'ರಾಷ್ಟ್ರಪತಿಗಳ ಅಂಗರಕ್ಷಕರನ್ನಾಗಿ ಈ 'ಮೂರು' ಜಾತಿಯವರ ನೇಮಕ ಮಾತ್ರ ಏಕೆ?'
ರಾಷ್ಟ್ರಪತಿಗಳಿಗೆ ಅಂಗರಕ್ಷಕರ ನೇಮಕ ಮಾಡುವಾಗ 'ಮೂರು ಜಾತಿ'ಯವರನ್ನು ಮಾತ್ರ ಆರಿಸಿಕೊಳ್ಳಲಾಗುತ್ತದೆ ಏಕೆ ಎಂದು ಹಾಕಿದ್ದ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಹಾಗೂ ಸೇನಾ ಸಿಬ್ಬಂದಿಯನ್ನು ದೆಹಲಿ ಹೈ ಕೋರ್ಟ್ ಬುಧವಾರ ಪ್ರತಿಕ್ರಿಯೆ ಕೇಳಿದೆ.
ಈ ವಿಚಾರವಾಗಿ ನ್ಯಾಯಮೂರ್ತಿಗಳಾದ ಎಸ್.ಮುರಳೀಧರ್ ಹಾಗೂ ಸಂಜೀವ್ ನರುಲಾ ಅವರನ್ನು ಒಳಗೊಂಡ ಪೀಠವು ರಕ್ಷಣಾ ಸಚಿವಾಲಯ, ಸೇನಾ ಸಿಬ್ಬಂದಿ ಮುಖ್ಯಸ್ಥರು, ರಾಷ್ಟ್ರಪತಿಗಳ ಅಗರಕ್ಷಕರು ಮತ್ತು ನಿರ್ದೇಶಕರು ಹಾಗೂ ಸೇನಾ ನೇಮಕಾತಿ ಕಮ್ಯಾಂಡಂಟ್ ಗೆ ನೋಟಿಸ್ ನೀಡಿದೆ.
ನೂತನ ರಾಷ್ಟ್ರಪತಿ ಸೇರಿದಂತೆ ಈವರೆಗಿನ ರಾಷ್ಟ್ರಾಧ್ಯಕ್ಷರ ಪರಿಚಯ
ಇನ್ನು ನಾಲ್ಕು ವಾರದೊಳಗೆ ಪ್ರತಿಕ್ರಿಯೆ ನೀಡಬೇಕು. ಅದಕ್ಕೆ ಸಂಬಂಧಿಸಿದ ಮರು ಅರ್ಜಿಗಳಿದ್ದಲ್ಲಿ ಮುಂದಿನ ವಿಚಾರಣೆ ದಿನಾಂಕ ಇರುವ ಮೇ 8, 2019ಕ್ಕೆ ಮುಂಚೆ ಸಲ್ಲಿಸಬೇಕು ಎಂದು ಪೀಠವು ತಿಳಿಸಿದೆ. ಹರಿಯಾಣದ ಗೌರವ ಯಾದವ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿಕೊಂಡಿದ್ದರು.
ಕಳೆದ ವರ್ಷದ ಸೆಪ್ಟೆಂಬರ್ ನಲ್ಲಿ ರಾಷ್ಟ್ರಪತಿಗಳ ಅಂಗರಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನಿಸಿದಾಗ ಜಾಟ್, ರಜಪೂತರು ಮತ್ತು ಸಿಖ್ಖರಿಗೆ ಮಾತ್ರ ಎಂದು ತಿಳಿಸಲಾಗಿತ್ತು. ಆದರೆ ಈಗ ಕೋರ್ಟ್ ಗೆ ಅರ್ಜಿ ಹಾಕಿಕೊಂಡಿರುವ ಗೌರವ್ ಅಹಿರ್/ಯಾದವ್ ಸಮುದಾಯದವರು. ಜಾತಿಯ ವಿಚಾರ ಬಿಟ್ಟು ರಾಷ್ಟ್ರಪತಿಗಳ ಅಂಗರಕ್ಷಕ ಹುದ್ದೆಗೆ ಬೇಕಾದ ಎಲ್ಲ ಅರ್ಹತೆ ಇದ್ದು, ಅದಕ್ಕೆ ತನ್ನನ್ನು ನೇಮಿಸಬೇಕು ಎಂದು ಕೇಳಿದ್ದರು.
ಈಗಿನ ನಿಯಮಾವಳಿಗಳು ಸಂವಿಧಾನದ ಪರಿಚ್ಛೇದ 14 ಹಾಗೂ 15(1)ರ ಉಲ್ಲಂಘನೆ ಆಗುತ್ತದೆ. ಅದರ ಪ್ರಕಾರ ಧರ್ಮ, ಜಾತಿ, ಲಿಂಗ, ಬಣ್ಣ, ಜನ್ಮ ಸ್ಥಳ ಇಂಥ ಯಾವ ಕಾರಣದಿಂದಲೂ ತಾರತಮ್ಯ ಮಾಡುವಂತಿಲ್ಲ ಎಂದು ಅರ್ಜಿದಾರರು ತಮ್ಮ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ. ಆರಂಭದಲ್ಲಿ ಸುಪ್ರೀಂ ಕೋರ್ಟ್ ಹಾಗೂ ದೆಹಲಿ ಹೈ ಕೋರ್ಟ್ ಇಂಥ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮಾನ್ಯ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದವು.