ಇನ್ನು ಮಾತುಕತೆ ಏನಿದ್ದರೂ ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆ: ರಾಜ್ ನಾಥ್ ಸಿಂಗ್
ನವದೆಹಲಿ, ಆಗಸ್ಟ್ 18: "ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ದ್ವಿಪಕ್ಷೀಯ ಮಾತುಕತೆ ಆಗಬೇಕಿದ್ದರೆ ಅದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಬಗ್ಗೆ" ಎಂದು ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಭಾನುವಾರ ಹೇಳಿದ್ದಾರೆ. ಹರಿಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರ 'ಜನ್ ಆಶೀರ್ವಾದ್ ಯಾತ್ರಾ'ದಲ್ಲಿ ಪಂಚ್ ಕುಲದಲ್ಲಿ ಅವರು ಮಾತನಾಡಿದ್ದಾರೆ.
ಎಲ್ಲಿಯ ತನಕ ಪಾಕಿಸ್ತಾನವು ತನ್ನ ನೆಲದಲ್ಲಿ ಭಯೋತ್ಪಾದನೆಯನ್ನು ಬೆಂಬಲಿಸುತ್ತದೋ ಅಲ್ಲಿಯ ತನಕ ಆ ದೇಶದ ಜತೆಗೆ ಮಾತುಕತೆ ಸಾಧ್ಯವಿಲ್ಲ. "ಪಾಕಿಸ್ತಾನದ ಜತೆ ಮಾತುಕತೆ ನಡೆಸಬೇಕು ಎಂದು ಕೆಲವರು ನಂಬುತ್ತಾರೆ. ಆದರೆ ಪಾಕಿಸ್ತಾನ ಎಲ್ಲಿಯ ತನಕ ಭಯೋತ್ಪಾದನೆಯನ್ನು ಬೆಂಬಲಿಸುತ್ತದೋ ಅಲ್ಲಿಯ ತನಕ ಯಾವುದೇ ಮಾತುಕತೆ ಇಲ್ಲ. ಒಂದು ವೇಳೆ ಮಾತುಕತೆಯಾದರೆ ಅದು ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆ" ಎಂದು ಹೇಳಿದ್ದಾರೆ.
ಈ ವರ್ಷ ಅಕ್ಟೋಬರ್ ನಲ್ಲಿ ಹರಿಯಾಣದಲ್ಲಿ ಚುನಾವಣೆ ನಡೆಯಲಿದೆ. ಅಲ್ಲಿ ಮಾತನಾಡಿದ ಅವರು, ಜಮ್ಮು- ಕಾಶ್ಮೀರ, ಲಡಾಖ್ ನ ಯುವ ಜನಾಂಗದ ಭವಿಷ್ಯಕ್ಕಾಗಿ ವಿಶೇಷ ಸ್ಥಾನಮಾನ ರದ್ದು ಮಾಡುವ ತೀರ್ಮಾನ ಕೈಗೊಂಡಿದ್ದೇವೆ ಎಂದು ಅವರು ಭಾನುವಾರ ಹೇಳಿದ್ದಾರೆ.

ಜಮ್ಮು- ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಭಾರತ ಸರಕಾರದ ತೀರ್ಮಾನವನ್ನು ಪಾಕಿಸ್ತಾನವು ಪ್ರಬಲವಾಗಿ ವಿರೋಧಿಸಿದೆ. ಇದು ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ನಿರ್ಣಯಕ್ಕೆ ವಿರುದ್ಧವಾದದ್ದು ಎಂದು ಪಾಕ್ ಹೇಳಿದೆ. ಇನ್ನು ಭಾರತದ ಜತೆಗಿನ ರಾಜತಾಂತ್ರಿಕ ಸಂಬಂಧವನ್ನು ಕಡಿತಗೊಳಿಸುವ ತೀರ್ಮಾನದ ಭಾಗವಾಗಿ ಭಾರತದ ಹೈಕಮಿಷನ್ ಅನ್ನು ಇಸ್ಲಾಮಾಬಾದ್ ನಿಂದ ಉಚ್ಚಾಟಿಸಿದೆ.
ಪರಿಚ್ಛೇದ 370 ಅನ್ನು ರದ್ದು ಮಾಡುವುದು ಭಾರತದ 'ಆಂತರಿಕ ವಿಚಾರ' ಎಂದು ಜಾಗತಿಕ ಸಮುದಾಯಕ್ಕೆ ತಿಳಿಸಲಾಗಿದ್ದು, ಪಾಕಿಸ್ತಾನವು 'ವಾಸ್ತವವನ್ನು ಒಪ್ಪಿಕೊಳ್ಳಬೇಕು' ಎಂದು ಹೇಳಲಾಗಿದೆ.












Click it and Unblock the Notifications