ಬ್ರೇಕಿಂಗ್: ಐಎಂಎ ಹಗರಣ ಆರೋಪಿ ಮನ್ಸೂರ್ ಖಾನ್ ಬಂಧನ
ನವದೆಹಲಿ, ಜುಲೈ 19: ಐಎಂಎ ಸಮೂಹ ಸಂಸ್ಥಾಪಕ, ಐಎಂಎ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್ ನನ್ನು ಶುಕ್ರವಾರ ನಸುಕಿನ ವೇಳೆ ಎಸ್ಐಟಿ ಹಾಗೂ ಜಾರಿ ನಿರ್ದೇಶನಾಲಯದ ತಂಡ ಬಂಧಿಸಿದೆ.
ಸಾವಿರಾರು ಮಂದಿ ಜನರಿಗೆ ಕೋಟ್ಯಂತರ ರೂಪಾಯಿ ಮೋಸ ಮಾಡಿ ಪರಾರಿ ಆಗಿದ್ದ ಮನ್ಸೂರ್ ಖಾನ್ ಇಂದು ಬೆಳಿಗ್ಗೆ ನಸುಕಿನ ವೇಳೆ ದುಬೈನಿಂದ ನವದೆಹಲಿಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ವೇಳೆ, ಎಸ್ಐಟಿ ಮತ್ತು ಇಡಿ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾನೆ.
ಐಎಂಎ ವಂಚನೆ ಹಗರಣ: ಮತ್ತೊಬ್ಬ ಆರೋಪಿ ಉಮರ್ ಷರೀಫ್ ಬಂಧನ
ಮನ್ಸೂರ್ ಖಾನ್ ದುಬೈನಲ್ಲಿ ಇದ್ದುದರ ಬಗ್ಗೆ ಖಚಿತ ಮಾಹಿತಿ ಎಸ್ಐಟಿಗೆ ಇತ್ತು. ಆತನಿಗಾಗಿ ಬ್ಲೂ ಕಾರ್ನರ್ ನೊಟೀಸ್ ಜಾರಿ ಮಾಡಲಾಗಿತ್ತು. ದುಬೈನಿಂದ ದೆಹಲಿಗೆ ಮನ್ಸೂರ್ ಹೊರಟಿರುವುದರ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡಿದ್ದ ಎಸ್ಐಟಿಯು ವಿಮಾನ ನಿಲ್ದಾಣದಲ್ಲಿ ಕಾದು ಕೂತು ಆತನನ್ನು ಬಂಧಿಸಿದ್ದಾರೆ.
'ಶಾಸಕ ರೋಷನ್ ಬೇಗ್ ರಿಂದ 400 ಕೋಟಿ ರು ವಸೂಲಿ ಮಾಡಿ'
ಐಎಂಎ ಸಂಸ್ಥೆಯು ಸಾವಿರಾರು ಜನರಿಗೆ 4000 ಸಾವಿರ ಕೋಟಿಗೂ ಅಧಿಕ ಹಣ ವಂಚನೆ ಮಾಡಿದೆ ಎನ್ನಲಾಗಿದ್ದು, ಮನ್ಸೂರ್ ಖಾನ್ ಮೇಲೆ 60000 ಕ್ಕೂ ಹೆಚ್ಚು ಪ್ರಕರಣಗಳು ಕರ್ನಾಟಕ, ಹೊರ ರಾಜ್ಯ ಸೇರಿದಂತೆ ಹೊರ ದೇಶಗಳಿಂದಲೂ ದಾಖಲಾಗಿದ್ದವು.
ಜೂನ್ 8 ರಂದು ಪರಾರಿಯಾಗಿದ್ದ ಮನ್ಸೂರ್ ಖಾನ್
ಐಎಂಎ ಹಗರಣ ಹೊರಬೀಳುತ್ತಿದ್ದಂತೆ, ಜೂನ್ 8 ರಂದು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ಕುಟುಂಬ ಸದಸ್ಯರ ಸಮೇತ ಮನ್ಸೂರ್ ಖಾನ್ ಪರಾರಿ ಆಗಿದ್ದ. ಅಲ್ಲಿಂದಲೇ ವಿಡಿಯೋಗಳನ್ನು ಬಿಡುಗಡೆ ಮಾಡಿ ಕೆಲವು ಗಣ್ಯರಿಗೆ ಕೋಟ್ಯಂತ ರೂಪಾಯಿ ಲಂಚ ನೀಡಿದ್ದಾಗಿ ಹೇಳಿದ್ದ, ಇದರಲ್ಲಿ ಶಾಸಕ ರೋಷನ್ ಬೇಗ್ ಸಹ ಒಬ್ಬರು.
ಗುರುವಾರವೇ ದೇಶಕ್ಕೆ ಬರುತ್ತೇನೆ ಎಂದಿದ್ದ ಮನ್ಸೂರ್
ಎರಡು ದಿನಗಳ ಹಿಂದೆ ವಿಡಿಯೋ ಬಿಡುಗಡೆ ಮಾಡಿದ್ದ ಮನ್ಸೂರ್ ಖಾನ್, ಮುಂದಿನ 24 ಗಂಟೆ ಒಳಗೆ ಭಾರತಕ್ಕೆ ಹೇಳಿದ್ದ ಆದರೆ, ನಿನ್ನೆ (ಗುರುವಾರ) ಬಾರದೇ ಹೋದ ಮನ್ಸೂರ್ ಶುಕ್ರವಾರ ದೇಶಕ್ಕೆ ಆಗಮಿಸಿದ್ದು, ಎಸ್ಐಟಿ ಹಾಗೂ ಇಡಿ ಕೈಗೆ ಸಿಕ್ಕಿಬಿದ್ದಿದ್ದಾನೆ.
ಮನ್ಸೂರ್ ಆಸ್ತಿಗಳನ್ನು ಜಪ್ತಿ ಮಾಡಿರುವ ಎಸ್ಐಟಿ
ರಾಜ್ಯ ಸರ್ಕಾರವು ಐಎಂಎ ಪ್ರಕರಣವನ್ನು ಎಸ್ಐಟಿ ವಶಕ್ಕೆ ಒಪ್ಪಿಸಿದ್ದು, ಎಸ್ಐಟಿಯು ಈಗಾಗಲೇ ಮನ್ಸೂರ್ ಖಾನ್ಗೆ ಸಂಬಂಧಿಸಿದ ಆಸ್ತಿಗಳನ್ನು ಪತ್ತೆಹಾಕಿ ಬಹುಪಾಲನ್ನು ವಶಕ್ಕೆ ಪಡೆದುಕೊಂಡಿದೆ. ಇಡಿ ಸಹ ಈ ಪ್ರಕರಣದ ತನಿಖೆ ನಡೆಸುತ್ತಿದ್ದದು, ಈ ಮೊದಲೇ ಮನ್ಸೂರ್ ಖಾನ್ಗೆ ನೊಟೀಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಕೋರಿತ್ತು.
ಇಡಿ ವಿಚಾರಣೆ ನಂತರ ಬೆಂಗಳೂರಿಗೆ ಮನ್ಸೂರ್
ಪ್ರಸ್ತುತ ಮನ್ಸೂರ್ ಖಾನ್ ಇಡಿ ಅಧಿಕಾರಿಗಳ ಸುಪರ್ಧಿಯಲ್ಲಿದ್ದು, ಇಡಿ ವಿಚಾರಣೆ ಮುಕ್ತಾಯವಾದ ಕೂಡಲೇ ಮನ್ಸೂರ್ ಖಾನ್ನನ್ನು ಬೆಂಗಳೂರಿಗೆ ಕರೆತರುವುದಾಗಿ ಎಸ್ಐಟಿ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನಷ್ಟು ಖ್ಯಾತನಾಮರ ಹೆಸರು ಬಹಿರಂಗ ಸಾಧ್ಯತೆ
ವಿಡಿಯೋದಲ್ಲಿ ಈಗಾಗಲೇ ಹಲವು ಖ್ಯಾತನಾಮರ ಹೆಸರುಗಳನ್ನು ಬಿಚ್ಚಿಟ್ಟಿದ್ದ ಮನ್ಸೂರ್ ಖಾನ್ ಇದೀಗ ಭಾರತಕ್ಕೆ ಬಂದಿದ್ದು, ವಿಚಾರಣೆ ವೇಳೆ ಇನ್ನಷ್ಟು ಹೆಸರುಗಳು ಹೊರಬೀಳಲಿವೆ ಎಂಬ ಕುತೂಹಲವಿದೆ.