ಮುಖ್ಯ ಕಾರ್ಯದರ್ಶಿ ಮೇಲೆ ಹಲ್ಲೆ ಪ್ರಕರಣ, ಎಎಪಿ ಶಾಸಕನ ಬಂಧನ
ನವದೆಹಲಿ, ಫೆಬ್ರವರಿ 21: ರಾಷ್ಟ್ರ ರಾಧಾನಿ ದೆಹಲಿಯ ಹೈಡ್ರಾಮಗಳು ನಿಲ್ಲುವಂತೆ ಕಾಣಿಸುತ್ತಿಲ್ಲ. ದೆಹಲಿ ಸರಕಾರದ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಎಎಪಿ ಶಾಸಕರಾದ ಪ್ರಕಾಶ್ ಝರ್ವಾಲ್ ರನ್ನು ಮಂಗಳವಾರ ರಾತ್ರಿ ಬಂಧಿಸಲಾಗಿದೆ.
ಸೋಮವಾರ ರಾತ್ರಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನಿವಾಸದಲ್ಲಿ ಇಬ್ಬರು ಎಎಪಿ ಶಾಸಕರು ಮುಖ್ಯ ಕಾರ್ಯದರ್ಶಿ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಸರಕಾರದ ಸೌಲಭ್ಯಗಳನ್ನು ಮನೆ ಬಾಗಿಲಿಗೆ ತಲುಪಿಸುವ ಸರಕಾರದ ಯೋಜನೆಯ ಸಂಬಂಧ ಮುಖ್ಯ ಕಾರ್ಯದರ್ಶಿ ಮತ್ತು ಶಾಸಕರ ನಡುವೆ ಕಾವೇರಿದ ವಾಗ್ವಾದ ನಡೆದು ಇದು ಹಲ್ಲೆಯಲ್ಲಿ ಅಂತ್ಯವಾಗಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.
ಈ ಸಂಬಂಧ ಮಂಗಳವಾರ ಬೆಳಗ್ಗೆ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಭೇಟಿಯಾಗಿ ಎಎಪಿ ಶಾಸಕರ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದಂತೆ ಈ ಘಟನೆ ಬೆಳಕಿಗೆ ಬಂದಿತ್ತು.
ಅರವಿಂದ ಕೇಜ್ರಿವಾಲ್ ನಿವಾಸದಲ್ಲಿ ಎಎಪಿ ಶಾಸಕರಾದ ಅಜಯ್ ದತ್ ಮತ್ತು ಪ್ರಕಾಶ್ ಝರ್ವಾಲ್ ತಮ್ಮ ಮೇಲೆ ಹಲ್ಲೆ ಮಾಡಿದ್ದಾಗಿ ಅಂಶು ಪ್ರಕಾಶ್ ದೂರಿನಲ್ಲಿ ತಿಳಿಸಿದ್ದರು. ಇದಕ್ಕೆ ಪ್ರತಿಯಾಗಿ ತಮ್ಮನ್ನು ಜಾತಿ ಹಿಡಿದು ಮುಖ್ಯ ಕಾರ್ಯದರ್ಶಿ ನಿಂದಿಸಿದ್ದಾರೆ ಎಂದು ಹೇಳಿ ಪ್ರಕಾಶ್ ಝರ್ವಾಲ್ ಎಸ್.ಸಿ ಮತ್ತು ಎಸ್.ಟಿ ಆಯೋಗಕ್ಕೆ ದೂರು ನೀಡಿದ್ದರು.
ಜತೆಗೆ ಇಂಥಹದ್ದೊಂದು ಪ್ರಕರಣ ನಡೆದೇ ಇಲ್ಲ ಎಂದು ಮುಖ್ಯಮಂತ್ರಿ ಕಾರ್ಯಾಲಯದ ಪ್ರಕಟಣೆ ಮತ್ತು ಎಎಪಿ ಹೇಳಿತ್ತು. ಇದೀಗ ಪ್ರಕರಣದ ಪ್ರಮುಖ ಕೇಂದ್ರ ಬಿಂದು ಪ್ರಕಾಶ್ ಝರ್ವಾಲ್ ರನ್ನು ಕೇಂದ್ರ ಸರಕಾರದ ಅಧೀನದಲ್ಲಿ ಬರುವ ಪೊಲೀಸ್ ಇಲಾಖೆ ಬಂಧಿಸಿದೆ.