BSNLನಲ್ಲಿ ದೇಶದ್ರೋಹಿಗಳೇ ತುಂಬಿದ್ದಾರೆ: ಅನಂತ ಕುಮಾರ್ ಹೆಗಡೆ ಹೇಳಿಕೆಗೆ ಅಭಿಮನ್ಯು ತಿರುಗೇಟು
ನವದೆಹಲಿ, ಆಗಸ್ಟ್ 12: ಸಂಸದ ಅನಂತಕುಮಾರ್ ಹೆಗೆಡೆಯವರು ಆಕ್ರೋಶ ಭರಿತ ಹಾಗೂ ಬೇಜವಾಬ್ದಾರಿತನದ ಹೇಳಿಕೆಗಳನ್ನು ನೀಡುವುದನ್ನು ಮುಂದಿನ ದಿನಗಳಲ್ಲಾದರೂ ನಿಲ್ಲಿಸಬೇಕು ಎಂದು ಭಾರತೀಯ ಸಂಚಾರ ನಿಗಮ ನಿಯಮಿತದ (ಬಿಎಸ್ಎನ್ಎಲ್) ಎಲ್ಲಾ ಒಕ್ಕೂಟ ಮತ್ತು ಸಂಘಟನೆಯ (ಎಯುಎಬಿ) ಸಂಚಾಲಕ ಪಿ.ಅಭಿಮನ್ಯು ಖಂಡಿಸಿದ್ದಾರೆ.
ಬಿಎಸ್ಎನ್ಎಲ್ ಅನ್ನು ದೇಶದ್ರೋಹಿ ಎಂದು ಕರೆದಿರುವ ಸಂಸದ ಹೆಗಡೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, ಬಿಜೆಪಿಯ ಸಂಸದ ಅನಂತಕುಮಾರ್ ಹೆಗಡೆಯವರು ಬಿಎಸ್ಎನ್ಎಲ್ ನ ಎಲ್ಲ ನೌಕರರನ್ನು ದೇಶದ್ರೋಹಿ ಎಂದು ಕರೆದಿರುವುದು ಆಘಾತಕಾರಿಯಾಗಿದೆ. ಕುಮಟಾದಲ್ಲಿ ಆ.10ರಂದು ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಬಿಎಸ್ಎನ್ಎಲ್ ಹಾಗೂ ಸಂಸ್ಥೆಯ ನೌಕರರನ್ನು ದೇಶದ್ರೋಹಿ ಎಂದು ಕರೆದಿರುವುದಲ್ಲದೇ, ಸರ್ಕಾರ ತಂತ್ರಜ್ಞಾನ ಹಾಗೂ ಅನುದಾನ ನೀಡಿದರೂ ಬಿಎಸ್ಎನ್ಎಲ್ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿಲ್ಲ ಎಂದಿದ್ದಾರೆ. ಇದು ಸರಿಯಲ್ಲ ಎಂದು ಖಂಡಿಸಿದ್ದಾರೆ.
ತುರ್ತು ಪರಿಸ್ಥಿತಿಗಳಲ್ಲಿ ಬಿಎಸ್ ಎನ್ ಎಲ್ ಸೇವೆ ನೀಡಿದೆ
ಹೆಗಡೆಯವರು ದೇಶಕ್ಕೇ ಬಿಎಸ್ಎನ್ಎಲ್ ಒಂದು ಕಪ್ಪು ಚುಕ್ಕೆ ಎಂದಿದ್ದಾರೆ. ಅಲ್ಲದೇ, ಬಿಎಸ್ಎನ್ಎಲ್ ಅನ್ನು ಮುಗಿಸುತ್ತೇವೆ, 88 ಸಾವಿರಕ್ಕೂ ಹೆಚ್ಚು ಸಿಬ್ಬಂದಿಯನ್ನು ಮನೆಗೆ ಕಳುಹಿಸುತ್ತೇವೆ ಎಂದು ಪ್ರತಿಜ್ಞೆ ಮಾಡಿದ್ದಾರೆ. ಬಿಎಸ್ಎನ್ಎಲ್ ಅನ್ನು ಖಾಸಗೀಕರಣಗೊಳಿಸುತ್ತೇವೆ ಎಂದಿದ್ದಾರೆ. ಚಂಡಮಾರುತ, ಪ್ರವಾಹ ಸೇರಿದಂತೆ ನೈಸರ್ಗಿಕ ವಿಕೋಪ ಹಾಗೂ ದೇಶದ ವಿಪತ್ತಿನ ಸಂದರ್ಭದಲ್ಲಿ ಖಾಸಗಿ ನೆಟ್ವರ್ಕ್ ಸಂಸ್ಥೆಗಳು ಸೇವೆಯನ್ನು ಸ್ಥಗಿತಗೊಳಿಸಿದರೆ, ಬಿಎಸ್ಎನ್ಎಲ್ ಪರಿಹಾರ ಹಾಗೂ ರಕ್ಷಣಾ ಸೇವೆ ನೀಡಿದೆ. ಬಿಎಸ್ಎನ್ಎಲ್ ವಿರೋಧಿ ಹಾಗೂ ಖಾಸಗಿಯವರ ಪರವಾದ ಕೇಂದ್ರ ಸರ್ಕಾರದ ನೀತಿಗಳು ಬಿಎಸ್ಎನ್ಎಲ್ ಅನ್ನು ದುರ್ಬಲಗೊಳಿಸಿದೆ ಹಾಗೂ ನಷ್ಟದಲ್ಲಿ ನೂಕಿದೆ ಎನ್ನುವುದು ನಿರಾಕರಿಸಲಾಗದ ಸತ್ಯ ಎಂದಿದ್ದಾರೆ.
ಬಿಎಸ್ಎನ್ಎಲ್ನಲ್ಲಿ ದೇಶದ್ರೋಹಿಗಳೇ ತುಂಬಿದ್ದಾರೆ: ಅನಂತ್ ಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆ
"ಬಿಎಸ್ ಎನ್ ಎಲ್ ನಿಂದ ಅನೇಕ ಆಂದೋಲನ ನಡೆದಿವೆ"
ದೇಶಭಕ್ತ ಬಿಎಸ್ಎನ್ಎಲ್ ನೌಕರರು ಸೇವೆಗಳ ಗುಣಮಟ್ಟವನ್ನು ಸುಧಾರಿಸಲು ಹಾಗೂ ಗ್ರಾಹಕರಿಗೆ ತೃಪ್ತಿಕರ ಸೇವೆ ನೀಡಲು ಅನೇಕ ಆಂದೋಲನಗಳನ್ನು ನಡೆಸಿದ್ದಾರೆ. ಬಿಎಸ್ ಎನ್ಎಲ್ನ ದಕ್ಷತೆಯನ್ನು ಸುಧಾರಿಸಲು ಮತ್ತ ಆರ್ಥಿಕ ಸ್ಥಿತಿಯನ್ನು ಸರಿದೂಗಿಸಲು 'ಗ್ರಾಹಕ ಸಂತೋಷದ ವರ್ಷ', 'ನಗುವಿನೊಂದಿಗೆ ಸೇವೆ', 'ನಿಮ್ಮ ಮನೆ ಬಾಗಿಲಿನಲ್ಲಿ ಬಿಎಸ್ ಎನ್ಎಲ್' ಎಂಬಿತ್ಯಾದಿ ಹಲವು ಆಂದೋಲನಗಳನ್ನು ಸಂಘಟನೆ ನಡೆಸಿದೆ. ಅದಾಗಿಯೂ ಅನಂತಕುಮಾರ್ ಹೆಗಡೆಯವರು ನೌಕರರನ್ನು ದೇಶದ್ರೋಹಿಗಳು ಎಂದಿರುವುದು ಬಿಎಸ್ಎನ್ಎಲ್ ಹಾಗೂ ನೌಕರರ ಬಗೆಗಿನ ಅವರ ಅಜ್ಞಾನವನ್ನು ಬಹಿರಂಗಪಡಿಸುತ್ತದೆ ಎಂದಿದ್ದಾರೆ.
ಎಲ್ಲಾ ಭರವಸೆಗಳು ಕಾಗದದಲ್ಲೇ ಉಳಿದಿವೆ
2019 ರ ಅಕ್ಟೋಬರ್ 23ರಂದು ಕೇಂದ್ರ ಸರ್ಕಾರ ಬಿಎಸ್ ಎನ್ಎಲ್ ಹಾಗೂ ಎಂಟಿಎನ್ಎಲ್ ಗಾಗಿ ಪುನರುಜ್ಜೀವನ ಪ್ಯಾಕೇಜ್ ಘೋಷಿಸಿದ್ದು ನಿಜ. ವಿಆರ್ ಎಸ್ ಅಡಿಯಲ್ಲಿ 79,000 ಉದ್ಯೋಗಿಗಳನ್ನು ಹಿಂತೆಗೆದುಕೊಳ್ಳುವುದನ್ನು ಹೊರತುಪಡಿಸಿ, ಬಿಎಸ್ಎನ್ಎಲ್ ಪುನರುಜ್ಜೀವನಕ್ಕಾಗಿ ನೀಡಲಾದ ಇತರ ಎಲ್ಲ ಭರವಸೆಗಳು ಇನ್ನೂ ಕಾಗದದಲ್ಲಿ ಉಳಿದಿವೆ. ಹೆಗಡೆ, ಸರ್ಕಾರ ಬಿಎಸ್ಎನ್ಎಲ್ ಗೆ ಅನುದಾನ ಮತ್ತು ತಂತ್ರಜ್ಞಾನ ನೀಡಿದೆ ಎಂದು ಹೇಳಿದ್ದಾರೆ. ಇದು ಸತ್ಯ. ಸರ್ಕಾರವು ಬಿಎಸ್ಎನ್ಎಲ್ ಗೆ 4ಜಿ ಸ್ಪೆಕ್ಟ್ರಮ್ ಅನ್ನು ಕಾಗದದಲ್ಲಿ ನೀಡಿದೆ. ಅದರ ಆಧಾರದ ಮೇಲೆ ಬಿಎಸ್ ಎನ್ಎಲ್ 4ಜಿ ಸೇವೆಯನ್ನು ರೂಪಿಸಲು ಉಪಕರಣಗಳ ಪೂರೈಕೆಗೆ 9 ಸಾವಿರ ಕೋಟಿಯ ಟೆಂಡರ್ ಅನ್ನು ಮಾರ್ಚ್ ನಲ್ಲಿ ಆಹ್ವಾನಿಸಿತ್ತು. ಆದರೆ, ಕೆಲವು ಸಮಯದ ನಂತರ ಟಿಇಪಿಸಿ ಎಂಬ ಅಸಂಬದ್ಧ ಸಂಸ್ಥೆ ಎತ್ತಿದ ದೂರಿನ ಮೇರೆಗೆ ಈ ಟೆಂಡರ್ ಅನ್ನು ರದ್ದುಗೊಳಿಸುವಂತೆ ಸರ್ಕಾರವು ಬಿಎಸ್ಎನ್ಎಲ್ ಗೆ ನಿರ್ದೇಶನ ನೀಡಿತು.
"ರಾಮ ಮಂದಿರ ಸಾಕಾರಗೊಳ್ಳುತ್ತಿದೆ, ಮುಂದೆ ಆಗಬೇಕಿರುವುದು ರಾಮ ರಾಜ್ಯ''
"ಹೆಗಡೆಯವರ ಹೇಳಿಕೆ ದಾರಿ ತಪ್ಪಿಸುತ್ತಿದೆ"
ಸರ್ಕಾರದ ನಿರ್ಧಾರದ ಪ್ರಕಾರ ಈ ಟೆಂಡರ್ ರದ್ದುಗೊಳಿಸಿ ಬಿಎಸ್ ಎನ್ಎಲ್ನ 4ಜಿ ಸೇವೆಯಿಂದ ವಂಚಿತಗೊಳಿಸಲಾಗಿದೆ. ಅಲ್ಲದೇ, ಇದನ್ನು ಹೊರತುಪಡಿಸಿ ವಿಆರ್ ಎಸ್ ಅಡಿಯಲ್ಲಿ 79,000 ಉದ್ಯೋಗಿಗಳನ್ನು ಹಿಂಪಡೆಯುವುದಕ್ಕೆ ಬಿಎಸ್ಎನ್ಎಲ್ ಒಂದು ನಯಾ ಪೈಸಾವನ್ನು ತೆರಿಗೆ ಪಾವತಿದಾರರ ಹಣದಿಂದ ತೆಗೆದುಕೊಂಡಿಲ್ಲ. ಈ ರೀತಿಯ ಸಂದರ್ಭಗಳಿದ್ದರೂ ಬಿಎಸ್ಎನ್ಎಲ್ ಗೆ ಅನುದಾನ ಮತ್ತು ತಂತ್ರಜ್ಞಾನವನ್ನು ಸರ್ಕಾರ ನೀಡಿದೆ ಎಂದು ಸಂಸದ ಹೆಗಡೆ ಹೇಳಿಕೆ ನೀಡಿರುವುದರಿಂದ ನೌಕರರು ಕೆಲಸದಿಂದ ವಿಮುಖರಾಗುವಂತಾಗಿದೆ ಹಾಗೂ ಈ ಹೇಳಿಕೆ ದಾರಿ ತಪ್ಪಿಸುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.