ಕಾವೇರಿ ವಿವಾದ: ಕೇಂದ್ರ ವಿರುದ್ಧ ತ.ನಾಡು ಅರ್ಜಿ 'ಸುಪ್ರೀಂ' ಸ್ವೀಕಾರ
ನವದೆಹಲಿ, ಏಪ್ರಿಲ್ 2: ಕೇಂದ್ರ ಸರಕಾರದ ವಿರುದ್ಧ ತಮಿಳುನಾಡು ಹಾಕಿರುವ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್ ಒಪ್ಪಿಗೆ ಸೂಚಿಸಿದೆ. ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೋಮವಾರ ಈ ಮಾತನ್ನು ಹೇಳಿದ್ದು, ತಮಿಳುನಾಡಿಗೆ ನೀರು ದೊರೆಯುವಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದೆ.
ಸುಪ್ರೀಂ ಕೋರ್ಟ್ ನ ಆದೇಶದ ಅನ್ವಯ ಕೇಂದ್ರ ಸರಕಾರವು ಕಾವೇರಿ ನಿರ್ವಹಣಾ ಮಂಡಳಿಯನ್ನು ರಚಿಸಬೇಕಿತ್ತು. ಆದರೆ ಈ ಸಂಬಂಧ ಕೇಂದ್ರ ಸರಕಾರವು ಸರ್ವೋಚ್ಚ ನ್ಯಾಯಾಲಯದ ಬಳಿ ಸ್ಪಷ್ಟನೆ ಕೋರಿತ್ತು. ನಿರ್ವಹಣಾ ಮಂಡಳಿ ರಚನೆ ಮಾಡುವುದರಿಂದ ನಿಯಮಗಳ ಉಲ್ಲಂಘನೆ ಆಗುತ್ತದೆ. ಏಕೆಂದರೆ ಮೇ ಹನ್ನೆರಡರಂದು ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಘೋಷಣೆ ಆಗಿದೆ ಎಂದು ತಿಳಿಸಿತ್ತು.
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನಮಗೆ ತಮಿಳುನಾಡಿನ ಸಮಸ್ಯೆ ಅರ್ಥ ಆಗುತ್ತದೆ. ನಾವು ಅದನ್ನು ಬಗೆಹರಿಸುತ್ತೇವೆ ಎಂದು ಹೇಳಿದ್ದರು. ಮುಂದಿನ ಸೋಮವಾರ ತಮಿಳುನಾಡಿನ ಅರ್ಜಿಯನ್ನು ಕೋರ್ಟ್ ಕೈಗೆತ್ತಿಕೊಳ್ಳಲಿದೆ.

ಕಾವೇರಿ ನೀರು ಹಂಚಿಕೆ ವಿಚಾರವು ಸೂಕ್ಷ್ಮವಾದದ್ದು ಮತ್ತು ಇದು ಕರ್ನಾಟಕ ಚುನಾವಣೆ ಮೇಲೆ ಪರಿಣಾಮ ಬೀರಲಿದೆ ಎಂದು ಕೇಂದ್ರ ಸರಕಾರವು ಸುಪ್ರೀಂ ಕೋರ್ಟ್ ಗೆ ತಿಳಿಸಿತ್ತು. ಕಳೆದ ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್ ತಮಿಳುನಾಡು ಪಾಲಿನ ಕಾವೇರಿ ನೀರಿನ ಪ್ರಮಾಣ ಇಳಿಸಿತ್ತು. ಕರ್ನಾಟಕಕ್ಕೆ ಹೆಚ್ಚಿನ ಪ್ರಮಾಣದ ನೀರು ದೊರೆಯುತ್ತದೆ.ಇದರಿಂದ ರಾಜಧಾನಿ ಬೆಂಗಳೂರು ಸೇರಿದಂತೆ ಇತರ ನಗರಕ್ಕೆ ಅನುಕೂಲ ಆಗಲಿದೆ ಎಂದು ತಿಳಿಸಿತ್ತು.
ವಿವಿಧ ರಾಜ್ಯಗಳಲ್ಲಿ ಹರಿಯುವ ನದಿಯ ಮೇಲೆ ಯಾವುದೋ ಒಂದು ರಾಜ್ಯ ಹಕ್ಕು ಸ್ಥಾಪಿಸಲು ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿಗಳನ್ನು ಒಳಗೊಂಡಂತೆ ಮೂವರು ನ್ಯಾಯಮೂರ್ತಿಗಳು ತಿಳಿಸಿದ್ದರು. "ಕುಡಿಯುವ ನೀರಿಗೆ ಅತ್ಯಂತ ಹೆಚ್ಚಿನ ಪ್ರಾಮುಖ್ಯತೆ" ಎಂದು ಕೂಡ ತಿಳಿಸಲಾಗಿತ್ತು.
2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ | ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ತಮಿಳುನಾಡಿನ ನೀರಾವರಿ ಪ್ರದೇಶವನ್ನು ಸರಿಯಾಗಿ ಅಂದಾಜು ಮಾಡಿಲ್ಲ ಮತ್ತು ಅಲ್ಲಿನ ಸರಕಾರ ಅಂತರ್ಜಲದ ಲಭ್ಯತೆಯನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. 765 ಕಿ.ಮೀ ಉದ್ದಕ್ಕೆ ಹರಿಯುವ ಕಾವೇರಿ ನದಿಯನ್ನು ದಕ್ಷಿಣ ಭಾರತದ ಗಂಗೆ ಎನ್ನಲಾಗುತ್ತದೆ. ಕರ್ನಾಟಕ ಹಾಗೂ ತಮಿಳುನಾಡಿಗೆ ಇದು ಜೀವನದಿ. ದಕ್ಷಿಣ ಕರ್ನಾಟಕದ ಕೊಡಗಿನಲ್ಲಿ ಕಾವೇರಿ ನದಿ ಹುಟ್ಟಿ, ತಮಿಳುನಾಡು, ಕೇರಳ ಮತ್ತು ಪುದುಚೆರಿಯಲ್ಲಿ ಹರಿಯುತ್ತದೆ.












Click it and Unblock the Notifications