ದೆಹಲಿ ಸಾಮೂಹಿಕ ಆತ್ಮಹತ್ಯೆ: ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಫೋಟಕ ಮಾಹಿತಿ
Recommended Video

ನವದೆಹಲಿ, ಜುಲೈ 05: ದೆಹಲಿಯ ಬುರಾರಿಯಲ್ಲಿ 11 ಜನರ ಆತ್ಮಹತ್ಯೆಯ ವಿಚಿತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ಕ್ಯಾಮೆರಾದಲ್ಲಿ ಕೆಲವು ಪ್ರಮುಖ ಮಾಹಿತಿಗಳು ಲಭ್ಯವಾಗಿವೆ.
ಈ ಮನೆಯ ಎದುರಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಮನೆಯ ಹಿರಿಸೊಸೆ ಕವಿತಾ ಎಂಬುವವರು ತಮ್ಮ ಮಗಳು ನೀತು ಎಂಬುವವರೊಂದಿಗೆ ಐದು ಸ್ಟೂಲ್ ಗಳನ್ನು ತೆಗೆದುಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆತ್ಮಹತ್ಯೆಗೆ ಬಳಸಿದ ಸ್ಟೂಲ್ ಗಳೇ ಇವಾಗಿದ್ದು, ಇದು ಆತ್ಮಹತ್ಯೆಯೇ, ಕೊಲೆಯಲ್ಲ ಎಂಬುದಕ್ಕೆ ಪೊಲಿಸರಿಗೆ ಸಾಕಷ್ಟು ಸಾಕ್ಷಿಗಳು ಲಭ್ಯವಾಗುತ್ತಿವೆ.

ಇಲೆಕ್ಟ್ರಿಕಲ್ ವೈಯರ್ ತಂದ ಮಕ್ಕಳು!
ರಾತ್ರಿ ಸುಮಾರು 10.15 ರ ಸುಮಾರಿಗೆ ಧ್ರುವ ಮತ್ತು ಶಿವಮ್ ಎಂಬ ಇಬ್ಬರು ಹುಡುಗರು ಇಲೆಕ್ಟ್ರಿಕಲ್ ವೈಯರ್ ಗಳನ್ನು ಪ್ಲೈವುಡ್ ಶಾಪ್ ನಿಂದ ತೆಗೆದುಕೊಂಡು ಹೋಗಿದ್ದು ಸಹ ಈ ಫೂಟೇಜ್ ನಲ್ಲಿ ದಾಖಲಾಗಿದೆ. 10 ಜನರೂ ನೇಣು ಹಾಕಿಕೊಂಡಿದ್ದು ಇದೇ ಇಲೆಕ್ಟ್ರಿಕಲ್ ವೈಯರ್ ನಿಂದ ಎಂಬುದು ಸಹ ಸಾಬೀತಾಗಿದೆ. ಇವೆಲ್ಲವನ್ನು ನೋಡಿದರೆ ಇದು ಪೂರ್ವನಿರ್ಧರಿತ ಘಟನೆ ಎಂಬುದು ಸಾಬೀತಾಗುತ್ತದೆ.

11 ಜನ, 11 ವರ್ಷ, 11 ಡೈರಿ!
ಮನೆಯಲ್ಲಿ ಹನ್ನೊಂದು ಡೈರಿಗಳು ಸಿಕ್ಕಿದ್ದು, ಇವನ್ನು ಹನ್ನೊಂದು ವರ್ಷಗಳಿಂದ ಬರೆಯಲಾಗುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. 11 ಜನರೂ ಮೃತರಾಗಿರುವುದು ಕಾಕತಾಳೀಯವೋ ಏನೋ! ಒಟ್ಟಿನಲ್ಲಿ ಹನ್ನೊಂದಕ್ಕೂ ಈ ಕುಟುಂಬಕ್ಕೂ ಏನೋ ನಂಟಿದ್ದಂತಿದೆ. ಈ ಪ್ರಕರಣದ ನಂತರ ಮನೆಯಲ್ಲಿ ಸಿಕ್ಕ ಅನುಮಾನ ಹುಟ್ಟಿಸುವ ಪೈಪುಗಳ ಸಂಖ್ಯೆಯೂ 11!'

ಡೈರಿಯಲ್ಲಿ ವಿಚಿತ್ರ ಸಂಕೇತಗಳು!
'ಒಂದು ಕಪ್ಪಿನಲ್ಲಿ ನೀರನ್ನು ಇಡಿ. ಈ ನೀರು ಬಣ್ಣ ಬದಲಾಯಿಸುತ್ತದೆ. ಆಗ ನಾವು ಬಚಾವಾಗುತ್ತೇವೆ', 'ನಾವು ಸಾಯುವುದಕ್ಕೆಂದು ಹೋದಾಗ ಆಕಾಶ ಬಾಯಿ ಬಿಡುತ್ತದೆ, ಭೂಮಿ ನಡುಗುತ್ತದೆ. ಆಗ ನಮ್ಮನ್ನು ಬಚಾವ್ ಮಾಡಲು ತಂದೆ ಬರುತ್ತಾರೆ' ಎಂಬಿತ್ಯಾದಿ ಅರ್ಥವಾಗದ ಸಂಕೇತ ವಾಕ್ಯಗಳು ಈ ಡೈರಿಯಲ್ಲಿವೆ. ಅನುಮಾನವೆಂದರೆ ಈ ಮನೆ ಜನರು Shared psychosis ಎಂಬ ಮನೋರೋಗದಿಂದ ಬಳಲುತ್ತಿದ್ದಿರಬಹುದು! ವ್ಯಕ್ತಿಯೊಬ್ಬ ತನ್ನ ಭ್ರಮೆಗಳನ್ನು, ತನ್ನ ನಂಬಿಕೆಗಳನ್ನು ಇತರರಿಗೆ ವರ್ಗಾಯಿಸುವುದೇ Shared psychosis. ಈ ಪ್ರಕರಣದಲ್ಲಿ ಮನೆಯ ಯಜಮಾನ ಮತ್ತು ಈ ಸಾಮೂಹಿಕ ಆತ್ಮಹತ್ಯೆ ಪ್ರಕರಣದ ರೂವಾರಿ ಎನ್ನಲಾಗುತ್ತಿರುವ ಲಲಿತ್ ಭಾಟಿಯಾ ತಮ್ಮ ನಂಬಿಕೆಗಳನ್ನು ಕುಟುಂಬದ ಇತರ ಸದಸ್ಯರಿಗೆ ವರ್ಗಾಯಿಸಿದ್ದಾರೆ ಎನ್ನಲಾಗುತ್ತಿದೆ!

ಸಾಯುವ ಇಚ್ಛೆ ಇದ್ದಂತಿಲ್ಲ!
ಡೈರಿಯಲ್ಲಿನ ಬರಹಗಳನ್ನು ನೋಡಿದರೆ ಈ ಮನೆ ಜನರಿಗೆ ಸಾಯುವ ಯಾವುದೇ ಇಚ್ಛೆ ಇರಲಿಲ್ಲ. ಬದಲಾಗಿ ತಾವು ಸಾಯುವುದಕ್ಕೆ ಪ್ರಯತ್ನಿಸಿದಾಗ, ಹತ್ತು ವರ್ಷದ ಹಿಂದೆ ಮೃತರಾದ ತಮ್ಮ ತಂದೆ ಬಂದು ತಮ್ಮನ್ನೆಲ್ಲ ಕಾಪಾಡುತ್ತಾರೆ ಎಂಬ ನಂಬಿಕೆ ಮನೆ ಯಜಮಾನ ಲಲಿತ್ ಭಾಟಿಯಾದ್ದಾಗಿತ್ತು. ಮನೆ ಜನರೆಲ್ಲರೂ ಇದನ್ನೇ ನಂಬಿದ್ದರು. ಆದ್ದರಿಂದ ತಮ್ಮ ಭ್ರಮೆಯೇ ನಿಜವಾಗುತ್ತದೆ ಎಂದುಕೊಂಡು ಪ್ರಯೋಗ ಮಾಡಲು ಹೊರಟು ತಮ್ಮ ಜೀವವನ್ನೇ ಕಳೆದುಕೊಂಡರು ಎಂದು ಮೇಲ್ನೋಟಕ್ಕೆ ಅನ್ನಿಸುತ್ತಿದೆ.

ಬುರಾರಿ ಸಾಮೂಹಿಕ ಆತ್ಮಹತ್ಯೆ, ಏನಿದು?
ಜೂನ್ 30 - ಜುಲೈ 1ರ ನಡುವೆ ದೆಹಲಿಯ ಬುರಾರಿ ಎಂಬಲ್ಲಿ ಒಂದು ಮನೆಯಲ್ಲಿ ಒಂದೇ ಕುಟುಂಬದ 11 ಜನರ ಶವ ಪತ್ತೆಯಾಗಿತ್ತು. ಇವುಗಳಲ್ಲಿ 10 ಶವಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ, 1 ಶವ ಮಾತ್ರ ನೆಲದ ಮೇಲೆ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಕುಟುಂಬದ ಹಿರಿಯ ಸದಸ್ಯೆ ನಾರಾಯಣ ದೇವಿ (77), ಆಕೆಯ ಮಗಳು ಪ್ರತಿಭಾ (57), ಮಗ ಭವನೇಶ್ (50), ಲಲಿತ್ ಭಾಟಿಯಾ (45), ಭವನೇಶ್ ಪತ್ನಿ ಸವಿತಾ (48) ಮತ್ತು ಅವರ ಮೂರು ಮಕ್ಕಳು ಮೀನು (23), ನೀತು (25), ಧ್ರುವ್ (15). ಲಲಿತ್ ಭಾಟಿಯಾ ಹೆಂಡತಿ ಟೀನಾ (42), ಅವರ ಮಗ ಶಿವಂ (15), ಪ್ರತಿಭಾ ಮಗಳು ಪ್ರಿಯಾಂಕಾ (33) ಇವರೇ ಮೃತ ದುರ್ದೈವಿಗಳು.












Click it and Unblock the Notifications