ಕಾಳಧನ ವಾಪಸ್ ತರಲು ಕನಿಷ್ಠ 2 ವರ್ಷ ಬೇಕು!
ನವದೆಹಲಿ, ಜೂನ್ 20: ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿಯೇ ಮಹತ್ತರ ನಿರ್ಧಾರವೊಂದನ್ನು ತೆಗೆದುಕೊಂಡು ಸುಪ್ರೀಂಕೋರ್ಟ್ ಸೂಚನೆಯಂತೆ ಕಪ್ಪು ಹಣ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ಅಸ್ತಿತ್ವಕ್ಕೆ ತಂದಿದೆ.
ಕಾಳಧನದ ವಿರುದ್ಧ ಸಮರ ಸಾರುತ್ತಾ ಬಂದಿದ್ದ ಬಿಜೆಪಿಯಿಂದ ಇಂತಹ ನಿರ್ಧಾರ ನಿರೀಕ್ಷಿತವೇ. ಈ ಮಧ್ಯೆ, ತಾಜಾ ವರದಿಗಳ ಪ್ರಕಾರ ಸ್ವಿಸ್ ಬ್ಯಾಂಕುಗಳಲ್ಲಿ ಭಾರತೀಯರು ಹೊಂದಿರುವ ಹಣದ ಮೊತ್ತ ಒಂದೇ ವರ್ಷದಲ್ಲಿ 4,500 ಕೋಟಿ ರೂ ನಷ್ಟು ಜಿಗಿದಿದೆ. ಪ್ರಸ್ತುತ ಸ್ವಿಟ್ಸರ್ಲೆಂಡ್ ಬ್ಯಾಂಕುಗಳಲ್ಲಿ ಭಾರತೀಯರು ಬರೋಬ್ಬರಿ 14,000 ಕೋಟಿ ರೂ. ಜಮಾ ಮಾಡಿದ್ದಾರೆ ಎಂದು ಅಧಿಕೃತ ಮಾಹಿತಿ ಮೂಲಕ ತಿಳಿದುಬಂದಿದೆ.

2012ರಲ್ಲಿ 9,500 ಕೋಟಿ ರೂ. ನಷ್ಟಿದ್ದ ಭಾರತೀಯರ ಹಣದ ಪ್ರಮಾಣ 2013ನೇ ಸಾಲಿನಲ್ಲಿ ಶೇ. 40ರಷ್ಟು ವೃದ್ಧಿಯಾಗಿದ್ದು, 14,000 ಕೋಟಿ ರೂ. ಗೆ ಜಿಗಿದಿದೆ ಎಂದು ಸ್ವಿಟ್ಸರ್ಲೆಂಡ್ ರಾಷ್ಟ್ರೀಯ ಬ್ಯಾಂಕಿಂಗ್ ಪ್ರಾಧಿಕಾರವಾದ ಸ್ವಿಸ್ ನ್ಯಾಷನಲ್ ಬ್ಯಾಂಕ್ (SNB) ಮಾಹಿತಿ ನೀಡಿದೆ. ಗಮನಿಸಿ, ಇದರ ಹೊರತಾಗಿ ಇತರೆ ದೇಶಗಳಲ್ಲಿರುವ ಬ್ಯಾಂಕುಗಳಲ್ಲಿ ಭಾರತೀಯರು ಇಟ್ಟಿರಬಹುದಾದ ಹಣದ ಮೊತ್ತವೆಷ್ಟು ಎಂಬುದು ಬಹಿರಂಗವಾಗಿಲ್ಲ. ಅಂದಹಾಗೆ ಸ್ವಿಟ್ಸರ್ಲೆಂಡ್ ಬ್ಯಾಂಕುಗಳಲ್ಲಿ 2013ರ ಅಂತ್ಯಕ್ಕೆ 90 ಲಕ್ಷ ಕೋಟಿ ರೂ. ನಷ್ಟು (ಕಾಳ) ಹಣ ಇದೆ.
ಆದರೆ ಇಷ್ಟೆಲ್ಲಾ ದತ್ತಾಂಶಗಳು, ಮಾಹಿತಿ ಇರುವಾಗ ಇದೀಗ ತುಸು ಹೆಚ್ಚು ಸಕ್ರಿಯವಾಗಿರುವ ಸುಪ್ರೀಂಕೋರ್ಟಿನ ವಿಶೇಷ ಕಾರ್ಯಪಡೆ ತಂಡವು ವಿಶ್ವದಲ್ಲಿ ಕನಿಷ್ಠ 50 ರಾಷ್ಟ್ರಗಳಲ್ಲಿ ಶೇಖರಣೆಯಾಗಿರುವ ಭಾರತೀಯರ ಖಾತೆಗಳ ಬೆನ್ನುಹತ್ತಬೇಕಿದೆ. ಸ್ವಿಟ್ಸರ್ಲೆಂಡ್, ಗ್ರೀಸ್ ಮತ್ತು ಜರ್ಮನಿಗಳಲ್ಲಿ ಭಾರತೀಯರು ತಮ್ಮ ಕಾಳ ಧನವನ್ನು ಜಮೆ ಮಾಡುತ್ತಾರೆ ಎಂಬುದು ಸಾಮಾನ್ಯ ನಂಬಿಕೆ. ಇದರ ಹೊರತಾಗಿ ಕೇಮನ್ ದ್ವೀಪಗಳು, ಬರ್ಮುಡಾ ದ್ವೀಪಗಳು, ಲಕ್ಸಂಬರ್ಗ್, ಮಾರಿಷಸ್, ಸಿಂಗಪುರ, ನೆದರ್ ಲ್ಯಾಂಡ್ಸ್ ಮತ್ತಿತರ ಕೆಲ ಯುರೋಪ್ ರಾಷ್ಟ್ರಗಳೂ ಕಾಳ ಧನ ಜಮೆ ಮಾಡುವುದಕ್ಕೆ ಭಾರತೀಯರಿಗೆ ಪ್ರಶಸ್ತ ಸ್ಥಳವಾಗಿದೆ.
ತೆರಿಗೆ ತಪ್ಪಿಸಿ, ಕಾಳ ಧನವನ್ನು ಸಂಗ್ರಹಿಸಿಡಲು ಇಷ್ಟೆಲ್ಲಾ ಪ್ರಶಸ್ತ ಸ್ಥಳಗಳು ಇರುವಾಗ ಸರಕಾರಕ್ಕೆ ಅಥವಾ ತನಿಖಾ ಸಂಸ್ಥೆಗೆ ಚಳ್ಳೆಹಣ್ಣು ತಿನ್ನಿಸುವುದು ಸರಳವಾಗಿರುತ್ತದೆ. ಹಾಗಾಗಿ ಕಾಳಧನಕೋರರು ಸರಕಾರದ ಕಣ್ತಪ್ಪಿಸುವುದೇ ಹೆಚ್ಚು. ಇದನ್ನು ಮೀರಿ, ಕಾಳಧನ ವಾಪಸ್ ತರಬೇಕು ಅಂದರೆ ಈಗಿನ SITಗೆ ಕನಿಷ್ಠ 2 ವರ್ಷ ಕಾಲಾವಕಾಶ ಹಿಡಿಸಲಿದೆ. (ಚೊಚ್ಚಲ ಸಭೆಯಲ್ಲಿ ಮೋದಿ ಸಂಪುಟದ ಮಹತ್ತರ ನಿರ್ಧಾರ)
ಅಂದಹಾಗೆ ಜುಲೈನಲ್ಲಿ ದೆಹಲಿಯ ಅಶೋಕಾ ಹೋಟೆಲಿನಲ್ಲಿ SIT ಕಚೇರಿ ತೆರೆದು ಪೂರ್ಣಪ್ರಮಾನದಲ್ಲಿ ಕಾರ್ಯಾರಂಭಿಸಲಿದೆ.












Click it and Unblock the Notifications