ಜೇಟ್ಲಿ ವಿರುದ್ಧದ ಕೇಸ್ ನಲ್ಲಿ ಕೇಜ್ರಿವಾಲ್ ಗೆ 5 ಸಾವಿರ ರು. ದಂಡ
ಕೇಂದ್ರ ಸಚಿವ ಅರುಣ್ ಜೇಟ್ಲಿ ವಿರುದ್ಧದ ಕೇಸ್ ನಲ್ಲಿ ಕೇಜ್ರಿವಾಲ್ ಗೆ ದಂಡ. ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿಗೆ 5 ಸಾವಿರ ದಂಡ ವಿಧಿಸಿದ ದೆಹಲಿ ಹೈಕೋರ್ಟ್.
ನವದೆಹಲಿ, ಸೆಪ್ಟೆಂಬರ್ 4: ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರು ತಮ್ಮ ವಿರುದ್ಧ ಹಾಕಿರುವ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ತಮ್ಮ ಅಹವಾಲನ್ನು ಸಲ್ಲಿಸಲು ನೀಡಲಾಗಿದ್ದ ಗಡುವನ್ನು ಮೀರಿದ ಕಾರಣಕ್ಕಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗೆ ದೆಹಲಿ ಹೈಕೋರ್ಟ್ 5 ಸಾವಿರ ರು. ದಂಡ ವಿಧಿಸಿದೆ.
2 ಕೋಟಿ ವಕೀಲಿಕೆ ಶುಲ್ಕಕ್ಕೆ ಕೇಜ್ರಿವಾಲ್ ಗೆ ಜೇಠ್ಮಲಾನಿ ಪತ್ರ
ಅರುಣ್ ಜೇಟ್ಲಿ ವಿರುದ್ಧದ ಪ್ರಕರಣವೊಂದರ ವಿಚಾರಣೆ ವೇಳೆ, ಕೇಜ್ರಿವಾಲ್ ಅವರ ಹಿಂದಿನ ವಕೀಲರಾದ ಜೇಠ್ಮಲಾನಿ ಅವರು, ಜೇಟ್ಲಿ ವಿರುದ್ಧ ಆಕ್ಷೇಪಾರ್ಹ ಶಬ್ದ ಪ್ರಯೋಗಿಸಿದ್ದರು. ಈ ಹಿನ್ನೆಲೆಯಲ್ಲಿ ಜೇಟ್ಲಿ ಅವರು ಕೇಜ್ರಿವಾಲ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದು 10 ಕೋಟಿ ರು. ಮೊತ್ತವನ್ನು ಪರಿಹಾರವಾಗಿ ಕೊಡಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ಈ ಪ್ರಕರಣದ ವಿಚಾರಣೆ ಸದ್ಯಕ್ಕೆ ದೆಹಲಿ ಹೈಕೋರ್ಟ್ ನಲ್ಲಿ ಕೆಲವು ತಿಂಗಳುಗಳಿಂದ ನಡೆಯುತ್ತಲೇ ಇದೆ. ಆದರೆ, ಏತನ್ಮಧ್ಯೆ, ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಅಹವಾಲೊಂದನ್ನು ಲಿಖಿತ ರೂಪದಲ್ಲಿ ಸಲ್ಲಿಸುವಂತೆ ನ್ಯಾಯಾಲಯ ಕೋರಿತ್ತು. ಇದಕ್ಕೆ 2 ವಾರಗಳ ಗಡುವು ವಿಧಿಸಿತ್ತು. ಅದರಂತೆ, ಅವರು ಜುಲೈ 26ರೊಳಗೆ ತಮ್ಮ ಅಹವಾಲನ್ನು ಸಲ್ಲಿಸಬೇಕಿತ್ತು.
ಜೇಟ್ಲಿ ಬಗ್ಗೆ ಅವಹೇಳನ ಪದ ಬಳಕೆಗೆ ಕೇಜ್ರಿಯದ್ದೇ ಕುಮ್ಮಕ್ಕು: ಜೇಠ್ಮಲಾನಿ
ಆದರೆ, ಈ ಗಡುವನ್ನು ದಾಟಿದ ನಂತರವಷ್ಟೇ ಕೇಜ್ರಿವಾಲ್ ತಮ್ಮ ಅಹವಾಲನ್ನು ಸಲ್ಲಿಸಿದ್ದರು. ಇದನ್ನು, ಸೋಮವಾರದ (ಸೆಪ್ಟಂಬರ್ 4) ವಿಚಾರಣೆ ವೇಳೆ ಜೇಟ್ಲಿ ಪರ ವಕೀಲರಾದ ಮಾಣಿಕ್ ಡೋಗ್ರಾ ಅವರು ನ್ಯಾಯಾಲಯದ ಗಮನಕ್ಕೆ ತಂದರು.
ಇದರಿಂದ ಅಸಮಾಧಾನಗೊಂಡ ನ್ಯಾಯಾಲಯದ ಜಂಟಿ ರಿಜಿಸ್ಟ್ರಾರ್ ಪಂಕಜ್ ಗುಪ್ತಾ ಅವರು, 5 ಸಾವಿರ ರು. ದಂಡ ವಿಧಿಸಿದರು. ಈ ಹಿಂದೆಯೂ, ಕೇಜ್ರಿವಾಲ್ ಅವರಿಗೆ ಇದೇ ಪ್ರಕರಣದಲ್ಲಿ 10 ಸಾವಿರ ರು. ದಂಡ ವಿಧಿಸಿದ್ದನ್ನು ಸ್ಮರಿಸಬಹುದು.