ಪಾಕ್ಗೆ ಹೋದ ಸಿಧು ಅವರನ್ನು ಬಂಧಿಸಲು ಸುಬ್ರಮಣಿಯನ್ ಸ್ವಾಮಿ ಆಗ್ರಹ
ನವದೆಹಲಿ, ನವೆಂಬರ್ 30: ಭಾರತ-ಪಾಕಿಸ್ತಾನ ನಡುವೆ ವಿವಾದಗಳು ಇರುವಾಗಲೇ ಪಾಕಿಸ್ತಾನಕ್ಕೆ ತೆರಳಿ ಅಲ್ಲಿ ಖಲಿಸ್ತಾನ ಮುಖಂಡ ಗೋಪಾಲ್ ಸಿಂಗ್ ಚಾವ್ಲಾನನ್ನು ಭೇಟಿ ಮಾಡಿದ್ದಕ್ಕಾಗಿ ನವಜೋತ್ ಸಿಂಗ್ ಸಿಧು ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿ ಬಂಧಿಸಿ ರಾಷ್ಟ್ರೀಯ ತನಿಖಾ ದಳದ (ಎನ್ಐಎ) ಮೂಲಕ ವಿಚಾರಣೆಗೆ ಒಳಪಡಿಸಬೇಕು ಎಂದು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಆಗ್ರಹಿಸಿದ್ದಾರೆ.
ಪ್ರತ್ಯೇಕ ಖಲಿಸ್ತಾನ ದೇಶಕ್ಕಾಗಿ ಪ್ರತಿಪಾದಿಸುತ್ತಿರುವ ಚಾವ್ಲಾ, ಕರ್ತರ್ ಪುರ್ ಕಾರಿಡಾರ್ ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ್ದ ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿಧು ಜೊತೆಗೆ ಫೋಟೊ ತೆಗೆಸಿಕೊಂಡು ಫೇಸ್ ಬುಕ್ನಲ್ಲಿ ಹಂಚಿಕೊಂಡಿದ್ದ.
ಇದು ವಿವಾದದ ಕಿಡಿಯನ್ನು ಹಚ್ಚಿಸಿದ ಕೂಡಲೇ ಸಿಧು, ತಾವು ಲಕ್ಷಾಂತರ ಜನರ ಜೊತೆ ಫೋಟೊ ತೆಗೆಸಿಕೊಂಡಿದ್ದು, ಅವರಲ್ಲಿ ಚಾವ್ಲಾ ಯಾರು ಎಂಬುದೇ ಗೊತ್ತಿಲ್ಲ ಎಂದು ಸಮಜಾಯಿಷಿ ನೀಡಿದ್ದರು.

ಸಿಧು ಜೊತೆ ಚಿತ್ರ ತೆಗೆಸಿಕೊಂಡಿದ್ದ ಚಾವ್ಲಾ, ಬಳಿಕ ಪಾಕಿಸ್ತಾನದ ಸೇನಾ ಮುಖ್ಯಸ್ಥ ಖಮರ್ ಜಾವೇದ್ ಬಾಜ್ವಾ ಅವರನ್ನು ಕೂಡ ಅದೇ ಕಾರ್ಯಕ್ರಮದಲ್ಲಿ ಭೇಟಿಯಾಗಿದ್ದ ಎಂದು ಪಾಕಿಸ್ತಾನದ ರಾಷ್ಟ್ರೀಯ ವಾಹಿನಿ ಪಿಟಿವಿ ತಿಳಿಸಿದೆ.
ಪ್ರತ್ಯೇಕ ಖಲಿಸ್ತಾನದ ಹೋರಾಟ ನಡೆಸಿರುವ ಚಾವ್ಲಾನನ್ನು ಭೇಟಿ ಮಾಡಿ ಚಿತ್ರ ತೆಗೆಸಿಕೊಂಡಿರುವುದು ರಾಷ್ಟ್ರೀಯ ಭದ್ರತಾ ಕಾಯ್ದೆ ಪ್ರಕಾರ ಅಪರಾಧ ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.












Click it and Unblock the Notifications