ಚಿದಂಬರಂಗೆ ಜಾಮೀನು ನೀಡಿದರೆ ತಪ್ಪು ಸಂದೇಶ ರವಾನೆ: ಸಿಬಿಐ
ನವದೆಹಲಿ, ಸೆಪ್ಟೆಂಬರ್ 20: ಐಎನ್ಎಕ್ಸ್ ಮೀಡಿಯಾ ಹಗರಣದಲ್ಲಿ ಸದ್ಯ ಜೈಲಿನಲ್ಲಿರುವ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಅವರು ಸಲ್ಲಿಸಿರುವ ಜಾಮೀನು ಅರ್ಜಿಗೆ ಸಿಬಿಐ ವಿರೋಧ ವ್ಯಕ್ತಪಡಿಸಿದೆ.
ತಿಹಾರ್ ಜೈಲಿನಲ್ಲಿರುವ ಚಿದಂಬರಂ ಅವರು ಜಾಮೀನಿಗಾಗಿ ಕೋರಿ ದೆಹಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ವಿಚಾರಣೆ ಸೆ. 23ರಂದು ವಿಚಾರಣೆಗೆ ಬರಲಿದೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸಿಬಿಐ ಪ್ರತಿಕ್ರಿಯೆ ನೀಡಿದೆ.
'ಪಿ. ಚಿದಂಬರಂ ಅವರು ಹಣಕಾಸು ಸಚಿವರಾಗಿದ್ದ ಸಂದರ್ಭದಲ್ಲಿ ಅಕ್ರಮ ಪ್ರತಿಫಲಕ್ಕೆ ಬೇಡಿಕೆ ಇರಿಸಿದ್ದರು. ಇಂದ್ರಾಣಿ ಮುಖರ್ಜಿ ಮತ್ತು ಪ್ರತಿಮ್ ಮುಖರ್ಜಿ ಅವರು ಆರೋಪಿ ಹಾಗೂ ಅವರ ಮಗ ಕಾರ್ತಿ ಚಿದಂಬರಂ ಅವರಿಗೆ ಭಾರತ ಮತ್ತು ವಿದೇಶದಿಂದ ಅಕ್ರಮ ಹಣವನ್ನು ಪಾವತಿ ಮಾಡಿದ್ದಾರೆ ಎನ್ನುವುದು ಇದುವರೆಗೆ ನಡೆದಿರುವ ವಿಚಾರಣೆಗಳಿಂದ ತಿಳಿದುಬಂದಿದೆ' ಎಂದು ಸಿಬಿಐ ನ್ಯಾಯಾಲಯಕ್ಕೆ ತಿಳಿಸಿದೆ.

'ಚಿದಂಬರಂ ಅವರು ಮಾಡಿರುವ ಹಣದ ದುರುಪಯೋಗದ ಮಟ್ಟ ಮತ್ತು ಸಾರ್ವಜನಿಕ ಕಚೇರಿಯ ಸೌಲಭ್ಯಗಳನ್ನು ದುರ್ಬಳಕೆ ಮಾಡಿಕೊಂಡಿರುವ ರೀತಿ ಅವರು ಯಾವುದೇ ನಿರಾಳತೆ ಪಡೆಯುವ ಹಕ್ಕನ್ನು ಕಸಿದುಕೊಂಡಿವೆ' ಎಂದು ಸಿಬಿಐ ಹೇಳಿದೆ.
ಚಿದಂಬರಂ ಅವರಿಗೆ ಜಾಮೀನು ನೀಡುವುದು ಭ್ರಷ್ಟಾಚಾರ ವಿಚಾರಗಳಿಗೆ ಸಂಬಂಧಿಸಿದಂತೆ ತಪ್ಪು ಸಂದೇಶ ನೀಡುತ್ತದೆ. ಏಕೆಂದರೆ ಅವರದು ಸಾರ್ವಜನಿಕ ನಂಬಿಕೆಗೆ ದ್ರೋಹ ಎಸಗಿದ ಸ್ಪಷ್ಟ ಪ್ರಕರಣವಾಗಿದೆ ಎಂದು ವಾದಿಸಿದೆ.












Click it and Unblock the Notifications