗಳೊಂದಿಗೆ ಸಂವಾದದಲ್ಲಿ ಸಿಸೋಡಿಯಾ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡರು.
Breaking: ಬಿಹಾರದ ಇಬ್ಬರು ಆರ್ಜೆಡಿ ನಾಯಕರ ಮೇಲೆ ಸಿಬಿಐ ದಾಳಿ
"ಲಾಕರ್ನಲ್ಲಿ ನನ್ನ ಮಕ್ಕಳು ಮತ್ತು ಪತ್ನಿಗೆ ಸೇರಿದ ಸುಮಾರು 70 ಸಾವಿರ ರುಪಾಯಿ ಮೌಲ್ಯದ ಚಿನ್ನಾಭರಣಗಳಿದೆ. ಸಿಬಿಐ ಮನೆಗೆ ದಾಳಿ ಮಾಡಿ ಲಾಕರ್ನಲ್ಲಿ ಶೋಧನೆ ನಡೆಸಿದ್ದು, ಯಾವ ಅಕ್ರಮ ವಸ್ತುಗಳು ಪತ್ತೆಯಾಗದಿರುವುದು ಸಂತಸ ತಂದಿದೆ. ಎಲ್ಲಾ ದಾಳಿಗಳಲ್ಲಿ ನನಗೆ ಮತ್ತು ನನ್ನ ಕುಟುಂಬಕ್ಕೆ ಕ್ಲೀನ್ ಚಿಟ್ ಸಿಕ್ಕಿದೆ" ಎಂದು ಹೇಳಿದರು.
"ದಾಳಿಯ ಸಂದರ್ಭದಲ್ಲಿ ಸಿಬಿಐ ಅಧಿಕಾರಿಗಳು ಸಭ್ಯವಾಗಿ ವರ್ತಿಸಿದ್ದಾರೆ. ಏನೂ ಸಿಗುವುದಿಲ್ಲ ಎಂದು ಗೊತ್ತಿದ್ದರೂ ನನ್ನನ್ನು ಕೆಲವು ತಿಂಗಳು ಜೈಲಿನಲ್ಲಿಡುವಂತೆ ಪ್ರಧಾನಿ ಒತ್ತಡಕ್ಕೆ ಮಣಿದಿದ್ದಾರೆ" ಎಂದು ಮನೀಶ್ ಸಿಸೋಡಿಯಾ ಆರೋಪಿಸಿದ್ದಾರೆ. ಸುಮಾರು ಎರಡು ವಾರಗಳ ಹಿಂದೆ ಸಿಸೋಡಿಯಾ ಅವರ ಮನೆಯ ಮೇಲೆ ದಾಳಿ ನಡೆದಾಗ ಅವರು ತಮ್ಮ ಲಾಕರ್ನಲ್ಲಿ ಏನೂ ಸಿಗುವುದಿಲ್ಲ ಎಂದು ಹೇಳಿದ್ದರು.
ಮಂಗಳವಾರ ಸಿಬಿಐ ನಮ್ಮ ಬ್ಯಾಂಕ್ ಲಾಕರ್ ಮೇಲೆ ದಾಳಿ ನಡೆಸಲಿದೆ. ಆಗಸ್ಟ್ 19ರಂದು ನನ್ನ ಮನೆಯಲ್ಲಿ 14 ಗಂಟೆಗಳ ಕಾಲ ನಡೆದ ದಾಳಿಯಲ್ಲಿ ಏನೂ ಪತ್ತೆಯಾಗಿಲ್ಲ, ಲಾಕರ್ನಲ್ಲಿಯೂ ಏನೂ ಪತ್ತೆಯಾಗಿಲ್ಲ. ಸಿಬಿಐಗೆ ಸ್ವಾಗತ, ನನ್ನ ಕುಟುಂಬ ಮತ್ತು ನಾನು ತನಿಖೆಗೆ ಸಂಪೂರ್ಣವಾಗಿ ಸಹಕರಿಸುತ್ತೇವೆ ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದರು.
ಲೆಫ್ಟಿನೆಂಟ್ ಗವರ್ನರ್ ಅನುಮತಿಯಿಲ್ಲದೆ ಮದ್ಯ ನೀತಿ
ದೆಹಲಿ ಸರ್ಕಾರದ ಅಬಕಾರಿ ಖಾತೆಯನ್ನು ಸಹ ನಿರ್ವಹಿಸುತ್ತಿರುವ ಸಿಸೋಡಿಯಾ ಅವರು ಮದ್ಯ ನೀತಿಯ ಅಕ್ರಮ ಪ್ರಕರಣದಲ್ಲಿ ಸಿಬಿಐ ದಾಖಲಿಸಿದ ಎಫ್ಐಆರ್ನಲ್ಲಿ ಹೆಸರಿಸಲಾದ 15 ಆರೋಪಿಗಳಲ್ಲಿ ಸೇರಿದ್ದಾರೆ. ದೆಹಲಿಯ ಆಗಿನ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರ ಅನುಮತಿಯಿಲ್ಲದೆ ಹೊಸ ನೀತಿಯನ್ನು ಪರಿಚಯಿಸಲಾಗಿದೆ ಎಂದು ಸಿಬಿಐ ಪ್ರತಿಪಾದಿಸಿದೆ. ಲಂಚದ ಬದಲಾಗಿ ಅನೇಕ ಅನರ್ಹ ಮಾರಾಟಗಾರರಿಗೆ ದೆಹಲಿ ಸರ್ಕಾರವು ಪರವಾನಗಿಯನ್ನು ನೀಡಿದೆ ಎಂದು ಎಫ್ಐಆರ್ ಹೇಳುತ್ತದೆ. ಕಳೆದ ವರ್ಷ ನವೆಂಬರ್ನಲ್ಲಿ ಪರಿಚಯಿಸಲಾದ ನೀತಿಯನ್ನು ಎಂಟು ತಿಂಗಳ ನಂತರ ಭ್ರಷ್ಟಾಚಾರದ ಆರೋಪಗಳ ನಡುವೆ ಹಿಂತೆಗೆದುಕೊಳ್ಳಲಾಯಿತು.
'ನಾನು ಹೆದರುವುದಿಲ್ಲ' ಸಿಬಿಐ ದಾಳಿಯ ನಂತರ ಮನೀಶ್ ಸಿಸೋಡಿಯಾ ಹೇಳಿಕೆ
ಮದ್ಯ ನೀತಿ ಪಾರದರ್ಶಕತೆಯಿಂದ ಜಾರಿ
ಆಡಳಿತಾರೂಢ ಆಮ್ ಆದ್ಮಿ ಪಕ್ಷ (ಎಎಪಿ) ತನ್ನ ನೀತಿಯಲ್ಲಿನ ಅಕ್ರಮಗಳ ಎಲ್ಲಾ ಆರೋಪಗಳನ್ನು ತಿರಸ್ಕರಿಸಿದ್ದು, ಇದನ್ನು ಸಂಪೂರ್ಣ ಪಾರದರ್ಶಕತೆಯಿಂದ ಜಾರಿಗೊಳಿಸಲಾಗಿದೆ. ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ಅವರ ರಾಜಕೀಯ ಸವಾಲನ್ನು ಎದುರಿಸಲು ಬಿಜೆಪಿ ಈ ವಿಷಯವನ್ನು ಎತ್ತಿದೆ. ಬಿಜೆಪಿಯವರಿಗೆ ಹಗರಣದ ಬಗ್ಗೆ ಕಾಳಜಿ ಇಲ್ಲ. ಅವರ ಚಿಂತೆ ಅರವಿಂದ್ ಕೇಜ್ರಿವಾಲ್ ಆಗಿದ್ದಾರೆ. ಕೇಜ್ರಿವಾಲ್ ಜನಸಾಮಾನ್ಯರಿಂದ ಪ್ರೀತಿಸಲ್ಪಟ್ಟಿದ್ದಾರೆ ಮತ್ತು ರಾಷ್ಟ್ರೀಯ ಆಯ್ಕೆಯಾಗಿ ಹೊರಹೊಮ್ಮಿದ್ದಾರೆ ಎಂದು ಸಿಸೋಡಿಯಾ ಹೇಳಿದರು.
ಎಎಪಿ ಶಾಸಕರು ಪಕ್ಷಕ್ಕೆ ಬದ್ಧ
ಕಳೆದೆರಡು ವಾರಗಳಲ್ಲಿ ದೆಹಲಿಯಲ್ಲಿ ಸರ್ಕಾರವನ್ನು ಉರುಳಿಸುವ ಪ್ರಯತ್ನದ ಭಾಗವಾಗಿ ಎಎಪಿ ಶಾಸಕರಿಗೆ ಬದಲಾಯಿಸಲು ಲಂಚವನ್ನು ನೀಡುತ್ತಿದೆ ಎಂದು ಆರೋಪಿಸಿ ಎಎಪಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿತ್ತು. ಎಲ್ಲಾ ಎಎಪಿ ಶಾಸಕರು ಪಕ್ಷಕ್ಕೆ ಬದ್ಧರಾಗಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಅರವಿಂದ್ ಕೇಜ್ರಿವಾಲ್ ಅವರು ದೆಹಲಿ ವಿಧಾನಸಭೆಯಲ್ಲಿ ಬಹುಮತದ ಪರೀಕ್ಷೆಯನ್ನು ನಡೆಸುವುದಾಗಿ ಹೇಳಿದ್ದಾರೆ.
ರಾಜ್ಯ ಸರ್ಕಾರಗಳನ್ನು ಪತನಗೊಳಿಸಲು ಬಿಜೆಪಿ ಹಣ
ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಮುಖ್ಯಮಂತ್ರಿ ಕೇಜ್ರಿವಾಲ್ ಬಿಜೆಪಿ ತೆರಿಗೆದಾರರ ಹಣವನ್ನು ಶಾಸಕರಿಗೆ ಲಂಚ ನೀಡಲು ಮತ್ತು ವಿರೋಧ ಪಕ್ಷಗಳ ನೇತೃತ್ವದ ಚುನಾಯಿತ ರಾಜ್ಯ ಸರ್ಕಾರಗಳನ್ನು ಪತನಗೊಳಿಸಲು ಹಣವನ್ನು ಬಳಸುತ್ತಿದೆ ಎಂದು ಆರೋಪಿಸಿದ್ದಾರೆ. ಆದರೆ ಎಎಪಿ ತನ್ನ ಸರ್ಕಾರದ ವಿರುದ್ಧದ ಆರೋಪಗಳಿಗೆ ಪ್ರತಿಕ್ರಿಯೆ ನೀಡದೆ ವಿಷಯವನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನಿಸುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಆರೋಪಿಸಿದ್ದಾರೆ.