ದೆಹಲಿ ತ್ರಿವಳಿ ಕೊಲೆ ಪ್ರಕರಣಕ್ಕೆ ರೋಚಕ ತಿರುವು: ಮಗನೇ ಕೊಲೆಗಾರ!
ನವದೆಹಲಿ, ಅಕ್ಟೋಬರ್ 11: ನವದೆಹಲಿಯನ್ನು ಬೆಚ್ಚಿಬೀಳಿಸಿದ ಒಂದೇ ಕುಟುಂಬದ ಮೂವರ ಹತ್ಯೆ ಪ್ರಕರಣ ರೋಚಕ ತಿರುವು ಪಡೆದಿದ್ದು, ಪಾಲಕರನ್ನು 19 ವರ್ಷ ವಯಸ್ಸಿನ ಮಗನೇ ಕೊಂದಿರುವುದು ದೃಢವಾಗಿದೆ!
ದೆಹಲಿಯ ವಸಂತ ಕುಂಜ್ ನ ಕಿಶನ್ಘರ್ ಎಂಬ ಕಟ್ಟಡದಲ್ಲಿ ತಂದೆ-ತಾಯಿ ಮತ್ತು ಅವರ 16 ವರ್ಷದ ಪುತ್ರಿಯ ಕೊಲೆಯಾಗಿತ್ತು. ಬುಧವಾರ ಬೆಳಗ್ಗಿನ ಜಾವದಲ್ಲಿ ಕೊಲೆ ನಡೆದಿದ್ದು, ಇವರ ಪುತ್ರನಿಗೂ ಕೊಂಚ ಗಾಯಗಳಾಗಿದ್ದರಿಂದ ಯಾರೋ ಹೊರಗಿನವರೇ ನಾಲ್ವರ ಮೇಲೂ ಹಲ್ಲೆ ನಡೆಸಿದ್ದಾರೆ ಎನ್ನಿಸುತ್ತಿತ್ತು.
ಆದರೆ ಈ ಪ್ರಕರಣ ರೋಚಕ ತಿರುವು ಪಡೆದಿದ್ದು ಮಗನೇ ಕೊಲೆ ಮಾಡಿರುವುದು ಖಚಿತವಾಗಿದೆ. ಅಷ್ಟೇ ಅಲ್ಲ, ಆತ ತನ್ನದೇ ಅಪಹರಣ ಪ್ರಹಸನವನ್ನೂ ತಾನೇ ಯೋಜಿಸಿದ್ದ ಎಂಬ ಅಂಶವನ್ನೂ ವಿಚಾರಣೆಯ ಸಮಯದಲ್ಲಿ ಬಾಯ್ಬಿಟ್ಟಿದ್ದಾನೆ.

ಕೊಲೆಗೆ ಕಾರಣವೇನು?
ತಂದೆ ತನ್ನ ಸ್ವಾತಂತ್ರ್ಯಕ್ಕೆ ಧಕ್ಕೆ ಬರುತ್ತಿರುವುದು ಮಗನಿಗೆ ಇಷ್ಟವಿರಲಿಲ್ಲ. ತನ್ನ ಮೋಜಿನ ಜೀವನ ಶೈಲಿಯನ್ನು ಬಿಟ್ಟು ಓದು, ಓದು ಎಂದು ಮನೆಯಲ್ಲಿ ಪೀಡಿಸುತ್ತಿದ್ದುದು ಮತ್ತು ಒತ್ತಡ ಹೇರುತ್ತಿದ್ದುದು ತನಗೆ ಕಿರಿಕಿರಿ ಉಂಟು ಮಾಡುತ್ತಿತ್ತು ಎಂದು ಆತನೇ ಪೊಲಿಸರ ಮುಂದೆ ಹೇಳಿಕೊಂಡಿದ್ದಾನೆ. ಈ ಕಾರಣಕ್ಕೆಂದೇ ಕೇವಲ ತಂದೆಯನ್ನಷ್ಟೇ ಕೊಲ್ಲಲು ಆತ ಸಂಚು ರೂಪಿಸಿದ್ದ. ಆದರೆ ತಂತೆಯನ್ನು ತಾನು ಕೊಲ್ಲುತ್ತಿರುವುದು ತಾಯಿ ಮತ್ತು ತಂಗಿಗೆ ತಿಳಿದಿದ್ದರಿಂದ ಅವರನ್ನೂ ಕೊಂದಿದ್ದಾಗಿ ಹೇಳಿಕೊಂಡಿದ್ದಾನೆ!
|
ತನ್ನ ಅಪಹರಣವನ್ನು ತಾನೇ ಮಾಡಿಸಿಕೊಂಡಿದ್ದ!
ಕೆಲವು ವರ್ಷಗಳ ಹಿಂದೆ ಈತ ತನ್ನ ಅಪಹರಣವನ್ನು ತಾನೇ ಮಾಡಿಸಿಕೊಂಡು ಮನೆಯವರಲ್ಲಿ ಆತಂಕ ಸೃಷ್ಟಿಸಿದ್ದ. ಈ ಮೂಲಕ ಹಣವನ್ನೂ ಪೀಕಿಸಿದ್ದ. ಈ ವಿಷಯವೂ ಪೊಲೀಸ್ ವಿಚಾರಣೆಯ ಸಮಯದಲ್ಲೇ ಹೊರಬಂದಿದೆ!

ಕೊಲೆ ನಡೆದಿದ್ದು ಹೇಗೆ?
ತಂದೆಯನ್ನು ಕೊಲೆ ಮಾಡಲು ನಿರ್ಧರಿಸಿದ್ದ ಪುತ್ರ, ಬುಧವಾರ ಬೆಳ್ಳಂಬೆಳಗ್ಗೆ ಮಾರುಕಟ್ಟೆಗೆ ತೆರಳಿ ಕಿಚನ್ ಚಾಕುವೊಂದನ್ನು ತಂದಿದ್ದ! ಇದರಿಂದಲೇ ಚುಚ್ಚಿ ತಂದೆಯನ್ನು ಕೊಂದಿದ್ದು, ಈ ಸಂದರ್ಭದಲ್ಲಿ ಅಮ್ಮ ಅಡ್ಡ ಬಂದಾಗ ಆಕೆಯನ್ನೂ, ತಂಗಿಯನ್ನೂ ಕೊಲೆ ಮಾಡಿದ್ದ. ಆತನಿಗೆ ಪ್ರತಿರೋಧ ಒಡ್ಡಿದ ಕಾರಣಕ್ಕೆ ಆತನ ದೇಹದ ಮೇಲೂ ಚಾಕುವಿನಿಂದ ಇರಿದ ಸಣ್ಣ ಪುಟ್ಟ ಗಾಯಗಳಿದ್ದವು.

ಬೆಳಿಗ್ಗೆ 5 ಕ್ಕೆ ಕೊಲೆ!
ಬುಧವಾರ ಬೆಳಿಗ್ಗೆ ಸುಮಾರು 5 ಗಂಟೆಯ ಸಮಯದಲ್ಲಿ ಮಿತಿಲೇಶ್ ಮತ್ತು ಸಿಯಾ ಎಂಬ 40 ವರ್ಷದ ಆಸು ಪಾಸಿನ ದಂಪತಿ ಮತ್ತು ಅವರ 16 ವರ್ಷ ವಯಸ್ಸಿನ ಪುತ್ರಿ ನೇಹಾ ಹತ್ಯೆಗೊಳಗಾಗಿದ್ದರು. ಮನೆಗೆಲಸಕ್ಕೆಂದು ಬಂದ ಮಹಿಳೆಗೆ ಮೊದಲು ಶವಗಳು ಕಂಡಿದ್ದು, ತಕ್ಷಣವೇ ನೆರೆಹೊರೆಯವರ ಮೂಲಕ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು. ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಪುತ್ರನನನ್ನು ಮೊದಲು ವಿಚಾರಣೆಗೊಳಪಡಿಸಿದ್ದರು.












Click it and Unblock the Notifications