ಪ್ರಮಾಣ ವಚನಕ್ಕೆ ನರೇಂದ್ರ ಮೋದಿಗೆ ಆಹ್ವಾನಿಸಿದ ಕೇಜ್ರಿವಾಲ್
Recommended Video
ನವದೆಹಲಿ, ಫೆಬ್ರವರಿ 14 : ದೆಹಲಿಯ ನಿಯೋಜಿತ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪ್ರಮಾಣ ವಚನ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿಗೆ ಆಹ್ವಾನ ನೀಡಿದರು. ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ 62 ಸ್ಥಾನಗಳಲ್ಲಿ ಜಯಗಳಿಸಿದೆ.
ಫೆಬ್ರವರಿ 16ರ ಭಾನುವಾರ ಬೆಳಗ್ಗೆ 10 ಗಂಟೆಗೆ ಅರವಿಂದ ಕೇಜ್ರಿವಾಲ್ ದೆಹಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ಪ್ರಮಾಣ ವಚನ ಸಮಾರಂಭ ನಡೆಯಲಿದೆ.
ಅರವಿಂದ ಕೇಜ್ರಿವಾಲ್ 3ನೇ ಬಾರಿಗೆ ದೆಹಲಿ ಮುಖ್ಯಮಂತ್ರಿಯಾಗುತ್ತಿದ್ದಾರೆ. ದೆಹಲಿಯ ಜನರು ಪ್ರಮಾಣ ವಚನ ಸಮಾರಂಭಕ್ಕೆ ಆಗಮಿಸಬೇಕು ಎಂದು ಪತ್ರಿಕೆಗಳ ಜಾಹೀರಾತು ಮೂಲಕ ಆಮ್ ಆದ್ಮಿ ಪಕ್ಷ ಮನವಿಯನ್ನು ಮಾಡಿದೆ.
70 ಸದಸ್ಯ ಬಲದ ದೆಹಲಿ ವಿಧಾಸಭೆಯಲ್ಲಿ ಎಎಪಿ 62 ಸ್ಥಾನಗಳನ್ನು ಪಡೆದು 3ನೇ ಬಾರಿ ಅಧಿಕಾರವನ್ನು ಪಡೆಯುತ್ತಿದೆ. ಚುನಾವಣೆಯಲ್ಲಿ ಬಿಜೆಪಿ 8 ಸ್ಥಾನ ಪಡೆದಿದೆ, ಕಾಂಗ್ರೆಸ್ ಯಾವುದೇ ಸ್ಥಾನವನ್ನು ಪಡೆಯಲು ವಿಫಲವಾಗಿದೆ.

ಯಾರು-ಯಾರಿಗೆ ಆಹ್ವಾನ
ಭಾನುವಾರ ರಾಮ್ ಲೀಲಾ ಮೈದಾನದಲ್ಲಿ ನಡೆಯುವ ಪ್ರಮಾಣ ವಚನ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ, ದೆಹಲಿಯ 7 ಸಂಸದರು, ದೆಹಲಿ ವಿಧಾನಸಭೆಯಲ್ಲಿ ಗೆದ್ದ 8 ಬಿಜೆಪಿ ಶಾಸಕರಿಗೆ ಆಹ್ವಾನ ನೀಡಲಾಗಿದೆ. ಶುಕ್ರವಾರ ಬೆಳಗ್ಗೆ ಆಹ್ವಾನ ಪತ್ರಿಕೆಗಳನ್ನು ಕಳಿಸಲಾಗಿದೆ.

ಯಾರಿಗೂ ಆಹ್ವಾನವಿಲ್ಲ
ಎಎಪಿ ಹಿರಿಯ ನಾಯಕ ಗೋಪಾಲ್ ರೈ ಈ ಕುರಿತು ಹೇಳಿಕೆ ನೀಡಿದ್ದಾರೆ. "ಯಾವುದೇ ರಾಜ್ಯದ ಮುಖ್ಯಮಂತ್ರಿಗಳು, ಬೇರೆ ರಾಜಕೀಯ ನಾಯಕರಿಗೆ ಪ್ರಮಾಣ ವಚನ ಸಮಾರಂಭಕ್ಕೆ ಆಹ್ವಾನ ನೀಡಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

ಮುದ್ದು ಮಗುವಿಗೆ ಆಹ್ವಾನ
ಪ್ರಮಾಣ ವಚನ ಸಮಾರಂಭಕ್ಕೆ ವಿಶೇಷ ಅತಿಥಿಯೊಬ್ಬರಿಗೆ ಆಹ್ವಾನ ನೀಡಲಾಗಿದೆ. ಚುನಾವಣೆ ಫಲಿತಾಂಶ ಪ್ರಕಟಗೊಂಡ ದಿನ ಅರವಿಂದ ಕೇಜ್ರಿವಾಲ್ ರೀತಿ ವೇಷ ತೊಟ್ಟು ಎಎಪಿ ಕಚೇರಿ ಮುಂದೆ ಕಾಣಿಸಿಕೊಂಡಿದ್ದ ಒಂದು ವರ್ಷದ ಮಗು ವಿಶೇಷ ಅತಿಥಿ.

ದೆಹಲಿ ಜನರಿಗೆ ಆಹ್ವಾನ
ರಾಮಲೀಲಾ ಮೈದಾನದಲ್ಲಿ ಪ್ರಮಾಣ ವಚನ ಸಮಾರಂಭಕ್ಕೆ ಸಿದ್ಧತೆ ನಡೆಯುತ್ತಿದೆ. ದೆಹಲಿಯ ಜನರಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಪತ್ರಿಕೆಗಳ ಮೂಲಕ ಜಾಹೀರಾತು ನೀಡಲಾಗಿದೆ. ದೆಹಲಿ ಜನರೇ ನಮ್ಮ ಗಣ್ಯರು ಎಂದು ಪಕ್ಷದ ನಾಯಕರು ಹೇಳಿದ್ದಾರೆ.












Click it and Unblock the Notifications