ಬೆಂಗಳೂರು ಮಹಿಳೆಗೆ ಕಿರುಕುಳ ಕೊಟ್ಟ ಅಧಿಕಾರಿ ಬಂಧನ
ನವದೆಹಲಿ, ಏ.16: ಬೆಂಗಳೂರಿನ ಗೃಹಿಣಿಯೊಬ್ಬರಿಗೆ ಮಾನಸಿಕ ಕಿರುಕುಳ ನೀಡಿ ಕಾಮದೃಷ್ಟಿ ಬೀರಿದ್ದ ದೆಹಲಿ ವಿಮಾನ ನಿಲ್ದಾಣದ ಇಮಿಗ್ರೇಷನ್ ಅಧಿಕಾರಿ ವಿನೋದ್ ಕುಮಾರ್ ಅವರನ್ನು ಬುಧವಾರ ತಡರಾತ್ರಿ ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಮಾ.18ರಂದು ದೆಹಲಿ ಮುಖಾಂತರ ಹಾಂಕಾಂಗ್ ಗೆ ತೆರಳುತ್ತಿದ್ದ ಬೆಂಗಳೂರಿನ ಗೃಹಿಣಿಯನ್ನು ವಿಚಾರಣೆ ನೆಪದಲ್ಲಿ ಹಿಂಸೆ ನೀಡಿದ್ದ ಅರೋಪ ಹೊತ್ತಿದ್ದ ವಲಸೆ ಸಹಾಯಕ ಅಧಿಕಾರಿ ವಿನೋದ್ ಕುಮಾರ್ ಅವರನ್ನು ಈಗಾಗಲೇ ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಬೆಂಗಳೂರು ಗೃಹಿಣಿ ಈ ಘಟನೆ ಬಗ್ಗೆ ಸಂಪೂರ್ಣ ವಿವರಣೆ ನೀಡಿ ವಿಮಾನ ಪ್ರಾಧಿಕಾರ ಆಯುಕ್ತ ಪಿಕೆ ಭಾರದ್ವಾಜ್ ಹಾಗೂ ದೆಹಲಿ ವಿಮಾನ ನಿಲ್ದಾಣ ಕೇಂದ್ರಕ್ಕೆ ಇ ಮೇಲ್ ಮೂಲಕ ದೂರು ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಿದ ಆಯುಕ್ತರು ಅಧಿಕಾರಿಯನ್ನು ಅಮಾನತುಗೊಳಿಸಿದ್ದರು. ನಂತರ ಪ್ರಕರಣ ದೆಹಲಿ ಪೊಲೀಸರ ಕೈ ಸೇರಿತ್ತು. [ಬೆಂಗಳೂರು ಮಹಿಳೆಗೆ ಸಂದ ಜಯ, 'ಹೊಲಸು' ಅಧಿಕಾರಿ ಸಸ್ಪೆಂಡ್]

ಬುಧವಾರ ತಡರಾತ್ರಿ ವಿನೋದ್ ಕುಮಾರ್ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಮ್ಯಾಜಿಸ್ಟ್ರೇಟ್ ಮುಂದೆ ಹಾಜರು ಪಡಿಸಿದ್ದಾರೆ. ಸಿಆರ್ ಪಿಸಿ ಸೆಕ್ಷನ್ 164 ಅನ್ವಯ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ ಎಂದು ಐಜಿಐಎ ಡಿಸಿಪಿ ಹೈದರ್ ಹೇಳಿದ್ದಾರೆ.
ಐಜಿಐಎ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 354ಎ, 354ಡಿ ಹಾಗೂ 506 ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದುಮ್ ಎಫ್ ಐಆರ್ ಹಾಕಲಾಗಿದೆ. ಅದರೆ, ಗುರುವಾರ ಮಧ್ಯಾಹ್ನದ ವೇಳೆಗೆ ವಿನೋದ್ ಕುಮಾರ್ ಜಾಮೀನು ಪಡೆದುಕೊಂಡು ಹೊರ ಬಂದಿದ್ದಾರೆ.
ಮಾ.18, 21.30 ಸಮಯದಲ್ಲಿ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬದಲಾವಣೆ ವಿಮಾನ (02.00 ಅವಧಿ) ಕ್ಕಾಗಿ ಕಾದಿದ್ದರು. ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ಇಮಿಗ್ರೇಷನ್ ಅಧಿಕಾರಿ ವಿನೋದ್ ಕುಮಾರ್ ಕೇಳಿದ ಪ್ರಶ್ನೆಗಳ ಸ್ಯಾಂಪಲ್:
ನಿಮಗೆ ಎಷ್ಟು ಮಕ್ಕಳಿದ್ದಾರೆ, ನೀವು ಏನು ಕುಡಿಯುತ್ತೀರಿ, ಧೂಮಪಾನ ಮಾಡುತ್ತಿರಾ? ಚಿಕನ್ ತಿನ್ನುತ್ತೀರಾ? ಪರಪುರುಷನ ಜೊತೆ ಪಲ್ಲಂಗ ಹಂಚಿಕೊಳ್ಳುತ್ತಿರಾ? ನಿಮ್ಮ ಪತಿ ಉದ್ಯೋಗಕ್ಕೆ ಹೋದಾಗ ಏನು ಮಾಡುತ್ತೀರಿ? ಜನನ ನಿಯಂತ್ರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೀರಾ? ಎಂದು ನಾಲ್ಕು ಬಾರಿ ಕೇಳಿದ ಅಧಿಕಾರಿ ಕೊನೆಗೆ ನಿಮ್ಮ ಮೂರನೇ ಮಗುವಿಗೆ ನಾನು ತಂದೆಯಾಗುತ್ತೇನೆ. ಹಾಂಕಾಂಗ್ ನಲ್ಲಿ ಒಬ್ಬರೇ ಇರುತ್ತೀರಾ? ನಿಮ್ಮ ಪರ್ಸನಲ್ ನಂಬರ್ ಕೊಡಿ ನಿಮ್ಮ ಪತಿ ಇಲ್ಲದಿರುವ ಸಂದರ್ಭದಲ್ಲಿ ಕಾಲ್ ಮಾಡುತ್ತೇನೆ ಎಂದು ನಗೆಯಾಡಿದ್ದ ಎಂದು ದೂರಿನಲ್ಲಿ ಹೇಳಲಾಗಿತ್ತು. ನಂತರ ದುರ್ವತನೆಯಿಂದ ಕೆಲಸ ಕಳೆದುಕೊಂಡಿದ್ದ.












Click it and Unblock the Notifications