ಗೋಡ್ಸೆ 'ದೇಶಪ್ರೇಮಿ' ಹೇಳಿಕೆ ಸಂಸದ ಸಾಕ್ಷಿ ಯೂ ಟರ್ನ್
ನವದೆಹಲಿ, ಡಿ.12: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಂತಕ ನಾಥುರಾಮ್ ಗೋಡ್ಸೆಯನ್ನು 'ದೇಶಪ್ರೇಮಿ' ಎಂದು ಹಾಡಿ ಹೊಗಳಿದ್ದ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಈಗ ಯೂ ಟರ್ನ್ ಹೊಡೆದಿದ್ದಾರೆ.
ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ನಾಥೂರಾಮ್ ಗೋಡ್ಸೆಯನ್ನು ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಹಾಡಿ ಹೊಗಳಿದ್ದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಈ ಬಗ್ಗೆ ವ್ಯಾಪಕ ಟೀಕೆಗಳು ಕೇಳಿ ಬಂದ ಹಿನ್ನೆಲೆಯಲ್ಲಿ ತಮ್ಮ ಹೇಳಿಕೆಯನ್ನು ವಾಪಸ್ ಪಡೆದುಕೊಂಡಿದ್ದಾರೆ.
'ನಾನೇನಾದರೂ ತಪ್ಪು ಮಾತನಾಡಿದ್ದರೆ ಕ್ಷಮಿಸಿ, ನನ್ನ ಹೇಳಿಕೆಯನ್ನು ವಾಪಸ್ ಪಡೆದುಕೊಳ್ಳುತ್ತೇನೆ. ಗೋಡ್ಸೆ ದೇಶಪ್ರೇಮಿಯಾಗಿರಲಿಲ್ಲ' ಎಂದು ಸಾಕ್ಷಿ ಮಹಾರಾಜ್ ಹೇಳಿದ್ದಾರೆ.

'ಯಾರಾದರೂ ಗೋಡ್ಸೆಯನ್ನು ಪೂಜಿಸಲು ಬಯಸಿದರೆ, ನಾನು ತಡೆಯಲಾರೆ. ಅದನ್ನು ತಡೆಯುವುದು ಕೇಂದ್ರ ಮತ್ತು ರಾಜ್ಯ ಸರಕಾರಗಳ ಕೆಲಸ. ಆದರೆ ಗೋಡ್ಸೆಯನ್ನು ನಾನು ರಾಷ್ಟ್ರವಾದಿಯೆಂದು ಪರಿಗಣಿಸುವುದಿಲ್ಲ' ಎಂದು ಸಂಸದ ಸಾಕ್ಷಿ ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಕೇಂದ್ರ ಸಚಿವ ವೆಂಕಯ್ಯ ನಾಯ್ಡು, ಸಂಸದರ ಹೇಳಿಕೆ ಅವರ ವೈಯಕ್ತಿಕವಾಗಿದ್ದು, ಅವರ ಹೇಳಿಕೆಗೂ ಸರ್ಕಾರಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಅದರೆ, ಗುರುವಾರ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಪಕ್ಷ ಈ ಬಗ್ಗೆ ಸರ್ಕಾರದ ಪ್ರತಿಕ್ರಿಯೆ ಕೇಳಿ ಪ್ರತಿಭಟನೆ ನಡೆಸಿತ್ತು.
ಇಷ್ಟಕ್ಕೆ ಸುಮ್ಮನಾಗದ ಕಾಂಗ್ರೆಸ್ ನಾಯಕ ಹುಸೇನ್ ದಳವಾಯಿ ಅವರು ಮಹಾರಾಷ್ಟ್ರದಲ್ಲಿ ನಾಥುರಾಂ ಗೋಡ್ಸೆ ಹೆಸರಿನಲ್ಲ್ಲಿ ಶೌರ್ಯ ದಿವಸ ಆಚರಿಸಲಾಗುತ್ತಿದೆ. ಇದರಲ್ಲಿ ಬಿಜೆಪಿ, ಆರೆಸ್ಸೆಸ್ ಜೊತೆಗಿನ ನಂಟಿನ ಬಗ್ಗೆ ಪ್ರಚಾರ ನೀಡಲಾಗುತ್ತಿದೆ ಸ್ಥಳೀಯ ಬಿಜೆಪಿ ಶಾಸಕರು ಇದರಲ್ಲಿ ಭಾಗವಹಿಸಿದ್ದರು ಎಂದು ವಿವರಣೆ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಂಸದೀಯ ವ್ಯವಹಾರ ಖಾತೆ ರಾಜ್ಯ ಸಚಿವ ಮುಖ್ತಾರ್ ಅಬ್ಬಾಸ್ ನಕ್ವಿ, ಮಹಾತ್ಮಾ ಗಾಂಧಿ ಹಂತಕನನ್ನು ವೈಭವೀಕರಿಸುವ ಕಾರ್ಯಕ್ಕೆ ಮುಂದಾದರೆ ಅದು ಅಪರಾಧ. ನಾವು ಗಾಂಧೀಜಿ ಹಂತಕನ ಆರಾಧನೆಗೆ ಅನುಮತಿ ನೀಡುವುದಿಲ್ಲ ಎಂದಿದ್ದಾರೆ.












Click it and Unblock the Notifications