ಅಯೋಧ್ಯಾ ವಿವಾದ ಸಾಂವಿಧಾನಿಕ ಪೀಠಕ್ಕೆ ನೀಡಿದ್ದೇಕೆ?: ಸಿಜೆಐ ವಿವರಣೆ
ನವದೆಹಲಿ, ಜನವರಿ 11: ಅಯೋಧ್ಯಾದಲ್ಲಿ ರಾಮ ಮಂದಿರ ಮತ್ತು ಮಸೀದಿ ನಿರ್ಮಾಣಕ್ಕೆ ಸಂಬಂಧಿಸಿದ ವಿವಾದದ ವಿಚಾರಣೆಯನ್ನು ಜ.29ಕ್ಕೆ ಮುಂದೂಡಲಾಗಿದೆ. ಈ ಪ್ರಕರಣದ ವಿಚಾರಣೆಯನ್ನು ಐವರು ಸದಸ್ಯರ ಸಾಂವಿಧಾನಿಕ ಪೀಠ ಕೈಗೆತ್ತಿಕೊಂಡಿತ್ತು.
ಆದರೆ, ಮುಸ್ಲಿಂ ಅರ್ಜಿದಾರರ ಪರ ವಕೀಲ ರಾಜೀವ್ ಧವನ್ ಆಕ್ಷೇಪದ ಹಿನ್ನೆಲೆಯಲ್ಲಿ ಪಂಚಪೀಠದ ನ್ಯಾಯಮೂರ್ತಿಗಳಲ್ಲಿ ಒಬ್ಬರಾದ ಉದಯ್ ಲಲಿತ್ ವಿಚಾರಣೆಯಿಂದ ಹಿಂದಕ್ಕೆ ಸರಿದಿದ್ದರು. ವಿಚಾರಣೆಯನ್ನು ಸಾಂವಿಧಾನಿಕ ಪೀಠಕ್ಕೆ ವಹಿಸಿದ್ದರ ಕುರಿತೂ ಧವನ್ ಆಕ್ಷೇಪಿಸಿದ್ದರು.
ಹಿಂದಿನ ಸಿಜೆಐ ದೀಪಕ್ ಮಿಶ್ರಾ ಅವರು ಸಾಂವಿಧಾನಿಕ ಪೀಠ ರಚನೆಯ ಅವಶ್ಯಕತೆ ಇಲ್ಲ ಎಂದು ಕಾನೂನಾತ್ಮಕ ನಿಲುವು ಪ್ರಕಟಿಸಿದ್ದರು. ಅಲ್ಲದೆ, ಐವರು ನ್ಯಾಯಮೂರ್ತಿಗಳ ಪೀಠ ರಚಿಸಲು ಸಿಜೆಐ ಗೊಗೊಯ್ ಆಡಳಿತಾತ್ಮಕ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಧವನ್ ಹೇಳಿದ್ದರು.

ಆದರೆ, ಗೊಗೊಯ್ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಸುಪ್ರೀಂಕೋರ್ಟ್ನ ನಿಯಮಾವಳಿಗಳಲ್ಲಿ ಇಂತಹ ನಿರ್ಧಾರ ತೆಗೆದುಕೊಳ್ಳಲು ಮುಖ್ಯ ನ್ಯಾಯಮೂರ್ತಿಗೆ ಅಧಿಕಾರವಿದೆ ಎಂದು ಗೊಗೊಯ್ ಹೇಳಿದ್ದಾರೆ.
'ಇದು ಯಾವಾಗಲೂ ಘನತೆವೆತ್ತ ಮುಖ್ಯ ನ್ಯಾಯಮೂರ್ತಿಗಳ ನಿರ್ಧಾರಕ್ಕೆ ಬಿಟ್ಟಿದ್ದು. ವಿವಿಧ ಸಂಬಂಧಿತ ವಾಸ್ತವಗಳನ್ನು ಮತ್ತು ಸಂದರ್ಭಗಳನ್ನು ಗಮನಿಸಿದಾಗ ಇಂತಹ ಶಕ್ತಿಯುತ ಸಾಂವಿಧಾನಿಕ ಪೀಠಗಳನ್ನು ರಚಿಸುವ ಅವಕಾಶಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ' ಎಂದು ಗೊಗೊಯ್ ತಿಳಿಸಿದ್ದಾರೆ.
ಈ ಹಿಂದಿನ ಸಿಜೆಐ ನೀಡಿದ ಆದೇಶಕ್ಕೆ ತಮ್ಮ ಈ ನಿರ್ಧಾರ ಯಾವುದೇ ರೀತಿಯಲ್ಲಿ ವಿರೋಧಾಭಾಸವಾಗಿಲ್ಲ ಎಂದೂ ಅವರು ಹೇಳಿದ್ದಾರೆ.
ಸುಪ್ರೀಂಕೋರ್ಟ್ನ ನಿಯಮದ ಪ್ರಕಾರ ಯಾವುದೇ ಬೆಂಚು ಕನಿಷ್ಠ ಇಬ್ಬರು ನ್ಯಾಯಮೂರ್ತಿಗಳನ್ನು ಒಳಗೊಂಡಿರಬೇಕು. ಅಲ್ಲದೆ, ಐವರು ನ್ಯಾಯಮೂರ್ತಿಗಳ ನ್ಯಾಯಪೀಠ ರಚಿಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದ್ದಾರೆ..
ಪ್ರಕರಣದ ಸಂದರ್ಭ ಮತ್ತು ವಾಸ್ತವತೆಗಳನ್ನು ಗಮನದಲ್ಲಿರಿಸಿಕೊಂಡು ಇದು ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠಕ್ಕೆ ಸೂಕ್ತ ಎಂದು ನಿರ್ಧರಿಸಿದ್ದಾಗಿ ತಿಳಿಸಿದ್ದಾರೆ.
ಈಗ ಉದಯ್ ಲಲಿತ್ ಅವರ ಸ್ಥಾನಕ್ಕೆ ಸುಪ್ರೀಂಕೋರ್ಟ್ ಮತ್ತೊಬ್ಬ ನ್ಯಾಯಮೂರ್ತಿಯನ್ನು ನಿಯೋಜಿಸಲಿದೆ.
ನ್ಯಾಯಾಲಯದ ಕೊಠಡಿಯಲ್ಲಿರುವ 50 ಟ್ರಂಕ್ಗಳಲ್ಲಿ ದಾಖಲೆಗಳಿದ್ದು, ನ್ಯಾಯಾಲಯದ ರಿಜಿಸ್ಟ್ರಿ ಸ್ವತಃ ಅವುಗಳನ್ನು ಪರಿಶೀಲನೆ ಮಾಡಲಿದ್ದಾರೆ. ಬಳಿಕ ಅವುಗಳನ್ನು ಸೀಲ್ ಮಾಡಿ ಇರಿಸಲಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಾರ ಪ್ರಮಾಣದ ದಾಖಲೆಗಳು ಇವೆ. ಕೆಲವು ದಾಖಲೆಗಳು ಸಂಸ್ಕೃತ, ಅರೇಬಿಕ್, ಉರ್ದು, ಹಿಂದಿ, ಪರ್ಷಿಯನ್ ಮತ್ತು ಗುರ್ಮುಖಿ ಭಾಷೆಗಳಲ್ಲಿದ್ದು, ಅವುಗಳ ತರ್ಜುಮೆ ಮಾಡಬೇಕಿದೆ. ಅಗತ್ಯ ಬಿದ್ದರೆ ನ್ಯಾಯಾಲಯದ ರಿಜಿಸ್ಟ್ರಿ ವೃತ್ತಿಪರ ಭಾಷಾಂತರಕಾರರ ಸೇವೆ ಪಡೆದುಕೊಳ್ಳಲಿದೆ ಎಂದು ನ್ಯಾಯಪೀಠ ಹೇಳಿದೆ.












Click it and Unblock the Notifications